ಕಾಬುಲ್ (ಅಫ್ಘಾನಿಸ್ತಾನ): ಇಡೀ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದು ಕೇಕೇ ಹಾಕುತ್ತಿರುವ ತಾಲಿಬಾನಿಗಳಿಗೆ ಇನ್ನೂ ಅಲ್ಲಿಯ ಚಿಕ್ಕ ಕಣಿವೆ ಪಂಜ್ಶೀರ್ ಗೆಲ್ಲಲು ಸಾಧ್ಯವಾಗುತ್ತಿಲ್ಲ. ಪಂಜ್ಶೀರ್ ನಾಶ ಮಾಡಲು ಹೋದಂತೆಲ್ಲಾ ಈ ರಕ್ಕಸರನ್ನು ಪಂಜ್ಶೀರ್ ಸೈನಿಕರು ಹೊಡೆದುರುಳಿಸುತ್ತಿದ್ದಾರೆ. ಪಂಜಶೀರ್ ಕಣಿವೆಯ ಬಂಡುಕೋರ ನಾಯಕ ಅಹಮ್ಮದ್ ಮಸೂದ್ ನೇತೃತ್ವದಲ್ಲಿ ಈ ಕಣಿವೆಯ ಪ್ರಜೆಗಳು ತಾಲಿಬಾನಿಗಳಿಗೆ ಎದೆಯೊಡ್ಡು ನಿಂತಿದ್ದಾರೆ.
ಇಷ್ಟಾದರೂ ಪಟ್ಟುಬಿಡದ ತಾಲಿಬಾನಿಗಳು ಪಂಜ್ಶೀರ್ ಪ್ರಜೆಗಳು ಶರಣಾಗಲು ಡೆಡ್ಲೈನ್ ಕೂಡ ನೀಡಿದ್ದಾರೆ. ಆದರೆ ಇದಕ್ಕೆ ಜಗ್ಗದ ಕಾರಣ ಇದೀಗ ಕೈಲಾಗದ ತಾಲಿಬಾನಿಗಳು ಇನ್ನೊಂದು ಕುತಂತ್ರ ಮಾಡಿದ್ದಾರೆ. ಅದೇನೆಂದರೆ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಿದ್ದಾರೆ. ಮಾತ್ರವಲ್ಲದೇ ಪಂಜ್ಶೀರ್ಗೆ ಹೋಗುವ ರಸ್ತೆಗಳಿಗೂ ನಿರ್ಬಂಧ ವಿಧಿಸಿದ್ದಾರೆ.
ಇಂಟರ್ನೆಟ್ ಸೇವೆ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಪಂಜ್ಶೀರ್ ಪ್ರಜೆಗಳಿಗೆ ಈಗ ಭಾರಿ ತೊಂದರೆ ಉಂಟಾಗಿದೆ. ಅಫ್ಘಾನಿಸ್ತಾನ ಸೇರಿದಂತೆ ಇತರೆಡೆಗಳಲ್ಲಿ ವಾಸಿಸುವ ತಮ್ಮ ಸಂಬಂಧಿಕರನ್ನು ಸಂಪರ್ಕಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಮಾತ್ರವಲ್ಲದೇ ಪಂಜ್ಶೀರ್ಗೆ ಹೋಗುವ ಮಾರ್ಗವನ್ನು ಕೂಡ ಮುಚ್ಚಿರುವ ಕಾರಣ, ಅವರಿಗೆ ಸಂಚಾರಕ್ಕೂ ಕಷ್ಟವಾಗಿದೆ. ಈಗ ಪಂಜ್ಶೀರ್ ಪ್ರಜೆಗಳ ಮುಂದಿನ ನಡೆ ಏನು ಎನ್ನುವುದನ್ನು ನೋಡಬೇಕಿದೆ.
ಅಫ್ಘಾನಿಸ್ತಾನದ ಸೋವಿಯತ್ ವಿರೋಧಿ ಹೋರಾಟದ ನಾಯಕ, ಮುಜಾಹಿದ್ದೀನ್ ಕಮಾಂಡರ್ ಆಗಿದ್ದ ಅಹಮ್ಮದ್ ಷಾ ಮಸೂದ್ ಅವರ ಪುತ್ರ ಅಹಮ್ಮದ್ ಮಸೂದ್. ಅಫ್ಘಾನಿಸ್ತಾನದ ಇತಿಹಾಸದಲ್ಲಿ ದಂತಕತೆ ಎನಿಸಿದ್ದ ಮುಜಾಹಿದ್ದೀನ್ ಕಮಾಂಡರ್ ಅಹಮ್ಮದ್ ಷಾ ಅವರನ್ನು ಸೆಪ್ಟೆಂಬರ್ 11, 2001ರ ದಾಳಿಗೆ ಮೊದಲು ಅಲ್ಖೈದಾ ಉಗ್ರರು ಹತ್ಯೆ ಮಾಡಿದ್ದರು. ಈಗ ಅವರ ಮಗ ಅಹಮ್ಮದ್ ಮಸೂದ್ ತಾಲಿಬಾನಿಗಳ ವಿರುದ್ಧ ಸಿಡಿದೆದ್ದಿದ್ದಾರೆ. ಇದಾಗಲೇ ಅವರು 9 ಸಾವಿರ ಹೋರಾಟಗಾರರನ್ನು ಸಂಘಟಿಸಿದ್ದು, ತಾಲಿಬಾನ್ ವಿರುದ್ಧ ಹೋರಾಟಕ್ಕೆ ಸಜ್ಜಾಗಿದ್ದು, ನೂರಾರು ತಾಲಿಬಾನಿಗಳನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಾಲಿಬಾನಿಗಳ ಬೆವರಿಳಿಸುತ್ತಿರುವ ಪಂಜ್ಶೀರ್ ಸೈನಿಕರು: 41 ಮಂದಿಯ ಹೊಡೆದುರುಳಿಸಿದರು!
ತಾಲಿಬಾನಿ ಹಾರಿಸಿದ ಗುಂಡಿನ ನೋವು ಇಂದಿಗೂ ಮಾಯಲಿಲ್ಲ- ಅಂದು ಅನುಭವಿಸಿದ ಯಾತನೆ ಬಿಚ್ಚಿಟ್ಟ ಮಲಾಲ