ನವದೆಹಲಿ: ಅ.14ರಂದು ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿವೆ. ಇದಕ್ಕಾಗಿ ಇಡೀ ಕ್ರೀಡಾ ಬಳಗವೇ ತುದಿಗಾಲಲ್ಲಿ ನಿಂತು ಕಾಯುತ್ತಿದೆ. ಇದರ ಮಧ್ಯೆ ಈ ಹಿಂದಿನ ವಿಶ್ವಕಪ್ ಟೂರ್ನಿಗಳಲ್ಲಿ ಸಾಂಪ್ರದಾಯಿಕ ಎದುರಾಳಿಗಳ ನಡುವಿನ ರೋಚಕ ಕ್ಷಣಗಳನ್ನು ಮೆಲಕು ಹಾಕಲಾಗುತ್ತಿದೆ. ಇದೀಗ ಟೀಮ್ ಇಂಡಿಯಾದ ಮಾಜಿ ಸ್ಫೋಟಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಕುರಿತಾದ ಆಸಕ್ತಿದಾಯಕ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.
2011ರ ವಿಶ್ವಕಪ್ನಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಸಮಿಫೈನಲ್ ಪಂದ್ಯದಲ್ಲಿ ಸಚಿನ್ ಕೇವಲ 15 ರನ್ಗಳಿಂದ ಶತಕ ವಂಚಿತರಾದರು. ಸೆಹ್ವಾಗ್ ಜತೆ ಇನ್ನಿಂಗ್ಸ್ ಆರಂಭಿಸಿದ ಸಚಿನ್ 85 ರನ್ ಗಳಿಸಿ ಬಲಗೈ ಆಫ್ ಬ್ರೇಕ್ ಸ್ಪಿನ್ನರ್ ಸಯೀದ್ ಅಜ್ಮಲ್ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ಈ ವೇಳೆ ಡಗೌಟ್ನಲ್ಲಿ ಕುಳಿತಿದ್ದ ಸೆಹ್ವಾಗ್, ಸಚಿನ್ ಕಡೆ ನೋಡಿ ಮುಗುಳ್ನಕ್ಕಿದ್ದರು. ಡಗೌಟ್ಗೆ ಬಂದಿದ್ದ ಸಚಿನ್ ಸೆಹ್ವಾಗ್ರನ್ನು ನೋಡಿ ನಗು ಬೀರಿದ್ದರು.
ಇದಾದ ನಂತರ ಉಭಯ ಆಟಗಾರರ ನಡುವೆ ನಡೆದ ಮಾತುಕತೆಯ ಕುರಿತು ಸೆಹ್ವಾಗ್ ಇದೀಗ ಬಹಿರಂಗಪಡಿಸಿದ್ದಾರೆ. ನೀನು ಏಕೆ ನಗುತ್ತಿದ್ದೀಯಾ ಎಂಬುದು ನನಗೆ ಗೊತ್ತಿದೆ ಎಂದು ಸಚಿನ್ ಹೇಳಿದರು. ಅದು ಹೇಗೆ ಎಂದು ನಾನು ಪ್ರಶ್ನೆ ಮಾಡಿದೆ. ನಾನು ಶತಕ ಬಾರಿಸಿದರೆ ಪಂದ್ಯವನ್ನು ಕಳೆದುಕೊಳ್ಳಬೇಕಾಗುತ್ತದೆ, ಶತಕಕ್ಕೂ ಮುಂಚೆಯೇ ಔಟಾಗಲಿ ಎಂದು ನೀನು ಯೋಚನೆ ಮಾಡುತ್ತಿದ್ದೆ ಎಂಬುದು ನನಗೆ ಗೊತ್ತು ಎಂದರು. ನನ್ನ ಮನಸ್ಸಿನಲ್ಲಿರುವುದು ನಿಮಗೆ ಹೇಗೆ ಗೊತ್ತಾಗುತ್ತದೆ ಎಂದು ಕೇಳಿದೆ. ನೀವು ಎರಡು ಶತಕಗಳನ್ನು ಬಾರಿಸಿದ್ದೀರಿ, ಅದರಲ್ಲಿ ಒಂದನ್ನು ನಾವು ಕಳೆದುಕೊಂಡಿದ್ದೇವೆ ಮತ್ತು ಎರಡನೆಯದು ಡ್ರಾನಲ್ಲಿ ಅಂತ್ಯವಾಯಿತು. ಸದ್ಯ ಪಾಕ್ ಪಂದ್ಯದಲ್ಲಿ ಸಚಿನ್ ನೂರು ಗಳಿಸಲಿಲ್ಲ ಮತ್ತು ಇದರಿಂದ ನಾವು ವಿಶ್ವಕಪ್ ಗೆಲ್ಲಲು ಸಾಧ್ಯವಾಯಿತು ದೇವರಿಗೆ ಧನ್ಯವಾದಗಳು ಎಂದು ಸೆಹ್ವಾಗ್ ಹೇಳಿದ್ದರು.
ನಿರ್ಣಾಯಕ ಪಂದ್ಯಗಳಲ್ಲಿ ಸಚಿನ್ ಶತಕ ಹೊಡೆದರೆ ಆ ಪಂದ್ಯವನ್ನು ಭಾರತ ಸೋಲುತ್ತದೆ ಎಂಬ ಒಂದು ಅಪನಂಬಿಕೆಯೂ ಸಹ ಈ ಹಿಂದೆ ಇತ್ತು. ಅದಕ್ಕೆ ಪುಷ್ಠಿ ನೀಡುವಂತಹ ಅನೇಕ ಘಟನೆಗಳು ಸಹ ನಡೆದಿವೆ. ಆದರೂ ಇಂದಿಗೂ ಸಚಿನ್ ಕ್ರಿಕೆಟ್ ಲೋಕದ ರಾಜನಾಗಿಯೇ ಉಳಿದಿದ್ದಾರೆ.
ಫೈನಲ್ನಲ್ಲಿ ಗೆಲುವು
2011ರ ವಿಶ್ವಕಪ್ ಟೂರ್ನಿಯನ್ನು ಭಾರತದಲ್ಲಿ ಆಯೋಜನೆ ಮಾಡಲಾಗಿತ್ತು. ಮೊಹಲಿಯಲ್ಲಿ ಪಾಕ್ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ 29 ರನ್ಗಳ ಅಂತರದಿಂದ ಗೆದ್ದು ಭಾರತ ಫೈನಲ್ಗೆ ಲಗ್ಗೆ ಇಟ್ಟಿತು. ಟ್ರೋಫಿಗಾಗಿ ಫೈನಲ್ನಲ್ಲಿ ಶ್ರೀಲಂಕಾ ವಿರುದ್ಧ ಸಣಸಾಡಿದ ಭಾರತ ಅಮೋಘ ಗೆಲುವು ದಾಖಲಿಸುವ ಮೂಲಕ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತ ವಿಶ್ವಕಪ್ ಟ್ರೋಫಿ ಮುತ್ತಿಟ್ಟಿತು.
ಅ.14ಕ್ಕಾಗಿ ಕಾತುರ
ಕಳೆದ ಭಾನುವಾರ (ಅ.8) ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಗೆಲುವು ದಾಖಲಿಸಿ, ಟೂರ್ನಿಯಲ್ಲಿ ಭಾರತ ಶುಭಾರಂಭ ಕಂಡಿದೆ. ಇಂದು (ಅ.11) ಅಫ್ಘಾನಿಸ್ತಾನ ವಿರುದ್ಧ ಭಾರತ ಸೆಣಸಾಡಲಿದ್ದು, ಭಾರತಕ್ಕೆ ಗೆಲುವು ಖಚಿತ ಎಂದು ಹೇಳಲಾಗಿದೆ. ಇಡೀ ಕ್ರೀಡಾ ಜಗತ್ತು ಎದುರು ನೋಡುತ್ತಿರುವ ಸಾಂಪ್ರದಾಯಿಕ ಎದುರಾಳಿಗಳ ಪಂದ್ಯ ಅ. 14ರಂದು ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಭಾರತ ತಂಡ: ರೋಹಿತ್ ಶರ್ಮ (ನಾಯಕ), ಕೆ.ಎಲ್. ರಾಹುಕ್ (ವಿಕೆಟ್ ಕೀಪರ್), ವಿರಾಟ್ ಕೊಹ್ಲಿ, ಇಶಾನ್ ಕಿಶಾನ್, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಕುಲದೀಪ್ ಯಾದವ್, ಜಸ್ಪ್ರಿತ್ ಬೂಮ್ರಾ, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಸೂರ್ಯಕುಮಾರ್ ಯಾದವ್ ಮತ್ತು ಶಾರ್ದೂಲ್ ಠಾಕೂರ್. (ಏಜೆನ್ಸೀಸ್)
1996ರ ವಿಶ್ವಕಪ್ ರೋಚಕ ಕ್ಷಣ: ಕನ್ನಡಿಗನನ್ನು ಕೆಣಕಿ ಜಗತ್ತಿನೆದುರು ಮುಖಭಂಗ ಅನುಭವಿಸಿತ್ತು ಪಾಕ್!
ಚೆಪಾಕ್ನಲ್ಲೂ ಮೈದಾನಕ್ಕಿಳಿದು ಗೊಂದಲ ಸೃಷ್ಟಿಸಿದ ಜಾರ್ವೋ! : ಬಿಸಿ ಮುಟ್ಟಿಸಿದ ಐಸಿಸಿ
ವಿಶ್ವಕಪ್ ಕ್ರಿಕೆಟ್: ತನ್ನ ಮೊದಲ ಪಂದ್ಯದಲ್ಲೇ ಭರ್ಜರಿ ಜಯ ಗಳಿಸಿದ ಭಾರತ