ಬೆಂಗಳೂರು: ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಿಸಬೇಕು. ಸರ್ಕಾರಿ ಸವಲತ್ತುಗಳನ್ನು ನೀಡಬೇಕು ಎಂಬ ಬೇಡಿಕೆಗಳನ್ನು ಇಟ್ಟು ಮುಷ್ಕರಕ್ಕೆ ಇಳಿದಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ನೌಕರಿಗೆ ದೊಡ್ಡದೊಂದು ಶಾಕ್ ಅನ್ನು ಬಿಎಂಟಿಸಿ ನೀಡಿದೆ.
ಅದೇನೆಂದರೆ ಹಲವಾರು ಮಂದಿ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ರಜೆಯನ್ನು ಪಡೆದುಕೊಂಡಿಲ್ಲ. ರಜೆ ಮಂಜೂರು ಮಾಡಿಕೊಳ್ಳದೇ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಇದು ಕರ್ತವ್ಯಲೋಪ ಎಂದು ಪರಿಗಣಿಸಿರುವ ಸಾರಿಗೆ ಸಂಸ್ಥೆ ಕೆಲಸಕ್ಕೆ ಗೈರಾಗಿರುವ ದಿನಗಳಂದು ವೇತನವನ್ನು ಕಡಿತಗೊಳಿಸಲು ನಿರ್ಧರಿಸಿರುವುದಾಗಿ ತಿಳಿದುಬಂದಿದೆ.
ಇಷ್ಟೇ ಅಲ್ಲದೇ, ರಜೆಯನ್ನು ಪಡೆದುಕೊಳ್ಳದೇ ಹೋದ ನೌಕಕರ ಅಗತ್ಯ ಸೇವೆ ಮತ್ತು ಸಾರ್ವಜನಿಕ ಉಪಯುಕ್ತ ಸೇವಾ ಸಂಸ್ಥೆ ಆದೇಶದ ಅನ್ವಯ ಶಿಸ್ತು ಕ್ರಮಕ್ಕೆ ಆದೇಶವನ್ನೂ ಸಂಸ್ಥೆ ಹೊರಡಿಸಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಮತ್ತು ಇತರ ಸಂಘಟನೆಗಳು ಜತೆಗೂಡಿ ನಡೆದ ವಿಧಾನಸೌಧ ಚಲೋ ನಂತರದಲ್ಲಿ ಸಹ ಮುಂಚಿತವಾಗಿ ಯಾವುದೇ ರೀತಿಯ ಮುಷ್ಕರದ ನೋಟಿಸ್ ನೀಡದೆ ಅರ್ನಿಷ್ಟಾವಧಿ ಮುಷ್ಕರ ಹೂಡಿರುವುದು ಕಾನೂನು ಬಾಹಿರವಾಗಿದೆ ಎಂದು ತಿಳಿಸಿದೆ.
ಈ ಕುರಿತು ಬಿಎಂಟಿಸಿ ಜಾಗೃತ ಹಾಗೂ ಭದ್ರತಾ ವಿಭಾಗದಿಂದ ಸುತ್ತೋಲೆಯನ್ನು ಹೊರಡಿಸಲಾಗಿದ್ದು, ಅವುಗಳಲ್ಲಿ ಇವುಗಳ ಬಗ್ಗೆ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ. ಈಗಾಗಲೇ ರಜೆ ಪಡೆದುಕೊಳ್ಳದೇ ಹೋದ ನೌಕರರ ವೇತನ ಕಡಿತಗೊಳಿಸುವುದು, ಶಿಸ್ತು ಕ್ರಮ ಜರುಗಿಸುವುದು ಹಾಗೂ ಹೊಸದಾಗಿ ಯಾವುದೇ ರಜೆ ಮಂಜೂರು ಮಾಡದಿರುವುದು ಸೇರಿದಂತೆ ಕೆಲವೊಂದು ಮಾಹಿತಿಗಳನ್ನು ಈ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಈಗಾಗಲೇ ರಜೆ ಪಡೆದುಕೊಂಡು ಮುಷ್ಕರಕ್ಕೆ ಹೋದವರಿಗೆ ಈ ನಿಯಮ ಅನ್ವಯ ಆಗುವುದಿಲ್ಲ ಎಂದೂ ಸಂಸ್ಥೆ ಸ್ಪಷ್ಟಪಡಿಸಿದೆ. ಜತೆಗೆ, ವಾರದ ರಜೆ ಮತ್ತು ದೀರ್ಘಾವಧಿ ರಜೆಯಲ್ಲಿರುವ ನೌಕರರಿಗೂ ಇದು ಅನ್ವಯಿಸುವುದಿಲ್ಲ ಎಂದು ಸಂಸ್ಥೆ ಹೇಳಿದೆ.
ಇದಾಗಲೇ ಮುಷ್ಕರ ಮೂರನೆಯ ದಿನಕ್ಕೆ ಕಾಲಿಟ್ಟಿದ್ದು, ಇಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ವಿಧಾನಸೌಧ ಚಲೋ ಹಾಗೂ ಅರೆಬೆತ್ತಲೆ ಕಾಲ್ನಡಿಗೆ ಜಾಥಾ ಹಮ್ಮಿಕೊಂಡಿರುವುದಾಗಿ ತಿಳಿದುಬಂದಿದೆ.
7 ವರ್ಷ ಬಳಸಿಕೊಂಡು ಬೇರೆ ಮದ್ವೆಯಾಗಿದ್ದಾನೆ- ಸತ್ತುಹೋಗೋಣ ಎನಿಸುತ್ತಿದೆ, ಪ್ಲೀಸ್ ಏನಾದ್ರೂ ಪರಿಹಾರ ಹೇಳಿ…
ಎಸ್ಎಸ್ಎಲ್ಸಿ, ಡಿಪ್ಲೋಮಾ, ಪದವೀಧರರಿಗೆ ಕೇಂದ್ರ ಸರ್ಕಾರದ 74 ಹುದ್ದೆಗಳಿಗೆ ಆಹ್ವಾನ
ಮುಗ್ಧ ರೈತರ ಹೆಸರಲ್ಲಿ ನಡೀತೀರೋ ಪ್ರತಿಭಟನೆಯ ಇನ್ನೊಂದು ಕರಾಳಮುಖ ಬಯಲು!