ಬೆಂಗಳೂರು: ರಾಜ್ಯಾದ್ಯಂತ ಭುಗಿಲೆದ್ದಿರುವ ಹಿಜಾಬ್ ಪ್ರಕರಣದ ವಿಚಾರಣೆ ಹೈಕೋರ್ಟ್ನಲ್ಲಿ ನಡೆಯುತ್ತಿದ್ದು, ಸದ್ಯ ಎಲ್ಲರ ಚಿತ್ತ ಕೋರ್ಟ್ ತೀರ್ಪಿನ ಮೇಲೆ ನೆಟ್ಟಿದೆ. ಐದನೇ ದಿನವಾದ ಇಂದು ಕೂಡ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಕೋರ್ಟ್, ಕೆಲ ಹೊತ್ತು ವಕೀಲರ ವಾದ-ಪ್ರತಿವಾದ ಆಲಿಸಿ ನಾಳೆಗೆ ಮುಂದೂಡಿತು.
ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿರ್ಬಂಧ ಪ್ರಶ್ನಿಸಿ ವಿದ್ಯಾರ್ಥಿನಿಯರು, ಕೆಲವು ಪಾಲಕರು ಸಲ್ಲಿಸಿರುವ ಅರ್ಜಿ ಇದಾಗಿದೆ. ಈ ಸಂದರ್ಭದಲ್ಲಿ ಕೆಲವರು ತರಾತುರಿಯಲ್ಲಿ ಅರ್ಜಿ ಸಲ್ಲಿಸಿದ್ದು, ಅದರಲ್ಲಿ ಸ್ಪಷ್ಟ ಮಾಹಿತಿಗಳು ಇಲ್ಲದೇ ಇರುವುದು ಕೋರ್ಟ್ ಗಮನಕ್ಕೆ ಬಂತು. ಅರ್ಜಿದಾರರ ಹೆಸರು, ವಿಳಾಸ ಸೇರಿದಂತೆ ಕೋರ್ಟ್ಗೆ ಅಗತ್ಯವಿರುವ ಸೂಕ್ತ ಮಾಹಿತಿಗಳು ಇರಲಿಲ್ಲ. ಆದ್ದರಿಂದ ಅಂಥ ಅರ್ಜಿಗಳನ್ನು ವಜಾ ಮಾಡಿದ ಕೋರ್ಟ್, ಹೊಸದಾಗಿ ಅರ್ಜಿ ಸಲ್ಲಿಸಲು ಅನುಮತಿ ನೀಡಿದೆ.
ಇದೇ ವೇಳೆ ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ಆರಿಫ್ ಜಮೀಲ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನೂ ಕೋರ್ಟ್ ವಜಾ ಮಾಡಿತು. ಮುಖ್ಯ ನ್ಯಾಯಮೂರ್ತಿಗಳು ಕೇಳಿದ ಪ್ರಶ್ನೆಗೆ ಅವರು ಸರಿಯಾದ ಉತ್ತರ ಕೊಡಲಿಲ್ಲ. ಆದ್ದರಿಂದ ಅಸಮಾಧಾನಗೊಂಡ ನ್ಯಾಯಮೂರ್ತಿಗಳು ಅರ್ಜಿಯನ್ನು ವಜಾ ಮಾಡಿದರು.
ಇಂದು ಅರ್ಜಿದಾರರ ಪರ ವಕೀಲರು ವಾದ ಮಾಡಿದರು. ಇದೇ ವೇಳೆ ಕೆಲ ಅರ್ಜಿದಾರರ ಪರ ವಕೀಲರು ತಮಗೆ ವಾದ ಮಂಡನೆಗೆ 10 ದಿನಗಳ ಅವಕಾಶ ನೀಡುವಂತೆಯೂ ಕೋರ್ಟ್ ಅನ್ನು ಕೇಳಿಕೊಂಡರು.
ಸದ್ಯ 8 ಅರ್ಜಿಗಳು ಸಲ್ಲಿಕೆಯಾಗಿದ್ದು, 20ಕ್ಕೂ ಹೆಚ್ಚು ಮಧ್ಯಂತರ ಅರ್ಜಿಗಳನ್ನು ಸಲ್ಲಿಸಲಾಗಿದೆ. ಇದರ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಹಾಗೂ ನ್ಯಾಯಮೂರ್ತಿ ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಅವರನ್ನು ಒಳಗೊಂಡಿರುವ ತ್ರಿಸದಸ್ಯ ಪೀಠ ನಡೆಸುತ್ತಿದೆ.