ಹೈದರಾಬಾದ್: ಕಳೆದ ಡಿಸೆಂಬರ್ನಲ್ಲಿ ನಡೆದಿದ್ದ ಪಶುವೈದ್ಯೆ ದಿಶಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಹಾಗೂ ಆನಂತರ ಅತ್ಯಾಚಾರಿಗಳ ಎನ್ಕೌಂಟರ್ ಕಥೆಯನ್ನು ಆಧಾರವಾಗಿಟ್ಟುಕೊಂಡು ತಯಾರಾಗುತ್ತಿರುವ ‘ದಿಶಾ ಎನ್ಕೌಂಟರ್’ ಚಿತ್ರಕ್ಕೆ ತಡೆ ನೀಡುವಂತೆ ಕೋರಿ ದಿಶಾ ತಂದೆ ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ಮೊರೆ ಹೋಗಿದ್ದಾರೆ.
ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರವನ್ನು ಬಿಡುಗಡೆ ಮಾಡಲು ಬಿಡಬಾರದು ಎಂದು ತೆಲಂಗಾಣ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ದಾಖಲಿಸಲಾಗಿದೆ.
ಈ ಚಿತ್ರವನ್ನು ತರಾತುರಿಯಲ್ಲಿ ನಿರ್ಮಿಸಲಾಗಿದೆ. ಪ್ರಕರಣದ ಸಂಪೂರ್ಣ ವಿವರಣೆಯನ್ನು ತಮ್ಮಿಂದ ಕೇಳಿಲ್ಲ. ಮಾತ್ರವಲ್ಲದೇ ತಮ್ಮ ಮಗಳ ಮೇಲಾಗಿರುವ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರ ತಯಾರಾಗಿದ್ದರೂ, ತಮ್ಮ ಅನುಮತಿಯನ್ನೇ ಕೇಳಿಲ್ಲ. ಹಣದಾಸೆಗೆ ತಮ್ಮ ಮಗಳ ಕುರಿತ ಚಿತ್ರ ಮಾಡಿ ಕುಟುಂಬದ ಮಾರ್ಯಾದೆಗೆ ಹಾನಿ ಮಾಡಿದ್ದಾರೆ ಎಂದು ಆರ್ಜಿಯಲ್ಲಿ ಆರೋಪಿಸಲಾಗಿದೆ.
ದಿಶಾ ಎನ್ಕೌಂಟರ್’ ಚಿತ್ರದ ಟ್ರೈಲರ್ ಗಾಗಿ ಇಲ್ಲಿ ಕ್ಲಿಕ್ ಮಾಡಿ:
ಈ ಕುರಿತು ನಿನ್ನೆ ತೆಲಂಗಾಣ ಹೈಕೋರ್ಟ್ನಲ್ಲಿ ಪ್ರಕರಣದ ವಿಚಾರಣೆ ಬಂದಿತ್ತು. ಇದರ ವಿಚಾರಣೆ ನಡೆಸಿದ ಕೋರ್ಟ್, ಚಿತ್ರವನ್ನು ತೆರೆಗೆ ತರುವ ಕುರಿತು ಚಿತ್ರತಂಡ ಸೆನ್ಸಾರ್ ಮಂಡಳಿಗೆ ಹೋಗಿಲ್ಲ. ಈಗಲೇ ಏನಾದರೂ ಆದೇಶ ಹೊರಡಿಸುವುದು ಸರಿಯಲ್ಲ. ಚಿತ್ರತಂಡ ಸೆನ್ಸಾರ್ ಮಂಡಳಿಗೆ ಹೋಗುವವರೆಗೂ ತಾವು ಈ ಬಗ್ಗೆ ಯಾವುದೇ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ. ಚಿತ್ರದ ಕುರಿತಂತೆ ಚಿತ್ರ ನಿರ್ಮಾಪಕರನ್ನು ಸಂಪರ್ಕಿಸುವಂತೆ ಕೋರ್ಟ್ ಸಲಹೆ ನೀಡಿದೆ.
ಇದಕ್ಕೆ ಸಂಬಂಧಿಸಿದಂತೆ ಇದಾಗಲೇ ಅರ್ಜಿದಾರರು ಸುಪ್ರೀಂಕೋರ್ಟ್ನಲ್ಲಿ ಹಾಗೂ ಸ್ಥಳೀಯ ಕೋರ್ಟ್ನಲ್ಲಿಯೂ ಅರ್ಜಿ ಸಲ್ಲಿಸಿದ್ದು, ಅಲ್ಲಿ ಅರ್ಜಿ ಇತ್ಯರ್ಥಕ್ಕೆ ಬಾಕಿ ಇದೆ. ಈ ಕುರಿತು ಅರ್ಜಿದಾರರ ಪರ ವಕೀಲ ಎಂಎಕೆ ಮುಖೀದ್ ಹೈಕೋರ್ಟ್ ಗಮನಕ್ಕೆ ತಂದರು.
ಅರ್ಜಿಯಲ್ಲಿ ಅರ್ಜಿದಾರರು ತೆಲಂಗಾಣ ಸರ್ಕಾರ, ಸೈಬರ್ ಪೊಲೀಸ್ ಆಯುಕ್ತ, ಶಾಡ್ ನಗರ ಪೊಲೀಸ್ ಠಾಣೆಯ ಮುಖ್ಯಸ್ಥರು, ಸೆನ್ಸಾರ್ ಮಂಡಳಿಯನ್ನು ಪ್ರತಿವಾದಿಯನ್ನಾಗಿಸಲಾಗಿದೆ.
ಇದನ್ನೂ ಓದಿ: ಸ್ವಾಮಿತ್ವ ಯೋಜನೆಗೆ ಪ್ರಧಾನಿ ಮೋದಿ ಚಾಲನೆ: 6.62 ಲಕ್ಷ ಗ್ರಾಮಗಳಿಗೆ ಯೋಜನೆಯ ಲಾಭ
ಏನಿದು ಘಟನೆ?: 2019ರ ಡಿಸೆಂಬರ್ನಲ್ಲಿ ಕೆಲಸದ ನಿಮಿತ್ತ ಬೈಕ್ನಲ್ಲಿ ತೆರಳಿದ್ದ ದಿಶಾ (ಅತ್ಯಾಚಾರ ಪ್ರಕರಣವಾಗಿರುವ ಹಿನ್ನೆಲೆಯಲ್ಲಿ ಮೂಲ ಹೆಸರನ್ನು ಬಹಿರಂಗಪಡಿಸುವಂತಿಲ್ಲ). ಬೈಕ್ ಪಂಚರ್ ಆದ ಕಾರಣ, ಪೆಟ್ರೋಲ್ ಬಂಕ್ ಬಳಿ ಅದನ್ನು ನಿಲ್ಲಿಸಿದ್ದರು. ಈ ವೇಳೆ ಅಲ್ಲಿಯೇ ಇದ್ದ ನಾಲ್ಕು ಮಂದಿ ದುಷ್ಕರ್ಮಿಗಳು ನಿರ್ಜನ ಪ್ರದೇಶಕ್ಕೆ ಆಕೆಯನ್ನು ಕರೆದೊಯ್ದು ಸಾಮೂಹಿಕ ಆತ್ಯಾಚಾರ ಮಾಡಿದ್ದೂ ಅಲ್ಲದೇ, ಕೊಲೆ ಮಾಡಿ ಶವವನ್ನು ಸುಟ್ಟುಹಾಕಿದ್ದಾರೆ.
ಇಡೀ ದೇಶಾದ್ಯಂತ ಈ ಘಟನೆಯ ವಿರುದ್ಧ ಪ್ರತಿಭಟನೆ ಕೇಳಿಬಂದಿದ್ದವು. ಬಳಿಕ ಪೊಲೀಸರು ದುಷ್ಕರ್ಮಿಗಳನ್ನು ಬಂಧಿಸಿದ್ದರು. ಸ್ಥಳ ಮಹಜರು ಪ್ರಕ್ರಿಯೆಗಾಗಿ ಶವವನ್ನು ಸುಟ್ಟ ಜಾಗಕ್ಕೆ ಕರೆದೊಯ್ಯುತ್ತಿದ್ದಾಗ ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದರು. ಈ ವೇಳೆ ಪೊಲೀಸರು ಎನ್ ಕೌಂಟರ್ ಮಾಡಿ ಎಲ್ಲ ಆರೋಪಿಗಳನ್ನು ಕೊಂದು ಹಾಕಿದ್ದರು.
ಈ ವಿಷಯಗಳನ್ನು ಒಳಗೊಂಡಂತೆ ರಾಮ್ ಗೋಪಾಲ್ ವರ್ಮಾ ಚಿತ್ರ ಮಾಡುವುದಾಗಿ ಹೇಳಿ ಅದರ ಟೀಸರ್ ಕೂಡ ಬಿಡುಗಡೆ ಮಾಡಿದ್ದಾರೆ.
ಹುಟ್ಟುಹಬ್ಬಕ್ಕೆ ಹೋದವಳ ಮೇಲೆ ಗ್ಯಾಂಗ್ರೇಪ್! ಮನೆಗೆ ಸೇರಿಸದ ಕುಟುಂಬಸ್ಥರು!
ಮಹೀಂದ್ರಾ ತದ್ರೂಪಿ ಪುಟಾಣಿ ವಾಹನ ಉಚಿತವಾಗಿ ಪಡೆಯಲು ಇಲ್ಲಿದೆ ಆಫರ್, ಕೆಲವೇ ಗಂಟೆ ಬಾಕಿ…