ಬೆಂಗಳೂರು: ಕರೊನಾ ಸೋಂಕು ತಡೆಗಟ್ಟಲೆಂದು ಜಾರಿಗೊಳಿಸಿದ ನಿರ್ಬಂಧಗಳ ಉಲ್ಲಂಘಿಸಿ ಪಾದಯಾತ್ರೆ ಸಂಘಟಿಸಿದ್ದರ ಔಚಿತ್ಯ ಪ್ರಶ್ನಿಸಿ ರಾಜ್ಯ ಕಾಂಗ್ರೆಸ್ ಗೆ ನೋಟಿಸ್ ನೀಡಲಾಗಿದೆ. ಅಧಿಕಾರಿಗಳು ಖುದ್ದು ಭೇಟಿಯಾಗಿ ಹೀಗೆ ಮಾಡುವುದು ಸರಿಯಲ್ಲವೆಂದು ಹೇಳಿದರೆ ಉಡಾಫೆ ಉತ್ತರ ನೀಡಿದ್ದು, ಕಾನೂನು ಪ್ರಕಾರ ಕ್ರಮಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಸಿದರು.
ಆರ್ ಟಿ ನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರಿಗೆ ಭಾನುವಾರ ಪ್ರತಿಕ್ರಿಯಿಸಿದ ಅವರು, ಮೇಕೆದಾಟು ಬಳಿ ಸಣ್ಣ ರೈತ ಸಂಘಟನೆಯೊಂದು ಭೇಟಿ ನೀಡಿದ್ದೇ ಕಾರಣವಾಗಿಟ್ಟುಕೊಂಡು ತಮಿಳುನಾಡಿನವರು ರಾಷ್ಟ್ರೀಯ ಹಸಿರು ಪೀಠಕ್ಕೆ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದರು. ರಾಜ್ಯ ಸರ್ಕಾರದ ನಿರಂತರ ಪ್ರಯತ್ನದಿಂದಾಗಿ ತಡೆ ತೆರವಾಗಿದ್ದರೆ, ಇದನ್ನು ಪ್ರಶ್ನಿಸಿ ತಮಿಳುನಾಡು ಮತ್ತೆ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.
ಈ ಸಂದರ್ಭದಲ್ಲಿ ಅದೇ ಸ್ಥಳದಿಂದ ಪಾದಯಾತ್ರೆ ನಡೆಸಿದರೆ ಮುಂದಿನ ಪರಿಣಾಮಗಳ ಅರಿವಿದೆಯೆ ? ಜನರ ಕಾಳಜಿಗಿಂತ ಕಾಂಗ್ರೆಸ್ ನವರಿಗೆ ರಾಜಕೀಯ, ಅಧಿಕಾರ ಮುಖ್ಯವಾಗಿದೆ ಎಂದು ಬೊಮ್ಮಾಯಿ ಕಿಡಿಕಾರಿದರು. ಐದು ವರ್ಷದ ಅಧಿಕಾರದ ಅವಧಿಯಲ್ಲಿ ವಿಸ್ತೃತ ಯೋಜನಾ ವರದಿ ತಯಾರಿಸಿ ಕೇಂದ್ರಕ್ಕೆ ಸಲ್ಲಿಸಲಿಲ್ಲ. ನಾಲ್ಕು ವರ್ಷಗಳಲ್ಲಿ ಕಾರ್ಯಸಾಧ್ಯತೆ ವರದಿ ತರಿಸಿಕೊಂಡಿದ್ದು ಗುಡ್ಡ ಬಗೆದು ಇಲಿ ಹಿಡಿದಿದ್ದೇ ಕಾಂಗ್ರೆಸ್ ನವರ ಸಾಧನೆ ಎಂದು ಲೇವಡಿ ಮಾಡಿದರು.
ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸ್ವತಃ ಜಲ ಸಂಪನ್ಮೂಲ ಮಂತ್ರಿಯಾಗಿದ್ದ ಡಿ.ಕೆ.ಶಿವಕುಮಾರ್ ಏನೂ ಮಾಡಲಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದು ಮೂರು ವರ್ಷಗಳು ಕಳೆದವು ಅಧಿವೇಶನದ ಹೊರಗೆ-ಒಳಗೆ ಚಕಾರವೆತ್ತಲಿಲ್ಲ. ಚುನಾವಣೆ ಹತ್ತಿರ ಬರುತ್ತಿರುವ ಇದ್ದಕ್ಕಿದ್ದಂತೆ ಮೇಕೆದಾಟು ನೆನಪಾಗಿ ರಾಜಕೀಯ ಪಾದಯಾತ್ರೆ ಕೈಗೊಂಡಿದ್ದಾರೆ ಎಂದು ಕುಟುಕಿದರು.
ಕಾಂಗ್ರೆಸ್ ನ ಪಾದಯಾತ್ರೆ ಔಚಿತ್ಯ ವೇನು ? ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಕೇಳುತ್ತಿದ್ದಾರೆ. ಹಿಂದೆ ಇದೇ ರೀತಿ ಕೃಷ್ಣೆಯ ನಡಿಗೆ ಕೈಗೆತ್ತಿಕೊಂಡು ಕೂಡಲಸಂಗಮದಲ್ಲಿ ಸಮಾವೇಶ ನಡೆಸಿ, ಯುಕೆಪಿ ಯೋಜನೆಗೆ ಪ್ರತಿ ವರ್ಷ 10 ಸಾವಿರ ಕೋಟಿ ರೂ ಕೊಡುತ್ತೇನೆಂದು ಘೋಷಿಸಿದ್ದರು. ನಂತರ ಅಧಿಕಾರಕ್ಕೆ ಬಂದ ಮೇಲೆ ಐದು ವರ್ಷಗಳಲ್ಲಿ ನೆಟ್ಟಗೆ ಏಳೆಂಟು ಸಾವಿರ ರೂ ಕೊಡಲಿಲ್ಲ. ನಿಜಾಂಶ ಜನರಿಗೆ ಗೊತ್ತಿದೆ. ಎಲ್ಲ ಕಾಲಕ್ಕೂ ಜನರಿಗೆ ಮರಳು ಮಾಡುವ ಮೋಸದಾಟ ನಡೆಯದು ಎಂದು ಬೊಮ್ಮಾಯಿ ವಾಗ್ದಾಳಿ ನಡೆಸಿದರು.
VIDEO: ಆಹಾರಗಳ ಮೇಲಾಯ್ತು- ತಲೆಯ ಮೇಲೂ ಉಗುಳಿದ ಸುಪ್ರಸಿದ್ಧ ಕೇಶ ವಿನ್ಯಾಸಕಾರ! ಎಲ್ಲೆಡೆ ಭಾರಿ ಆಕ್ರೋಶ
ಪ್ರಧಾನಿ ಹತ್ಯೆಗೆ ನಿಜವಾಗ್ಲೂ ನಡೆದಿತ್ತಾ ಸಂಚು? ಪಂಜಾಬ್ನ ಭದ್ರತಾಲೋಪ ಜಾಗದಲ್ಲಿ ಸಿಕ್ತು ಪಾಕ್ ದೋಣಿ!