ಬೆಂಗಳೂರು: ಕಾವೇರಿ ವಿಚಾರದಲ್ಲಿ ಪದೇ ಪದೇ ಕ್ಯಾತೆ ತೆಗೆಯುತ್ತಿದ್ದ ಕಿರಿಕ್ ಮಾಡುತ್ತಿದ್ದ ತಮಿಳುನಾಡು ಇದೀಗ ಮತ್ತೆ ಮೇಕೆದಾಟು ಯೋಜನೆಗೂ ಕ್ಯಾತೆ ತೆಗೆಯುತ್ತಿದೆ. ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸುವ ಉದ್ದೇಶದಿಂದ ಆರಂಭಿಸಲಾಗಿರುವ ಮೇಕೆದಾಟು ಅಣೆಕಟ್ಟು ಯೋಜನೆಯ ವಿಚಾರವಾಗಿ ಇದೀಗ ಉಭಯ ರಾಜ್ಯಗಳ ನಡುವೆ ಮತ್ತೆ ಬಿಕ್ಕಟ್ಟು ತಲೆದೋರಿದೆ.
ಮೇಕೆದಾಟು ಯೋಜನೆ ಕುರಿತಂತೆ ಮುಖ್ಯಮಂತ್ರಿ ಯಡಿಯೂರಪ್ಪನವರು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರಿಗೆ ಈಗಾಗಲೇ ಪತ್ರ ಬರೆದಿದ್ದರು. ಅದಕ್ಕೆ ಪ್ರತ್ಯುತ್ತರ ನೀಡಿರುವ ಸ್ಟಾಲಿನ್, ಯಾವುದೇ ಕಾರಣಕ್ಕೂ ಮೇಕೆದಾಟ ಯೋಜನೆಗೆ ಅನುಮತಿ ನೀಡುವುದಿಲ್ಲ. ಅಣೆಕಟ್ಟು ಕಟ್ಟಿದರೆ, ತಮಿಳುನಾಡು ಕೃಷಿಕರಿಗೆ ಸಮಸ್ಯೆ ಆಗುತ್ತದೆ. ಇದರಿಂದ ನಮ್ಮ ರಾಜ್ಯಕ್ಕೆ ಅನ್ಯಾಯ ಆಗುತ್ತದೆ. ಆದ್ದರಿಂದ ಯೋಜನೆ ಕೈಬಿಡಬೇಕು ಎಂದಿದ್ದಾರೆ.
ಬೆಂಗಳೂರು ಮಹಾನಗರದ ಕುಡಿಯುವ ನೀರಿನ ಬೇಡಿಕೆಯನ್ನು ಪೂರೈಸಲು ಕರ್ನಾಟಕ ಈಗಾಗಲೇ ಮೂಲಸೌಕರ್ಯ ಹೊಂದಿದೆ. ಕೇವಲ 4.75 ಟಿಎಂಸಿಯನ್ನು ಕುಡಿಯುವ ನೀರಿಗಾಗಿ 67.16 ಟಿಎಂಸಿ ನೀರಿನ ಶೇಖರಣಾ ಸಾಮರ್ಥ್ಯವನ್ನು ಹೊಂದಿರುವ ಜಲಾಯಶ ನಿರ್ಮಿಸಲು ಮುಂದಾಗಿರುವುದು ಸರಿಯಲ್ಲ ಎಂದು ಪತ್ರದಲ್ಲಿ ಹೇಳಿದ್ದಾರೆ.
ಜಯಲಲಿತಾ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕಾವೇರಿ ವಿವಾದ ಕಾವೇರಿತ್ತು. ಇದೀಗ ಅವರದ್ದೇ ಹಾದಿಯಲ್ಲಿ ಹಾಲಿ ಮುಖ್ಯಮಂತ್ರಿ ಸ್ಟಾಲಿನ್ ನಡೆಯುತ್ತಿರುವ ಗಂಭೀರ ಆರೋಪ ಕೇಳಿಬರತೊಡಗಿದೆ. ಕರುಣಾನಿಧಿಯವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಉಭಯ ರಾಜ್ಯಗಳ ನಡುವೆ ನೀರಿನ ಸಮಸ್ಯೆ ಸೌಹಾರ್ದಯುತವಾಗಿ ಬಗೆಹರಿಸಲಾಗುತ್ತಿತ್ತು. ಆದರೆ ಇದೀಗ ನೀರಿನ ವಿಷಯದಲ್ಲಿ ಮತ್ತೆ ಎರಡೂ ರಾಜ್ಯಗಳ ನಡುವೆ ಬಿಕ್ಕಟ್ಟು ತಲೆದೋರಿದಂತಾಗಿದೆ.
ಮಾಜಿ ಸಚಿವನ ಸುತ್ತುಕೊಂಡ ಸ್ವೀಟ್ಸ್ ಹಗರಣ: 1.50 ಟನ್ ಸಿಹಿತಿನಿಸು ‘ಗುಳುಂ’