ಬೆಂಗಳೂರು: ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳ ಕುರಿತಾಗಿ ಇದ್ದ ಗೊಂದಲ ನಿವಾರಣೆಯಾದ ಬೆನ್ನಲ್ಲೇ ಇದೀಗ ಶಾಲಾ- ಕಾಲೇಜು ಆರಂಭದ ಕುರಿತಂತೆ ಭಾರಿ ಚರ್ಚೆ ಶುರುವಾಗಿದೆ. ಕಳೆದ ವರ್ಷ ಕರೊನಾದಿಂದಾಗಿ ಹಲವು ಕಡೆಗಳಲ್ಲಿ ಮಕ್ಕಳ ಶೈಕ್ಷಣಿಕ ಭವಿಷ್ಯದ ಮೇಲೆ ಭಾರಿ ಪರಿಣಾಮ ಉಂಟಾಗಿದ್ದು, ಈ ವರ್ಷದ ಗತಿಯೇನು ಎಂಬ ಚಿಂತೆಯಲ್ಲಿದ್ದಾರೆ ಹಲವು ಪಾಲಕರು.
ಇದಾಗಲೇ ಆನ್ಲೈನ್ ತರಗತಿಗಳು ಹಲವೆಡೆ ಆರಂಭವಾಗಿದ್ದರೂ, ಶಾಲಾ- ಕಾಲೇಜು ತೆರೆಯಲು ಚರ್ಚೆ ಶುರುವಾಗಿದೆ. ಆಗಸ್ಟ್ನಿಂದ ಹಂತ ಹಂತವಾಗಿ 10,12 ನೇ ತರಗತಿ ನಂತರ 8,9 ಮತ್ತು 11 ನೇ ತರಗತಿ ಆರಂಭಿಸುವುದು ಬಳಿಕ 5,6 ಮತ್ತು 7 ನೇ ತರಗತಿ ಮಕ್ಕಳಿಗೆ ವಿದ್ಯಾಗಮ ಆರಂಭಿಸುವ ಕುರಿತು ರಾಜ್ಯಸರ್ಕಾರ ಚಿಂತನೆ ನಡೆಸಿದೆ.
ಆದರೆ ಈ ಬಗ್ಗೆ ಇನ್ನೂ ಸ್ಪಷ್ಟ ನಿಲುವು ತಳೆಯುವುದು ಸರ್ಕಾರಕ್ಕೂ ಗೊಂದಲವಾಗಿದೆ. ಈ ಕುರಿತು ಮಾಹಿತಿ ನೀಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಶಾಲೆ ಆರಂಭದ ವಿಚಾರವಾಗಿ ಎರಡು ದಿನಗಳಲ್ಲಿ ಆಯುಕ್ತರ ವರದಿ ಕೈಸೇರಲಿದ್ದು, ವರದಿ ಬಂದ ಬಳಿಕ ಶಾಲೆ ಆರಂಭದ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಜುಲೈ 26 ರಿಂದ ಎಲ್ಲಾ ಉನ್ನತ ಶಿಕ್ಷಣ ಕಾಲೇಜುಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಇದೀಗ ಆಗಸ್ಟ್ ಮೊದಲ ವಾರದಿಂದ ಹಂತ ಹಂತವಾಗಿ ಶಾಲೆ, ಪಿಯು ಕಾಲೇಜುಗಳನ್ನು ಆರಂಭಿಸಲು ತೀರ್ಮಾನಿಸಿದೆ. ಈ ಬಗ್ಗೆ ವರದಿ ನೀಡಲು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಾದ ವಿ. ಅನ್ಪುಕಮಾರ್ ಅವರ ನೇತೃತ್ವದಲ್ಲಿ ರಚಿಸಿರುವ ಕಾರ್ಯಪಡೆಗೆ ಇನ್ನೂ 2-3 ದಿನಗಳಲ್ಲಿ ವರದಿ ಸಲ್ಲಿಸಲು ಸೂಚಿಸಲಾಗಿದೆ. ವರದಿ ನೀಡಿದ ಬಳಿಕ ರಾಜ್ಯ ಸರ್ಕಾರ ಆಗಸ್ಟ್ ಮೊದಲ ವಾರದಿಂದ ಹಂತ ಹಂತವಾಗಿ ಶಾಲೆ,ಪಿಯು ಕಾಲೇಜು ಆರಂಭಿಸಲು ಅಧಿಕೃತ ಆದೇಶ ಹೊರಡಿಸಲಿದೆ ಎಂದು ತಿಳಿದುಬಂದಿದೆ.
ಇನ್ನು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರು ಮಕ್ಕಳ ಕಲಿಕೆ ಮತ್ತು ಭವಿಷ್ಯದ ದೃಷ್ಟಿಯಿಂದ ಶೀಘ್ರವೇ ಶಾಲೆಗಳನ್ನು ಪುನಾರಂಭಗೊಳಿಸುವ ನಿಟ್ಟಿನಲ್ಲಿ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗೆ ಶಾಲೆ ಆವರಣದಲ್ಲಿ ಲಸಿಕೆ ಶಿಬಿರ ಆಯೋಜಿಸುವುದಾಗಿ ತಿಳಿಸಿದ್ದಾರೆ.
‘ಆಸ್ಕರ್ ನನ್ನ ತಂದೆಯ ಕಾಲಿನ ಧೂಳಿಗೆ, ಭಾರತರತ್ನ ಅವರ ಉಗುರಿಗೆ, ಪ್ರಶಸ್ತಿಗಳು ನನ್ನ ಪಾದಕ್ಕೆ ಸಮ’