ಕೋಲ್ಕತಾ: ಕಳೆದ ಶನಿವಾರದಂದು ಲಘು ಹೃದಯಾಘಾತಕ್ಕೊಳಗಾಗಿ ಕೋಲ್ಕತದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಅವರ ಆರೋಗ್ಯ ಸುಧಾರಿಸುತಲಿದ್ದು, ನಾಳೆ ಬುಧವಾರ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆಗಳು ಇವೆ.
48 ವರ್ಷದ ಗಂಗೂಲಿಯವರು ಸದ್ಯ ಆಯಂಜಿಯೊಪ್ಲಾಸ್ಟಿಗೆ ಒಳಗಾಗಿದ್ದಾರೆ. ಖ್ಯಾತ ಹೃದ್ರೋಗ ತಜ್ಞ ಡಾ.ದೇವಿ ಶೆಟ್ಟಿ ಅವರು ವುಡ್ಲ್ಯಾಂಡ್ಸ್ ಆಸ್ಪತ್ರೆಗೆ ಭೇಟಿ ನೀಡಿ ಸೌರವ್ ಗಂಗೂಲಿ ಆರೋಗ್ಯ ಪರಿಶೀಲಿಸಿದರು ಹಾಗೂ ಚಿಕಿತ್ಸೆ ನೀಡಲು ಹಾಜರಾಗಿದ್ದ ವೈದ್ಯರ ತಂಡದ ಜತೆ ಚರ್ಚಿಸಿ ಟೀಮ್ ಇಂಡಿಯಾ ಮಾಜಿ ನಾಯಕನನ್ನು ಬುಧವಾರ ಡಿಸ್ಚಾರ್ಜ್ ಮಾಡಲು ಸೂಚಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿರುವ ಡಾ.ದೇವಿ ಶೆಟ್ಟಿ ಅವರು, ಸೌರವ್ ಗಂಗೂಲಿ ಅವರ ಹೃದಯ 20 ವರ್ಷದವರಿದ್ದಾಗ ಹೇಗಿದ್ದರೋ ಅಷ್ಟೇ ಆರೋಗ್ಯವಾಗಿದೆ. ಅವರು ಮ್ಯಾರಥಾನ್ ಓಡಬಹುದು, ವಿಮಾನ ಹಾರಾಟ ನಡೆಸಬಹುದು ಎಂದಿದ್ದಾರೆ.
ಇದನ್ನೂ ಓದಿ: ರಾಜಕೀಯದವರ ಒತ್ತಡವೇ ಗಂಗೂಲಿಗೆ ಹೀಗಾಗಲು ಕಾರಣ: ಮಾಜಿ ಸಚಿವನಿಂದ ಶಾಕಿಂಗ್ ಹೇಳಿಕೆ
ಈಗ ಲಘು ಹೃದಯಾಘಾತಕ್ಕೆ ಒಳಗಾಗಿದ್ದರಷ್ಟೇ. ಇದು ಸೌರವ್ ಗಂಗೂಲಿಯವರ ಜೀವನಶೈಲಿ ಅಥವಾ ಜೀವಿತಾವಧಿಯ ಮೇಲೆ ಪರಿಣಾಮ ಬೀರುವುದಿಲ್ಲ. ಅವರು ಬೇರೆಯವರಂತೆ ಸಾಮಾನ್ಯ ಜೀವನವನ್ನು ನಡೆಸಲಿದ್ದಾರೆ. ಕ್ರಿಕೆಟ್ಗೆ ಬೇಕಾದರೂ ಹಿಂದಿರುಗಬಹುದು. ಅವರು ಮನೆಗೆ ತಲುಪಿದ ಕೂಡಲೇ ಮನೆಯಿಂದ ಕೆಲಸ ಮಾಡಲು ಪ್ರಾರಂಭಿಸಬಹುದು ಎಂದು ದೇವಿ ಶೆಟ್ಟಿ ಹೇಳಿದ್ದಾರೆ.
ಗಂಗೂಲಿಯವರ ಕುರಿತು ಮಾತನಾಡಿದ ವುಡ್ಲ್ಯಾಂಡ್ಸ್ ಆಸ್ಪತ್ರೆಯ ಎಂಡಿ ಹಾಗೂ ಸಿಇಓ ಡಾ. ರೂಪಾಲಿ ಬಸು, ಮನೆಯಲ್ಲಿಯೂ ಅವರ ಮೇಲೆ ತೀವ್ರ ನಿಗಾ ಇಡಲಾಗುವುದು ಎಂದಿದ್ದಾರೆ.
ಜನವರಿ 2 ರಂದು ತಮ್ಮ ಮನೆಯ ಜಿಮ್ನ ಟ್ರೆಡ್ ಮಿಲ್ನಲ್ಲಿ ಓಡುತ್ತಿದ್ದ ವೇಳೆ ಸೌರವ್ ಗಂಗೂಲಿ ಅವರ ಎದೆಯಲ್ಲಿ ನೋವು ಕಾಣಿಸಿಕೊಂಡಿತ್ತು. ಕಳೆದ ಶನಿವಾರ ಒಂದು ಗಂಟೆಗೆ ಆಸ್ಪತ್ರೆಗೆ ದಾಖಲಾದಾಗ ಗಂಗೂಲಿ ಅವರ ಪಲ್ಸ್ 70/ನಿಮಿಷ, ಬಿಪಿ 130/80 ಎಂಎಂ ಇತ್ತು ಹಾಗೂ ಇತರೆ ಕ್ಲಿನಿಕಲ್ ಪ್ಯಾರಾಮೀಟರ್ಗಳು ಸಾಮಾನ್ಯ ಸ್ಥಿತಿಯಲ್ಲಿವೆ,” ಎಂದು ವುಡ್ಲ್ಯಾಂಡ್ಸ್ ಆಸ್ಪತ್ರೆಯ ಮೆಡಿಕಲ್ ಬುಲೆಟಿನ್ನಲ್ಲಿ ತಿಳಿಸಲಾಗಿತ್ತು.
VIDEO: ಪೈಲಟ್ಗಳಿಗೆ ಕಾಣಿಸುತ್ತಿದ್ದಾನೆ ನಿಗೂಢ ವ್ಯಕ್ತಿ! ಆಕಾಶದಲ್ಲಿ ಹಾರುತ್ತಿರುವವ ಯಾರೀತ?
ಕಾರಿನ ಮೇಲೆ ನಾಲ್ಕು ಬೆರಳಿನ ವಿಚಿತ್ರ ಹೆಜ್ಜೆ ಗುರುತು: ಉತ್ತರ ಸಿಗದ ಪ್ರಶ್ನೆಗಳು..!