ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಮೊಮ್ಮಗಳು, ಬೌರಿಂಗ್ ಆಸ್ಪತ್ರೆಯಲ್ಲಿ ಸರ್ಜನ್ ಆಗಿದ್ದ ಡಾ.ಸೌಂದರ್ಯ ಆತ್ಮಹತ್ಯೆ ಪ್ರಕರಣ ಇನ್ನೂ ನಿಗೂಢವಾಗಿಯೇ ಉಳಿದಿದೆ. ಸಾಯುವ ಮುನ್ನ ಅವರು ಯಾವುದೇ ಡೆತ್ನೋಟ್ ಕೂಡ ಬರೆದಿಲ್ಲದೇ ಇರುವುದರಿಂದ ಈ ಸಾವಿನ ರಸಹ್ಯ ಭೇದಿಸುವುದು ಪೊಲೀಸರಿಗೆ ಸ್ವಲ್ಪ ಕಷ್ಟವೇ ಆಗಿದೆ.
ಈಗಾಗಲೇ ಘಟನೆಗೆ ಸಂಬಂಧಿಸಿದಂತೆ ಕೆಲವು ಕುಟುಂಬಸ್ಥರ ವಿಚಾರಣೆಯನ್ನು ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸರು ನಡೆಸಿದ್ದು, ಇದೀಗ ಡಾ.ಸೌಂದರ್ಯ ಅವರ ಪತಿ ಡಾ.ನೀರಜ್, ಮಾವ ಮರಿಸ್ವಾಮಿ ಹಾಗೂ ಮನೆಕೆಲಸದಾಕೆಯ ವಿಚಾರಣೆ ನಡೆಸಿದ್ದಾರೆ.
ಪತಿ ನೀರಜ್ ಹೇಳಿದ್ದೇನು?
‘ ಘಟನೆಯಿಂದ ತುಂಬಾ ಆಘಾತವಾಗಿದೆ. ನಮ್ಮ ನಡುವೆ ಯಾವುದೇ ಜಗಳವಿರಲಿಲ್ಲ, ತುಂಬಾ ಅನ್ಯೋನ್ಯವಾಗಿದ್ದೆವು. ಪತ್ನಿ ಯಾಕೆ ಇಂಥ ನಿರ್ಧಾರಕ್ಕೆ ಬಂದಳು ಎನ್ನುವುದು ತಿಳಿಯುತ್ತಿಲ್ಲ. ಮಗುವಾದ ಮೇಲೆ ಅವಳು ತವರು ಮನೆಯಲ್ಲಿ ಇದ್ದಳು. ನಡುನಡುವೆ ವಸಂತ ನಗರದಲ್ಲಿ ಇರುವ ಫ್ಲ್ಯಾಟ್ಗೆ ಬಂದು ಹೋಗುತ್ತಿದ್ದಳು. ಗುರುವಾರ ರಾತ್ರಿ ಸಹ ಫ್ಲ್ಯಾಟ್ಗೆ ಬಂದಿದ್ದಳು. ಆಗಲೂ ಯಾವುದೇ ಸಮಸ್ಯೆ ಇದ್ದಂತೆ ಕಾಣಿಸಲಿಲ್ಲ. ಪ್ರತಿ ದಿನ ಬೆಳಗ್ಗೆ ಸ್ವಲ್ಪ ತಡವಾಗಿ ಆಕೆ ಏಳುತ್ತಿದ್ದರಿಂದ ನಾನು ಶುಕ್ರವಾರ ಬೆಳಗ್ಗೆ 8 ಗಂಟೆಗೆ ಎಂದಿನಂತೆ ಕೆಲಸಕ್ಕೆ ಆಸ್ಪತ್ರೆಗೆ ತೆರಳಿದೆ. ಕೆಲಸದಾಳು ನನಗೆ ಕರೆ ಮಾಡಿದಾಗಲೇ ವಿಷಯ ತಿಳಿದದ್ದು’ ಎಂದು ಪತಿ ಡಾ.ನೀರಜ್ ಹೇಳಿದ್ದಾರೆ.
ಬಡವರಿಗಾಗಿ ಸೇವೆ ಸಲ್ಲಿಸಬೇಕು ಅಂತಿದ್ಲು:
ಬೆಂಗಳೂರು ನಗರ ಜಿಪಂ ಮಾಜಿ ಅಧ್ಯಕ್ಷ ಹಾಗೂ ಸೌಂದರ್ಯ ಮಾವ ಮರಿಸ್ವಾಮಿ ಕೂಡ ಪೊಲೀಸರಿಗೆ ಹೇಳಿಕೆ ನೀಡಿದ್ದು, ಯಡಿಯೂರಪ್ಪ ಹಾಗೂ ನೀರಜ್ ಕುಟುಂಬದವರು ಉತ್ತಮ ಬಾಂಧವ್ಯ ಹೊಂದಿದ್ದಾರೆ. ಸೌಂದರ್ಯ ಎಲ್ಲರ ಜತೆ ಹೊಂದಿಕೆ ಮಾಡಿಕೊಂಡು ಹೋಗುತ್ತಿದ್ದಳು. ಮದುವೆ, ಬಾಣಂತನ ಎಲ್ಲವೂ ಯಡಿಯೂರಪ್ಪನವರ ಮನೆಯಲ್ಲೇ ಮಾಡಲಾಗಿತ್ತು. ತಾನು ಬಡವರಿಗೆ ಸೇವೆ ಸಲ್ಲಿಸಬೇಕು ಎಂಬ ಅಭಿಲಾಷೆ ಹೊಂದಿದ್ದಳು. ಏಕೆ ಹೀಗೆ ಮಾಡಿಕೊಂಡಳೋ ಗೊತ್ತಾಗುತ್ತಿಲ್ಲ ಎಂದಿದ್ದಾರೆ.
ರೂಂ ಒಳಗಿಂದ ಲಾಕ್ ಆಗಿತ್ತು, ಗಾಬರಿಯಾದೆ
ಸೌಂದರ್ಯ ಅವರು ನೇಣು ಹಾಕಿಕೊಂಡಿದ್ದನ್ನು ಮೊದಲು ನೋಡಿದವರು ಅವರ ಮನೆಯ ಕೆಲಸದಾಕೆ. ಅವರನ್ನು ಪೊಲೀಸರು ವಿಚಾರಣೆ ನಡೆಸಿದಾಗ ಅವರು ಹೇಳಿದ್ದು, ‘ಮನೆಗೆ ಹೋದಾಗ ಮೇಡಂ ಅವರ ರೂಮು ಸಾಕಷ್ಟು ಬಾರಿ ಕರೆದರೂ ಮೇಡಂ ಮಾತನಾಡಿಲ್ಲ. ಬಾಗಿಲು ಕೂಡ ತೆರೆಯಲಿಲ್ಲ. ನನಗೆ ಯಾಕೋ ತುಂಬಾ ಭಯವಾಯಿತು. ಸರ್ (ಪತಿ) ಕೂಡ ಮನೆಯಲ್ಲಿ ಇರಲಿಲ್ಲ. ಕೂಡಲೇ ಅವರಿಗೆ ಕರೆ ಮಾಡಿದೆ. ಕೂಡಲೇ ಸರ್ ಬಂದು ನೋಡಿ ಕರೆದರೂ ಪ್ರತಿಕ್ರಿಯೆ ಬರಲಿಲ್ಲ. ಆಮೇಲೆ ಹೊರಗಿಂದ ನೋಡಿದಾಗ ನೇಣು ಹಾಕಿಕೊಂಡಿರುವುದು ಗೊತ್ತಾಯಿತು’
ಇವಿಷ್ಟು ಹೇಳಿಕೆಗಳು ಹಾಗೂ ಇನ್ನಷ್ಟು ಸಾಂದರ್ಭಿಕ ಸಾಕ್ಷ್ಯಾಧಾರಗಳ ಮೇಲೆ ಈ ಕೇಸಿನ ವಿಚಾರಣೆಯನ್ನು ಪೊಲೀಸರು ನಡೆಸುತ್ತಿದ್ದಾರೆ. ಮೇಲ್ನೋಟಕ್ಕೆ ಸದ್ಯ ಸಿಕ್ಕಿರುವ ಸಾಂದರ್ಭಿಕ ಸಾಕ್ಷ್ಯಗಳು ಖಿನ್ನತೆಯಿಂದಲೇ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳುತ್ತಿದ್ದು, ಪೊಲೀಸರು ಕೂಡ ಯಾರ ಮೇಲೂ ಅನುಮಾನ ವ್ಯಕ್ತಪಡಿಸಿಲ್ಲ.
ಸೌಂದರ್ಯ ಬೆಂಗಳೂರಿನ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ರೇಡಿಯಾಲಜಿಸ್ಟ್ ಆಗಿದ್ದರು. ಅವರ ಪತಿ ಡಾ. ನಿರಂಜನ್ ಕೂಡ ಅದೇ ಆಸ್ಪತ್ರೆಯಲ್ಲಿ ರೇಡಿಯಾಲಜಿಸ್ಟ್ ಆಗಿದ್ದರು. ದಂಪತಿಗೆ ಒಂಬತ್ತು ತಿಂಗಳ ಗಂಡು ಮಗು ಇದೆ. ರಾಮಯ್ಯದಲ್ಲಿ ವೈದ್ಯಕೀಯ ಶಿಕ್ಷಣ ಮುಗಿಸಿ ಬೌರಿಂಗ್ನಲ್ಲೇ ಸರ್ಜನ್ ಆಗಿದ್ದ ಸೌಂದರ್ಯ ಅವರು ಮಗುವಾದ ನಂತರ ಕೆಲಸ ಬಿಟ್ಟಿದ್ದರು. ನಂತರ ಖಿನ್ನತೆಗೆ ಒಳಗಾಗಿದ್ದರು. ಕಳೆದ ಮೂರು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ.
ಮಾಜಿ ಸಿಎಂ ಬಿಎಸ್ವೈ ಮೊಮ್ಮಗಳು ಸೌಂದರ್ಯ ಆತ್ಮಹತ್ಯೆಗೆ ಕಾರಣ ಬಿಚ್ಚಿಟ್ಟ ಗೃಹ ಸಚಿವ ಆರಗ ಜ್ಞಾನೇಂದ್ರ
ಜಾಲತಾಣದಲ್ಲಿ ರಂಗೇರಿದ ‘ಆಂಟಿ’ ವಿವಾದ! 15 ವರ್ಷ ದೊಡ್ಡವಳನ್ನು ಇನ್ನೇನು ಹೇಳ್ಬೇಕು ಎಂದು ಪ್ರಶ್ನಿಸಿದ ನೆಟ್ಟಿಗರು