ಆಲ್ಬರ್ಟಾ (ಕೆನಡಾ): ಮಕ್ಕಳ ಸಲುವಾಗಿ ಅಪ್ಪ-ಅಮ್ಮ ಮಾಡುವ ತ್ಯಾಗಗಳಿಗೆ ಲೆಕ್ಕವೇ ಇಲ್ಲ ಬಿಡಿ. ದೇಶ,ಪ್ರಾಂತ್ಯ ಯಾವುದಾದರೇನು ಪಾಲಕರ ತ್ಯಾಗಕ್ಕೆ ಬೆಲೆ ಕಟ್ಟಲಾಗದ್ದು. ಮಗನಿಗಾಗಿ ಅಪ್ಪ ಮಾಡಿದ ಒಂದು ಕೆಲಸ ಇದೀಗ ಭಾರಿ ವೈರಲ್ ಆಗಿದ್ದು, ಈ ಅಪ್ಪ ಎಲ್ಲರಿಂದಲೂ ಭೇಷ್ ಭೇಷ್ ಎನಿಸಿಕೊಂಡಿದ್ದಾರೆ.
ಡೆರೆಕ್ ಪ್ರೂ ಸೀನಿಯರ್ ಮಾಡಿರುವ ಈ ಸಾಹಸ ತನ್ನ ಎಂಟು ವರ್ಷದ ಮಗನಿಗಾಗಿ. ಆತನ ಮಗನ ಹೆಸರು ಡೆರೆಕ್ ಪ್ರೂ ಜ್ಯೂನಿಯರ್. ಈ ಜ್ಯೂನಿಯರ್ಗೆ ಹುಟ್ಟಿನಿಂದಲೇ ದೇಹದ ಮೇಲೆ ದೊಡ್ಡ ಮಚ್ಚೆಯಿದೆ. ಮಗ ಬೆಳೆದಂತೆ ಮಚ್ಚೆಯ ಗಾತ್ರವೂ ಬೆಳೆಯುತ್ತಾ ಸಾಗಿದೆ.
ಇದೇನು ದೊಡ್ಡ ವಿಷಯ ಆಗಿರಲಿಲ್ಲ. ಅದೂ ದೇಹದ ಮೇಲೆ ಇರುವ ಕಾರಣ, ಮಗ ಅಂಜುವ ಪ್ರಮೇಯವೇ ಇರಲಿಲ್ಲ. ಆದರೂ ಈ ಜ್ಯೂನಿಯರ್ಗೆ ತುಂಬಾ ಸಂಕೋಚವಾಗುತ್ತಿತ್ತು. ಸ್ವಿಮ್ಮಿಂಗ್ ಎಂದರೆ ಮಗನಿಗೆ ಪಂಚಪ್ರಾಣ. ಆದರೆ ಬೇರೆ ಟೈಂನಲ್ಲಿ ಅಲ್ಲದಿದ್ದರೂ ಸ್ವಿಮ್ಮಿಂಗ್ ವೇಳೆ ಷರ್ಟ್ ಬಿಚ್ಚಲೇಬೇಕಲ್ಲ. ಅದೇ ಈ ಮಗನಿಗೆ ಅಂಜಿಕೆಯಾಗುತ್ತಿತ್ತು.
ಯಾರಾದರೂ ತನ್ನನ್ನು ನೋಡಿ ನಕ್ಕರೆ ಎಂಬ ಅಳುಕು ಮಗನಿಗೆ ಇದ್ದುದರಿಂದ ಷರ್ಟ್ ಬಿಚ್ಚಲು ಕೊಡುತ್ತಿರಲಿಲ್ಲ. ಆದ್ದರಿಂದ ತಾನು ಈಜುಗಾರನಾಗಬೇಕೆಂಬ ಮಗನ ಆಸೆಗೆ ಪೆಟ್ಟು ಬಿದ್ದದ್ದು ಈ ಅಪ್ಪ ಸೀನಿಯರ್ಗೆ ನೋಡಲು ಆಗಲಿಲ್ಲ. ಆದರೆ ಆ ಮಚ್ಚೆಯನ್ನು ಶಸ್ತ್ರಚಿಕತ್ಸೆಯೋ ಅಥವಾ ಇನ್ನಾವುದೇ ರೀತಿಯಲ್ಲಿ ತೆಗೆದುಹಾಕಿ ಮಗನ ಜೀವಕ್ಕೆ ಅಪಾಯ ತಂದೊಡ್ಡಲು ಅಪ್ಪನಿಗೆ ಇಷ್ಟವಿರಲಿಲ್ಲ. ಅದಕ್ಕಾಗಿ ಅವನೊಂದು ಪ್ಲ್ಯಾನ್ ಮಾಡಿದ. ಈ ಪ್ಲ್ಯಾನೇ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಪ್ಪನಿಗೆ ಎಲ್ಲರೂ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.
ಅಷ್ಟಕ್ಕೂ ಡೆರೆಕ್ ಪ್ರೂ ಸೀನಿಯರ್ ಮಾಡಿದ್ದು ಏನೆಂದರೆ, ತನ್ನ ಶರೀರದ ಮೇಲೆ ಅಂದರೆ ಮಗನಿಗೆ ಎಲ್ಲಿ ಮಚ್ಚೆ ಇದೆಯೋ ಅದೇ ಜಾಗದಲ್ಲಿ, ಅದೇ ಶೇಪ್ನಲ್ಲಿ ಹಚ್ಚೆ ಹಾಕಿಸಿಕೊಂಡಿದ್ದಾನೆ. ಹಚ್ಚೆ ಎಂದರೆ ಅದು ಸಾಮಾನ್ಯವಾದುದಲ್ಲ. ಬದಲಿಗೆ ಶಾಶ್ವತವಾಗಿ ಇರುವಂಥದ್ದು. ಸೂಜಿಯ ಮೊನೆಯನ್ನು ಬೆಂಕಿಯಲ್ಲಿ ಕಾಯಿಸಿ ಚುಚ್ಚಿ ಅದರ ಮಾರ್ಕ್ ಶಾಶ್ವತವಾಗಿ ಇರುವಂತೆ ಮಾಡುವ ಹಚ್ಚೆ ಇದು.
ಇದಕ್ಕಾಗಿ ಸತತ 30 ಗಂಟೆ ಹಚ್ಚೆ ಪ್ರಕ್ರಿಯೆಗೆ ಒಳಗಾಗಿರುವ ಡೆರೆಕ್ ಪ್ರೂ ಸೀನಿಯರ್ ಕೊನೆಗೂ ತನ್ನ ಮಗನಂತೆಯೇ ಮಚ್ಚೆಯನ್ನು ಹಾಕಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ತನ್ನ ಅಪ್ಪನಿಗೂ ಹೀಗೆ ಮಚ್ಚೆ ಇದೆ ಎಂದು ಮಗನಿಗೆ ತಿಳಿದರೆ, ಆತನ ಅಂಜಿಕೆ ದೂರವಾಗುತ್ತದೆ ಎನ್ನುವುದು ತಂದೆಯ ಅನಿಸಿಕೆ. ತಾನು ಷರ್ಟ್ ಬಿಚ್ಚಿ ಆರಾಮಾಗಿ ತಿರುಗಾಡಿದರೆ ತನ್ನ ಮಗನಿಗೂ ಧೈರ್ಯ ಬರುತ್ತದೆ ಎನ್ನುವ ಕಾರಣಕ್ಕೆ ಸತತ 30 ಗಂಟೆ ಸೂಜಿಯ ನೋವನ್ನು ಸಹಿಸಿಕೊಂಡಿದ್ದಾನೆ ಈ ಅಪ್ಪ.
ಅದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಶೇರ್ ಆಗುತ್ತಿದೆ. ಅಂದಹಾಗೆ ಅಪ್ಪನ ಯೋಚನೆಯೂ ಫಲಿಸಿದೆಯಂತೆ. ಮಗನಿಗೆ ಈಗ ಯಾವುದೇ ರೀತಿಯ ಅಂಜಿಕೆ ಇಲ್ಲವಂತೆ. ಇದರಿಂದ ಡೆರೆಕ್ ಪ್ರೂ ಸೀನಿಯರ್ ತುಂಬಾ ಖುಷಿಯಿಂದ ಇದ್ದಾರೆ.
ನಿಗೂಢವಾಗಿ ಮೃತಪಟ್ಟ’ಡರ್ಟಿ ಪಿಕ್ಚರ್’ ನಟಿ ಆರ್ಯಾ ಬ್ಯಾನರ್ಜಿ ಮರಣೋತ್ತರ ಪರೀಕ್ಷೆಯಲ್ಲಿ ಅಸಲಿಯತ್ತು ಬಯಲು…
ಸರ್ಕಾರಿ ನೌಕರರಾಗಬೇಕೆಂದು ಮುಷ್ಕರಕ್ಕೆ ಹೋದವರಿಗೆ ಬಿಎಂಟಿಸಿಯಿಂದ ಬಿಗ್ ಶಾಕ್!