ನವದೆಹಲಿ: ಗ್ರಾಮಗಳ ಸಮೀಕ್ಷೆ ಮತ್ತು ಗ್ರಾಮದಲ್ಲಿ ಸುಧಾರಿತ ತಂತ್ರಜ್ಞಾನದೊಂದಿಗೆ ಮ್ಯಾಪಿಂಗ್ (ಸ್ವಾಮಿತ್ವ) ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು.
ಈ ಯೋಜನೆಯಿಂದ 6.62 ಲಕ್ಷ ಗ್ರಾಮಗಳಿಗೆ ಲಾಭವಾಗಲಿದೆ. ಈ ಯೋಜನೆ ಅಡಿಯಲ್ಲಿ ರೈತರ ಜಮೀನುಗಳು ಸಂಪೂರ್ಣ ಡಿಜಿಟಲೀಕರಣವಾಗಲಿದ್ದು, ಜಮೀನು ವ್ಯಾಜ್ಯಗಳ ಪರಿಹಾರಕ್ಕಾಗಿ ಡಿಜಿಟಲ್ ಸೂತ್ರ ಸಿಗಲಿದೆ.
ಇಂದು ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ 346, ಹರಿಯಾಣದ 221, ಮಹಾರಾಷ್ಟ್ರದ 100, ಮಧ್ಯ ಪ್ರದೇಶದ 44, ಉತ್ತರಾಖಂಡದ 50 ಮತ್ತು ಕರ್ನಾಟಕದ 2 ಗ್ರಾಮಗಳು ಸೇರಿ ಒಟ್ಟು 763 ಗ್ರಾಮಗಳ ಫಲಾನುಭವಿಗಳು ಇಂದು ಯೋಜನೆಯ ಲಾಭವನ್ನು ಪಡೆಯಲಿದ್ದಾರೆ. ಮಹಾರಾಷ್ಟ್ರ ಹೊರತುಪಡಿಸಿ ಉಳಿದ ರಾಜ್ಯಗಳ ಫಲಾನುಭವಿಗಳಿ ಇಂದು ಒಂದೇ ದಿನದಲ್ಲಿ ಪ್ರಾಪರ್ಟಿ ಕಾರ್ಡ್ಗಳ ಭೌತಿಕ ಪ್ರತಿಗಳನ್ನು ಸ್ವೀಕರಿಸಲಿದ್ದಾರೆ. ಪ್ರಾಪರ್ಟಿ ಕಾರ್ಡ್ನ ಅತ್ಯಲ್ಪ ವೆಚ್ಚವನ್ನು ಮರುಪಡೆಯುವ ವ್ಯವಸ್ಥೆಯನ್ನು ಮಹಾರಾಷ್ಟ್ರ ಹೊಂದಿರುವುದರಿಂದ ಅದು ಒಂದು ತಿಂಗಳ ಸಮಯ ತೆಗೆದುಕೊಂಡಿದೆ.
ಈ ಯೋಜನೆಯಿಂದ ರೈತರು ತಮ್ಮ ಪ್ರಾಪರ್ಟಿಯನ್ನು ಆರ್ಥಿಕ ಆಸ್ತಿಯನ್ನಾಗಿ ಬಳಸಿಕೊಂಡು ಸಾಲ ಸೇರಿದಂತೆ ಇನ್ನಿತರ ಆರ್ಥಿಕ ನೆರವನ್ನು ಪಡೆದುಕೊಳ್ಳಲು ಸುಲಭವಾಗಲಿದೆ. ಸ್ವಾಮಿತ್ವ ಕೇಂದ್ರ ಸರ್ಕಾರದ ಪಂಚಾಯತ್ ರಾಜ್ ಇಲಾಖೆಯ ಯೋಜನೆಯಾಗಿದ್ದು, ಗ್ರಾಮೀಣ ಪ್ರದೇಶದ ಮನೆ ಮಾಲೀಕರಿಗೆ ‘ಹಕ್ಕುಗಳ ದಾಖಲೆ’ ಒದಗಿಸುವುದು ಮತ್ತು ಆಸ್ತಿ ಕಾರ್ಡ್ಗಳನ್ನು ನೀಡುವುದು ಯೋಜನೆಯ ಉದ್ದೇಶವಾಗಿದೆ.
ಈ ಯೋಜನೆಯನ್ನು ದೇಶಾದ್ಯಂತ ನಾಲ್ಕು ವರ್ಷ (2020-2024)ಗಳ ಸಮಯದವರೆಗೆ ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುತ್ತದೆ. ಕೊನೆಯದಾಗಿ ದೇಶದ ಸುಮಾರು 6.62 ಲಕ್ಷ ಗ್ರಾಮಗಳು ಇದರ ಲಾಭವನ್ನು ಪಡೆಯಲಿವೆ.
ಉತ್ತರ ಪ್ರದೇಶದ, ಹರಿಯಾಣದ, ಮಹಾರಾಷ್ಟ್ರದ, ಮಧ್ಯ ಪ್ರದೇಶದ, ಉತ್ತರಾಖಂಡ ಮತ್ತು ಕರ್ನಾಟಕ ರಾಜ್ಯಗಳು ಯೋಜನೆಯ ಅನುಷ್ಠಾನಕ್ಕೆ ತರಲು ಗ್ರಾಮೀಣ ಭಾಗದಲ್ಲಿ ಡ್ರೋನ್ ಸರ್ವೇ ನಡೆಸಲು ಸರ್ವೇ ಆಫ್ ಇಂಡಿಯಾದ ಜ್ಞಾಪಕ ಪತ್ರಕ್ಕೆ ಸಹಿ ಹಾಕಿವೆ. ಈ ರಾಜ್ಯಗಳು ಡಿಜಿಟಲ್ ಪ್ರಾಪರ್ಟಿ ಕಾರ್ಡ್ ಸ್ವರೂಪ ಮತ್ತು ಡ್ರೋನ್ ಆಧಾರಿತ ಸಮೀಕ್ಷೆಗೆ ಒಳಪಡಬೇಕಾದ ಗ್ರಾಮಗಳನ್ನು ಈಗಾಗಲೇ ಅಂತಿಮಗೊಳಿಸಿವೆ. (ಏಜೆನ್ಸೀಸ್)
ಮಹೀಂದ್ರಾ ತದ್ರೂಪಿ ಪುಟಾಣಿ ವಾಹನ ಉಚಿತವಾಗಿ ಪಡೆಯಲು ಇಲ್ಲಿದೆ ಆಫರ್, ಕೆಲವೇ ಗಂಟೆ ಬಾಕಿ…