ಚೆನ್ನೈ: ತಮಿಳೂನಾಡಿನ ಕುನೂರು ಬಳಿ ನಡೆದ ವಿಮಾನ ಅಪಘಾತದಲ್ಲಿ ಬದುಕಿ ಉಳಿದಿರುವ ಏಕೈಕ ಯೋಧ ಐಎಎಫ್ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರನ್ನು ಬೆಂಗಳೂರಿಗೆ ಕರೆತರಲು ಸಕಲ ಸಿದ್ಧತೆ ನಡೆಸಲಾಗಿದೆ.
ತಮಿಳುನಾಡಿನ ವೆಲ್ಲಿಂಗ್ಟನ್ ಮಿಲಿಟರಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ. ಈ ಕುರಿತು ಅವರ ತಂದೆ ನಿವೃತ್ತ ಕರ್ನಲ್ ಕೆ.ಪಿ.ಸಿಂಗ್ ಖುದ್ದು ಮಾಹಿತಿ ನೀಡಿದ್ದಾರೆ. ಆದರೆ ಈಗಲೂ ಸಾವು ಬದುಕಿನ ನಡುವೆ ಅವರು ಹೋರಾಡುತ್ತಿದ್ದು, ಶೇ 45ರಷ್ಟು ಸುಟ್ಟ ಗಾಯಗಳಾಗಿವೆ.
ಈ ಬಗ್ಗೆ ಅವರ ತಂದೆ ಪ್ರತಿಕ್ರಿಯೆ ನೀಡಿದ್ದು, ನಾನೀಗ ಮುಂಬೈನಿಂದ ವೆಲ್ಲಿಂಗ್ಟನ್ಗೆ ತಲುಪಿದ್ದೇನೆ. ಬೆಂಗಳೂರಿಗೆ ಶಿಫ್ಟ್ ಮಾಡಲಾಗುತ್ತಿದೆ. ಆದರೆ ಈಗಲೇ ಏನೂ ಹೇಳಲಾರೆ. ಯಾವುದೂ ಖಚಿತವಿಲ್ಲ ಎಂದಿದ್ದಾರೆ. ಆದರೂ ಬದುಕುಳಿಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ತೇಜಸ್ ಏರ್ಕ್ರಾಫ್ಟ್ ಟೆಸ್ಟ್ ಹಾರಾಟ ನಡೆಸುತ್ತಿದ್ದ ವೇಳೆ ಕೂಡ ಇದೇ ರೀತಿ ಅಪಾಯವಾಗಿತ್ತು. ಅಂದು ಕೂದಲೆಳೆ ಅಂತರದಲ್ಲಿ ಬದುಕಿ ಬಂದಿದ್ದ ವರುಣ್. (ಈ ಸಾಹಸಕ್ಕೆ ಅವರಿಗೆ ಶೌರ್ಯಚಕ್ರ ಪ್ರಶಸ್ತಿ ಕೊಟ್ಟು ಪುರಸ್ಕರಿಸಲಾಗಿದೆ) ಈ ಬಾರಿಯೂ ಗೆದ್ದು ಬರುತ್ತಾನೆ ಎಂದಿದ್ದಾರೆ.
ಕೆ.ಪಿ.ಸಿಂಗ್ ಸದ್ಯ ಮುಂಬೈನಲ್ಲಿರುವ ತಮ್ಮ ಕಿರಿಯ ಪುತ್ರ ತನುಜ್ ಮನೆಯಲ್ಲಿದ್ದಾರೆ. ತನುಜ್ ಭಾರತೀಯ ನೌಕಾಪಡೆಯಲ್ಲಿ ಲೆಫ್ಟಿನೆಂಟ್ ಕಮಾಂಡರ್. ತಮ್ಮ ಇಬ್ಬರೂ ಪುತ್ರರ ಬಗ್ಗೆ ಹೆಮ್ಮೆಯಿಂದ ಮಾತನಾಡುವ ಸಿಂಗ್ ಅವರು, ವರುಣ್ ಸಿಂಗ್ ಬಗ್ಗೆ ಹೆಮ್ಮೆಯಿದೆ. ಆತ ಫೈಟರ್ ಮತ್ತು ಈ ಜೀವನ್ಮರಣದ ಹೋರಾಟದಲ್ಲೂ ಗೆದ್ದು ಬರುತ್ತಾನೆ ಎಂಬ ನಂಬಿಕೆಯಿದೆ ಎಂದಿದ್ದಾರೆ.
ವಿಧವೆಯರು, ಮಕ್ಕಳ ಬಾಳಿಗೆ ಬೆಳಕಾಗಿದ್ದರು ರಾವತ್ ಪತ್ನಿ: ಅನಾಥವಾಗೋಯ್ತು ಅನಾಥಾಶ್ರಮ- ಎಲ್ಲೆಡೆ ಕಣ್ಣೀರಧಾರೆ