ನವದೆಹಲಿ: ಮುಂದಿನ ಆರು ವಾರಗಳಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಯನ್ನು ಘೋಷಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ.
ಈ ಹಿನ್ನೆಲೆಯಲ್ಲಿ ಮಾರ್ಚ್ ತಿಂಗಳಿನಲ್ಲಿ ಬಿಬಿಎಂಪಿ ಚುನಾವಣೆ ನಡೆಯಬಹುದು ಎಂಬ ಲೆಕ್ಕಾಚಾರ ತಲೆಕೆಳಗಾಗಿದೆ.
198 ವಾರ್ಡ್ಗಳಿರುವ ಬಿಬಿಎಂಪಿಯಲ್ಲಿ 243 ವಾರ್ಡ್ಗಳನ್ನು ಹೆಚ್ಚಿಸಲು ಮಸೂದೆ ಮಂಡಿಸಲಾಗಿದೆ. ಇದಕ್ಕೆ ಕಾಲಾವಕಾಶ ಬೇಕು. ಅಲ್ಲದೆ ಬೆಂಗಳೂರಿಗೆ ಪ್ರತ್ಯೇಕ ಕಾಯ್ದೆ ರಚನೆ ಮಾಡಬೇಕಾಗಿದೆ ಎಂದು ಸರ್ಕಾರ ನ್ಯಾಯಾಲಯದ ಮುಂದೆ ಕಾಲಾವಕಾಶ ಕೋರಿತ್ತು. ಆದರೆ 198 ವಾರ್ಡ್ಗಳಿಗೇ ಚುನಾವಣೆ ನಡೆಸುವಂತೆ ಹೈಕೋರ್ಟ್ ಇದೇ 4ರಂದು ಹೇಳಿತ್ತು.
ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಆದೇಶವನ್ನು ಬಿಬಿಎಂಪಿ ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಿತ್ತು. ಈ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಬೋಪಣ್ಣ ಮತ್ತು ವಿ.ರಾಮಸುಬ್ರಮಣಿಯನ್ ನೇತೃತ್ವದ ಪೀಠ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದೆ.
ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಚುನಾವಣಾ ಆಯೋಗ ಮತ್ತು ಮೂಲ ಅರ್ಜಿದಾರ ಎಂ.ಶಿವರಾಜು, ಅಬ್ದುಲ್ ವಾಜಿದ್ ಮತ್ತು ರವಿ ಜಗನ್ ಅವರಿಗೆ ನೋಟಿಸ್ ಜಾರಿಗೊಳಿಸಿರುವ ಪೀಠ, ವಿಚಾರಣೆಯನ್ನು 2021ರ ಫೆಬ್ರವರಿ 5ಕ್ಕೆ ಮುಂದೂಡಿದೆ.
ರಾಜ್ಯ ಸರ್ಕಾರ ಪಾಲಿಕೆಯನ್ನು ಈಗಿರುವ 198 ವಾರ್ಡ್ಗಳಿಂದ 243 ವಾರ್ಡ್ಗಳಿಗೆ ಹೆಚ್ಚಿಸಲು ಕೆಎಂಸಿ ಕಾಯ್ದೆಗೆ ತಿದ್ದುಪಡಿ ತಂದಿರುವ ಕ್ರಮ ಸರಿಯಾಗಿದೆಯಾದರೂ ಈ ತಿದ್ದುಪಡಿ ಚುನಾವಣೆಗೆ ಅನ್ವಯಿಸಿಲ್ಲ ಎಂದು ಕೋರ್ಟ್ ಹೇಳಿತ್ತು, ಜತೆಗೆ ಪಾಲಿಕೆಗೆ ಸಂವಿಧಾನದ ವಿಧಿ 243 (ಯು) ಪ್ರಕಾರ ಚುನಾವಣೆ ನಡೆಸಬೇಕು ಎಂದು ನಿರ್ದೇಶನ ನೀಡಿತ್ತು. ಈ ಆದೇಶವು ಸರಿಯಾಗಿಲ್ಲ. ಒಂದು ತಿಂಗಳಿನೊಳಗೆ ಮೀಸಲಾತಿ ಅಧಿಸೂಚನೆ ಹೊರಡಿಸಬೇಕು, ಆರು ವಾರಗಳಲ್ಲಿ ಚುನಾವಣಾ ವೇಳಾಪಟ್ಟಿ ಹೊರಡಿಸಬೇಕು ಎಂದು ಕೋರ್ಟ್ ಚುನಾವಣಾ ಆಯೋಗಕ್ಕೆ ಹೇಳಿತ್ತು.
ಈ ಆದೇಶ ಸರಿಯಾಗಿಲ್ಲ. ವಾರ್ಡ್ ಹೆಚ್ಚಿಸುವ ಕುರಿತು ಇದಾಗಲೇ ತಿದ್ದುಪಡಿ ತಂದಿರುವ ಹಿನ್ನೆಲೆಯಲ್ಲಿ ಹೈಕೋರ್ಟ್ ನಿರ್ದೇಶನದಂತೆ 198 ವಾರ್ಡ್ಗಳಿಗೆ ಚುನಾವಣೆ ಸಾಧ್ಯವಿಲ್ಲ ಎನ್ನುವುದು ಬಿಬಿಎಂಪಿ ವಾದವಾಗಿತ್ತು. ಈ ವಾದವನ್ನು ಸುಪ್ರೀಂಕೋರ್ಟ್ ಮಾನ್ಯ ಮಾಡಿದೆ.
ಶೀಲಗೆಟ್ಟರೂ ಅಡ್ಡಿಲ್ಲ, ಮಗುಬೇಕೆಂದು ನಿಮ್ಮನ್ನು ಬಳಸಿಕೊಂಡಳಾಕೆ- ನೀವು ಚಿಂತಿಸಿ ಪ್ರಯೋಜನವಿಲ್ಲ…
ರೈತರನ್ನು ಉದ್ದೇಶಿಸಿ ಪ್ರಧಾನಿ ಭಾಷಣ- 23 ಸಾವಿರ ಗ್ರಾಮಗಳಲ್ಲಿ ಆಲಿಕೆ: ಮೋದಿ ಹೇಳಿದ್ದೇನು?
ಬರಿದಾಗುತ್ತಿದೆ ದೀದಿ ಸಂಪುಟ: ನಿನ್ನೆ ಇಬ್ಬರಾಯ್ತು, ಇಂದು ಇನ್ನೊಬ್ಬ ಶಾಸಕನ ರಾಜೀನಾಮೆ!