ಮುಂಬೈ: ಅಮ್ಮನ ಎದೆಹಾಲಿನಷ್ಟು ಅಮೃತವಾದದ್ದು ಮಕ್ಕಳಿಗೆ ಈ ಜಗತ್ತಿನಲ್ಲಿ ಬೇರೆ ಯಾವುದೂ ಇಲ್ಲ ಎನ್ನುತ್ತಾರೆ. ಎದೆಹಾಲಿನ ಮಹತ್ವವೇ ಅಂಥದ್ದು. ಶಿಶುಗಳಲ್ಲಿ ಸಾಮಾನ್ಯವಾಗಿ ಬರುವ ಎಲ್ಲಾ ಆರೋಗ್ಯ ಸಮಸ್ಯೆಗಳನ್ನೂ ದೂರಮಾಡಬಲ್ಲ ಏಕೈಕ ಅಮೃತವೆಂದರೆ ಅದು ಎದೆಹಾಲು.
ಆದರೆ ಎಷ್ಟೋ ಕಂದಮ್ಮಗಳಿಗೆ ಎದೆಹಾಲು ಸಿಗುವುದೇ ಇಲ್ಲ. ಹುಟ್ಟುತ್ತಲೇ ತಾಯಿಯ ಸಾವಾದರೆ ಇಲ್ಲವೇ ಮಹಿಳೆಯರಲ್ಲಿ ಹಲವಾರು ಕಾರಣಗಳಿಂದ ಎದೆಹಾಲಿನ ಕೊರತೆ ಉಂಟಾದರೆ ಅಂಥ ಶಿಶುಗಳ ಪಾಡು ಕೇಳುವುದೇ ಬೇಡ.
ಇಂಥ ಶಿಶುಗಳಿಗೆ ಎದೆಹಾಲು ನೀಡುವ ಮೂಲಕ ಮಹಾತಾಯಿ ಎನಿಸಿಕೊಂಡಿದ್ದಾರೆ ನಿರ್ಮಾಪಕಿ ನಿಧಿ ಪರ್ಮಾರ್ ಹೀರಾನಂದನಿ. ಲಾಕ್ಡೌನ್ ಸಮಯದಲ್ಲಿ ಆಸ್ಪತ್ರೆಗೂ ಹೋಗಲಾಗದೇ ಪರದಾಡುತ್ತಿದ್ದ ಶಿಶುಗಳಿಗೆ ಎದೆಹಾಲು ನೀಡುವ ಮೂಲಕ ಅಮೃತವನ್ನು ನೀಡಿ ಸುದ್ದಿಯಾಗಿದ್ದಾರೆ ನಿಧಿ. ಇವರು ನೀಡಿರುವ ಎದೆಹಾಲಿನ ಪ್ರಮಾಣ ಬರೋಬರಿ 42 ಲೀಟರ್.
ತಾಪ್ಸಿ ಪನ್ನು ಹಾಗೂ ಭೂಮಿ ಪೆಡ್ನೆಕರ್ ಅಭಿನಯದ ‘ಸಾಂಡ್ ಕೀ ಆಂಖ್’ ಎಂಬ ಬಾಲಿವುಡ್ ಸಿನಿಮಾದ ನಿರ್ಮಾಪಕಿಯಾಗಿರುವ ಈಕೆ, ಮೇ ತಿಂಗಳಿನಿಂದ ಸುಮಾರು 42 ಲೀಟರ್ ಎದೆಹಾಲನ್ನು ದಾನ ಮಾಡಿದ್ದಾರೆ.
ಇದನ್ನೂ ಓದಿ: ಈಕೆಯ ಎದೆಹಾಲಿಗೆ ಲಕ್ಷ ಲಕ್ಷ ರೂಪಾಯಿ- ಮನೆಯಲ್ಲೇ ಕೂತು ಸಿಕ್ಕಾಪಟ್ಟೆ ಸಂಪಾದನೆ!
ಗಂಡು ಮಗುವಿಗೆ ಜನ್ಮ ನೀಡಿರುವ ನಿಧಿ, ತಮ್ಮ ಶಿಶುವಿಗೆ ನೀಡುವ ಎದೆಹಾಲಿನ ಜತೆಜತೆಗೆ ಹೆಚ್ಚುವರಿಯಾಗಿ ಇರುವ ಹಾಲನ್ನು ದಾನ ಮಾಡಿದ್ದಾರೆ. ‘ನನ್ನ ಮಗುವಿಗೆ ಎದೆಹಾಲು ಉಣಿಸಿದ ಬಳಿಕ ಸಾಕಷ್ಟು ಹಾಲು ಉತ್ಪತ್ತಿಯಾಗುತ್ತಿತ್ತು.
ಫ್ರಿಜ್ನಲ್ಲಿ ಹಾಲನ್ನು ಶೇಖರಿಸಿಟ್ಟರೆ ಮೂರ್ನಾಲ್ಕು ತಿಂಗಳು ಕಾಲ ಕೆಡುವುದಿಲ್ಲ ಎಂಬುದನ್ನು ಓದಿದ್ದೆ. ಹೀಗಾಗಿ ನನ್ನ ಮಗನಿಗೆ ಒಂದೂವರೆ ತಿಂಗಳು ಕಳೆದ ಬಳಿಕ ನಾನು ಹಾಲನ್ನು ಶೇಖರಿಸಿಡಲು ಆರಂಭಿಸಿದ್ದು, ಅದನ್ನು ದಾನ ಮಾಡಿದೆ ಎಂದಿದ್ದಾರೆ.
ಕರೊನಾ ವೈರಸ್ ಭೀತಿ ಸೃಷ್ಟಿಸಿದ್ದ ಅಂದಿನ ದಿನಗಳಲ್ಲಿ ನನ್ನ ನಿರ್ಧಾರವನ್ನು ಆಸ್ಪತ್ರೆ ಸಿಬ್ಬಂದಿ ಒಪ್ಪಲಿಲ್ಲ. ನಂತರ ಬಾಂದ್ರಾದ ಮಹಿಳಾ ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞರನ್ನು ಸಂಪರ್ಕಿಸಿದೆ. ಅವರ ಸಲಹೆಯಂತೆ ಆಸ್ಪತ್ರೆಯೊಂದಕ್ಕೆ ಹಾಲು ದಾನ ಮಾಡಿದೆ. ಆಸ್ಪತ್ರೆಯಲ್ಲಿ ಎದೆಹಾಲು ಉಣಿಸಲು ಕಷ್ಟಪಡುತ್ತಿದ್ದ ಬಾಣಂತಿಯರು ತಮ್ಮ ಶಿಶುಗಳಿಗೆ ಹಾಲು ಒದಗಿಸಿದ್ದಾರೆ ಎನ್ನುತ್ತಾರೆ ನಿಧಿ.
ಸುಮಾರು 60 ಮಕ್ಕಳು ನಿಧಿಯವರ ಎದೆಹಾಲನ್ನು ಸೇವಿಸಿ ಜೀವ ಪಡೆದಿವೆ. ಎದೆಹಾಲು ಪಡೆದ ಮಕ್ಕಳಲ್ಲಿ ನಗುಮೊಗ ಕಂಡು ಒಂದು ವರ್ಷವರೆಗೂ ಇದೇ ರೀತಿಯಲ್ಲಿ ಎದೆಹಾಲು ದಾನ ಮಾಡುವುದಾಗಿ ನಿಧಿ ಘೋಷಿಸಿದ್ದಾರೆ.
ಅರೆಬೆತ್ತಲೆ ಫೋಟೋಗೆ ಪೋಪ್ ಕೊಟ್ಟರಂತೆ ಲೈಕ್- ಅವರನ್ನು ಹುಡುಕಿ ಹೋಗ್ತಾಳಂತೆ ಈಕೆ…
ಕಂಗನಾ v/s ಡಿ. ರೂಪಾ- ಹೊತ್ತಿ ಉರಿತಿದೆ ಪಟಾಕಿಯ ಕಿಡಿ: ಮೀಸಲಾತಿ ಅಡ್ಡ ಪರಿಣಾಮ ಅಂದ್ರು ನಟಿ!
ಹೈಕೋರ್ಟ್ ಕೆಂಗಣ್ಣಿಗೆ ಗುರಿಯಾದ ಕೆಪಿಸಿಸಿ ಕಾರ್ಯಾಧ್ಯಕ್ಷ- ₹5 ಲಕ್ಷ ದಂಡ