ಕೋಲ್ಕತಾ: ‘ಇ-ನಗ್ಗೆಟ್ಸ್’ ಎಂಬ ಮೊಬೈಲ್ ಗೇಮಿಂಗ್ ಆ್ಯಪ್ ಮೂಲಕ ಜನರಿಗೆ ಮಹಾವಂಚನೆ ಮಾಡುತ್ತಿದ್ದವರ ಜಾಡು ಹಿಡಿದು ಹೋದ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳ ತಂಡ ಕೋಲ್ಕತಾದ 6 ಕಡೆಗಳಲ್ಲಿ ದಾಳಿ ನಡೆಸಿ 17 ಕೋಟಿ ರೂ. ನಗದು ಹಾಗೂ ಮಹತ್ವದ ದಾಖಲೆ ಪತ್ರಗಳನ್ನು ಜಪ್ತಿ ಮಾಡಿದ್ದಾರೆ. ಮೊಬೈಲ್ ಗೇಮಿಂಗ್ ಜತೆಗೆ ಅಕ್ರಮ ಹಣ ವರ್ಗಾವಣೆಯಲ್ಲೂ ‘ಇ-ನಗ್ಗೆಟ್ಸ್’ ತಂಡ ಶಾಮೀಲಾಗಿತ್ತು ಎಂದು ತಿಳಿದು ಬಂದಿದೆ.
‘ಇ-ನಗ್ಗೆಟ್ಸ್’ ಗೇಮಿಂಗ್ ಆ್ಯಪ್ ಪ್ರವರ್ತಕ, ಉದ್ಯಮಿ ಆಮೀರ್ ಖಾನ್ ಹಾಗೂ ಇನ್ನೋರ್ವ ಉದ್ಯಮಿ ನಿಸಾರ್ ಅಹ್ಮದ್ ಖಾನ್ ನಿವಾಸದ ಮೇಲೆ ದಾಳಿ ಮಾಡಲಾಗಿದೆ. ದಾಳಿಯ ಸಮಯದಲ್ಲಿ 17.32 ಕೋಟಿ ರೂ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ಹೇಳಿದೆ. 2000, 500 ಹಾಗೂ 100 ರೂಪಾಯಿ ಮುಖಬೆಲೆಯ ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ. ಎಣಿಕೆ ಕಾರ್ಯ ಇನ್ನೂ ಮುಂದುವರೆದಿದೆ. ಆ್ಯಪ್ಗೆ ಚೀನಾ ಮೂಲದ ನಂಟಿನ ಬಗ್ಗೆಯೂ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಆ್ಯಪ್ ಬಳಕೆದಾರರರಿಗೆ ಠೇವಣಿ ಮೇಲೆ ಭಾರಿ ಕಮಿಷನ್ ನೀಡುವ ಆಮಿಷವೊಡ್ಡಿ ದೊಡ್ಡ ಮೊತ್ತದಲ್ಲಿ ಹಣ ಸಂಗ್ರಹಿಸಿ, ವಾಪಸ್ ನೀಡದೇ ವಂಚಿಸಲಾಗಿದೆ. ಈ ಬಗ್ಗೆ ಅನೇಕರಿಂದ ದೂರುಗಳು ಬಂದಿದ್ದವು, ಜತೆಗೆ, ಗೇಮಿಂಗ್ ಆ್ಯಪ್ಗಳ ಖಾತೆಯಲ್ಲಿನ ವ್ಯವಹಾರದಲ್ಲಿ ಸಾಕಷ್ಟು ಗೋಲ್ಮಾಲ್ ನಡೆದಿದೆ ಎಂಬ ಬಗ್ಗೆ ಫೆಡರಲ್ ಬ್ಯಾಂಕ್ ಅಧಿಕಾರಿಗಳು ಕೂಡಾ ಕೋಲ್ಕತಾ ಪೊಲೀಸರಿಗೆ ನೀಡಿದ್ದರು. ಇವೆಲ್ಲವನ್ನೂ ಆಧರಿಸಿ ಈ ದಾಳಿ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ 2021ರ ಫೆಬ್ರವರಿಯಲ್ಲಿ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ಏನಿದು ಹಗರಣ?
‘ಇ-ನಗ್ಗೆಟ್ಸ್’ ಆ್ಯಪ್ ಡೌನ್ಲೋಡ್ ಮಾಡಿದ ನಂತರ ಸ್ವಲ್ಪ ಹಣವನ್ನು ಮೊದಲು ಬಳಕೆದಾರರು ಠೇವಣಿ ಇಡಬೇಕು. ಆರಂಭದಲ್ಲಿ, ಗೇಮಿಂಗ್ ಪ್ರಕ್ರಿಯೆಯಲ್ಲಿ ಬಹುಮಾನದ ಹೆಸರಿನಲ್ಲಿ ಗೆದ್ದ ಹಣವನ್ನು ತಕ್ಷಣವೇ ಹಿಂಪಡೆಯಲು ಅವಕಾಶವನ್ನು ನೀಡಲಾಗುತ್ತದೆ. ಇದರಿಂದ ಹೆಚ್ಚು ಬಹುಮಾನ ಪಡೆಯುವ ಆಸೆಗೆ ಬಿದ್ದು, ಬಳಕೆದಾರರು ಹೆಚ್ಚು ಹಣವನ್ನು ಠೇವಣಿ ಮಾಡುತ್ತಾರೆ. ಹೀಗೆ ಆಮಿಷ ಕೂಡ ಒಡ್ಡಲಾಗುತ್ತದೆ. ಹೆಚ್ಚು ಠೇವಣಿ ಇಟ್ಟರೆ ಹೆಚ್ಚು ಆಫರ್ ಎನ್ನುವ ಮೂಲಕ ಈ ಗೇಮ್ ಪ್ರಾರಂಭಿಸಲಾಗುತ್ತದೆ. ಅಲ್ಲಿಂದಲೇ ಶುರುವಾಗುವುದು ಮೋಸದಾಟ. ಹೆಚ್ಚು ಹೆಚ್ಚು ಹಣ ಠೇವಣಿ ಇಡುತ್ತಾ ಹೋದಂತೆ ಹಣವನ್ನು ವಾಪಸ್ ಪಡೆಯುವ ಪ್ರಕ್ರಿಯೆ ನಿಂತುಹೋಗಿ ಬಳಕೆದಾರ ಎಲ್ಲವನ್ನೂ ಕಳೆದುಕೊಳ್ಳಬೇಕಾಗುತ್ತದೆ. (ಏಜೆನ್ಸೀಸ್)
ಸಾವಿರಾರು ಕೋಟಿ ರೂ. ಚೀನಾಕ್ಕೆ ವರ್ಗಾವಣೆ; ಆ್ಯಪ್ಗಳ ವಂಚನೆ ಬಯಲಿಗೆಳೆದ ಜಾರಿ ನಿರ್ದೇಶನಾಲಯ
ಬೆಕ್ಕನ್ನು ಹುಲಿ ಮಾಡಿದ ಭೂಪ: ವಾಟ್ಸ್ಆ್ಯಪ್ನಲ್ಲಿ ಮಾರಾಟಕ್ಕಿಟ್ಟು ಪೊಲೀಸರ ಕೈಗೆ ಸಿಕ್ಕಿಬಿದ್ದ
ಗಣೇಶ ವಿಸರ್ಜನೆ ವೇಳೆ ಗಲಾಟೆ ಕೊಲೆಯಲ್ಲಿ ಅಂತ್ಯ! ಕಾಲೇಜು ವಿದ್ಯಾರ್ಥಿಗಳಿಂದ ಭಯಾನಕ ಕೃತ್ಯ
ನೀಚಂಗೆ ದೊರೆತನವು, ಹೇಡಿಂಗೆ ಹಿರಿತನವೂ… ಮಂಡ್ಯದಲ್ಲಿ ಕೋಡಿಶ್ರೀ ಭಯಾನಕ ಭವಿಷ್ಯ…