More

    ಸೇನೆಯಲ್ಲಿ ಇತಿಹಾಸ ಸೃಷ್ಟಿಸಿರುವ ಬಿಪಿನ್ ರಾವತ್‌ ಅಚ್ಚರಿಗಳ ಆಗರ: ನಿವೃತ್ತಿಯ ಹಿಂದಿನ ದಿನವೇ ನಡೆದಿತ್ತು ಕೌತುಕ!

    ನವದೆಹಲಿ: ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ( IAF Mi-17V5) ತಮಿಳುನಾಡಿನ ಊಟಿ ಬಳಿ ಪತನಗೊಂಡಿದ್ದು,  ಅದರ ಪ್ರಯಾಣಿಸುತ್ತಿದ್ದ ಬಿಪಿನ್‌ ರಾವತ್‌ ಅವರು ಕೂಡ ಪ್ರಾಣ ಕಳೆದುಕೊಂಡಿದ್ದಾರೆ. 

    ಇವರು ಸಾವನ್ನು ಜಯಿಸಿ ಬರಲು ಮಾಡಿದ ಪ್ರಾರ್ಥನೆಗಳ ಈಡೇರಲಿಲ್ಲ. ಸೇನೆಯ ಅಪೂರ್ವ ವ್ಯಕ್ತಿಯೊಬ್ಬರನ್ನು ಈ ದೇಶ ಕಳೆದುಕೊಂಡಂತಾಗಿದೆ. 

    ಅಷ್ಟಕ್ಕೂ ಬಿಪಿನ್‌ ರಾವತ್‌ ಯಾರು ಗೊತ್ತಾ? ಇವರು ಮಾಡಿರುವ ಸಾಧನೆ ಎಂಥದ್ದು? ಸೇನೆಯ ಕಾನೂನನ್ನೇ ಬದಲಿಸಿರುವ ಇವರ ವ್ಯಕ್ತಿತ್ವ ಎಂಥದ್ದು ಎನ್ನುವುದೇ ಕುತೂಹಲ.

    ಅಷ್ಟಕ್ಕೂ ಜನರಲ್ ಬಿಪಿನ್ ರಾವತ್ ಅವರು, 2019ರಲ್ಲಿ ಭಾರತೀಯ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ ನೇಮಕಗೊಂಡವರು. ಅಸಲಿಗೆ ಈ ಹುದ್ದೆ ಸೃಷ್ಟಿಯಾಗಿದ್ದೇ ರಾವತ್‌ ಅವರಿಂದ. ಭೂ ಸೇನೆ, ನೌಕಾ ಪಡೆ ಹಾಗೂ ವಾಯುಪಡೆ ಈ ಮೂರು ವಿಭಾಗಗಳಿಗೆ ಇದಕ್ಕೂ ಮುನ್ನ ಮುಖ್ಯಸ್ಥರು ಎಂಬ ಹುದ್ದೆಯೇ ಇರಲಿಲ್ಲ. ಇದು ಸಂಪೂರ್ಣವಾಗಿ ರಾಷ್ಟ್ರಪತಿಗಳ ಅಂಕಿತದಲ್ಲಿತ್ತು.

    ಆದರೆ ರಾಷ್ಟ್ರಪತಿಯವರಿಗೆ ಇಂಥದ್ದೊಂದು ಹುದ್ದೆಯನ್ನೂ ನಿರ್ವಹಿಸುವುದು ಕಷ್ಟ ಎಂಬ ಕಾರಣಕ್ಕೆ ಪರಮೋಚ್ಚ ಮಿಲಿಟರಿ ಅಧಿಕಾರಿಯ ನೇಮಕ ಆಗಬೇಕೆಂದು ಬಹಳ ವರ್ಷಗಳಿಂದಲೂ ಹೋರಾಟ ನಡೆದಿತ್ತು. ಈ ಹೋರಾಟದ ಕಿಚ್ಚು ಹೆಚ್ಚಾಗಿದ್ದು, 1999ರಲ್ಲಿ ನಡೆದ ಕಾರ್ಗಿಲ್‌ ಯುದ್ಧದಲ್ಲಿ. ಈ ಸಮಯದಲ್ಲಿ ಪಾಕಿಸ್ತಾನವನ್ನು ಹಿಮ್ಮೆಟ್ಟಿಸುವಲ್ಲಿ ಭಾರತೀಯ ಯೋಧರು ಸಫಲರಾಗಿದ್ದರೂ ಕೂಡ ಯುದ್ಧದಲ್ಲಿ ಸೇನೆಯ ಹಲವು ಲೋಪದೋಷಗಳು ಎಲ್ಲರನ್ನೂ ಬಹಳ ಚಿಂತೆಗೆ ಈಡುಮಾಡಿತ್ತು. ಆ ಸಮಯದಲ್ಲಿ ರಚನೆಯಾದ ಸಮಿತಿ ಕೂಡ ಈ ಮೂರೂ ಸೇನೆಗೂ ಒಬ್ಬ ದಂಡಾಧಿಕಾರಿ ಇರಬೇಕು ಎಂದು ಹೇಳುತ್ತಲೇ ಬಂದಿತ್ತು.

    ಆದರೆ ಹಿಂದಿನ ಸರ್ಕಾರಗಳು ಅದನ್ನು ಅಷ್ಟಾಗಿ ಪರಿಗಣನೆಗೆ ತೆಗೆದುಕೊಂಡಿರಲಿಲ್ಲ. ನಂತರ ಪ್ರಧಾನಿ ನರೇಂದ್ರ ಮೋದಿಯವರು ಅದನ್ನು ಜಾರಿಗೆ ತಂದು ಜನರಲ್ ಬಿಪಿನ್ ರಾವತ್ ಅವರನ್ನು ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ ನೇಮಕ ಮಾಡಿದರು.

    ಆದರೆ ಅಲ್ಲಿಯೂ ಅಚ್ಚರಿಯೊಂದು ನಡೆದಿತ್ತು. ಅದಾಗಲೇ ರಾವತ್‌ ಅವರು ನಿವೃತ್ತರಾಗುವುದರಲ್ಲಿದ್ದರು. ಆದರೆ ಮಾರನೆಯ ದಿನ ನಿವೃತ್ತಿ ಎಂದರೆ ಹಿಂದಿನ ದಿನವೇ 62 ವರ್ಷದ ಬಿಪಿನ್ ರಾವತ್ ಅವರನ್ನು ಈ ಹುದ್ದೆಗೆ ನೇಮಕ ಮಾಡಲಾಗಿತ್ತು. ಅವರಿಗಿಂತಲೂ ಈ ಹುದ್ದೆ ಏರಲು ಸರಿಸಾಟಿ ಯಾರೂ ಇಲ್ಲ ಎಂಬುದನ್ನು ಕೇಂದ್ರ ಸರ್ಕಾರ ಅರಿತಿತ್ತು. ಇದೇ ಕಾರಣಕ್ಕೆ ಅವರನ್ನು ನೇಮಕ ಮಾಡಿದ್ದರೂ ಅಲ್ಲದೇ ಕಾನೂನು ಕೂಡ ಬದಲಾಯಿತು. ಸೇನಾ ಮುಖ್ಯಸ್ಥರ ವಯೋಮಿತಿಯನ್ನು 62ರಿಂದ 65 ವರ್ಷಕ್ಕೆ ಏರಿಸಲಾಯಿತು. ಈ ಮೂಲಕ ರಾವತ್‌ ಅವರಿಗೆ ಮೂರು ವರ್ಷಗಳ ಅಧಿಕಾರಾವಧಿ ಸಿಕ್ಕಿತು.

    ಈ ಮೂರೂ ಸೇನೆಗಳಲ್ಲಿ ಸಹಕಾರ, ಸಮನ್ವಯತೆ ಮತ್ತು ಹೊಂದಾಣಿಕೆ ಏರ್ಪಡಿಸುವ ಜವಾಬ್ದಾರಿ ಈ ಹುದ್ದೆಗೆ ಇರುತ್ತದೆ. ತುರ್ತು ಪರಿಸ್ಥಿತಿ ಎದುರಾದಾಗ, ದೇಶದ ಭದ್ರತೆಯ ಸಂದರ್ಭದಲ್ಲಿ ಶೀಘ್ರದಲ್ಲಿ ನಿರ್ಧಾರ ತೆಗೆದುಕೊಳ್ಳುವ ಜವಾಬ್ದಾರಿ ಇವರ ಮೇಲಿರುತ್ತದೆ. ಈ ಸಂದರ್ಭಗಳಲ್ಲಿ ಸರ್ಕಾರವು ಮೂರು ಸೇನಾಪಡೆಗಳ ಮುಖ್ಯಸ್ಥರನ್ನು ಸಂಪರ್ಕಿಸಿ ಸಮಾಲೋಚಿಸುವ ಪ್ರಮೇಯ ಇರುವುದಿಲ್ಲ. ಸೇನಾ ವಿಚಾರದಲ್ಲಿ ಇವರೇ ಸರ್ಕಾರದ ಪಾಲಿಗೆ ಏಕಗವಾಕ್ಷಿಯಾಗಿರಲಿದ್ದಾರೆ.

    ಬಿಪಿನ್ ರಾವತ್ ಅವರ ಹಿನ್ನೆಲೆ ಹೀಗಿದೆ:
    1958, ಮಾರ್ಚ್ 16ರಂದು ಉತ್ತರಾಖಂಡ್​ನ ಪೌರಿಯಲ್ಲಿ ಇವರು ಜನಿಸಿದ್ದಾರೆ. ಇವರದ್ದು ಸೇನಾ ಕುಟುಂಬವೇ. ಆದ್ದರಿಂದ ದೇಶಭಕ್ತಿ ಇವರ ಕಣಕಣದಲ್ಲಿಯೂ ಹರಿಯುತ್ತಿತ್ತು. 1978ರಲ್ಲಿ ಗೂರ್ಖಾ ರೆಜಿಮೆಂಟ್ ಮೂಲಕ ಸೇನೆಗೆ ಸೇರಿಕೊಂಡರು. 2016ರಲ್ಲಿ ಭಾರತೀಯ ಸೇನಾ ಪಡೆ ಮುಖ್ಯಸ್ಥರಾಗಿ ನಿಯುಕ್ತಿಗೊಂಡರು.

    1987ರಲ್ಲಿ ಅರುಣಾಚಲ ಪ್ರದೇಶದ ಸುಮದೋರೊಂಗ್‌ಚ್ಯೂ ಪ್ರದೇಶದಲ್ಲಿ ಚೀನಾ ಮತ್ತು ಭಾರತ ಎದುರುಬದುರಾದ ಸಮಯದಲ್ಲಿ ರಾವತ್ ನೇತೃತ್ವದ ಬಟಾಲಿಯನ್ ಪ್ರಮುಖ ಪಾತ್ರ ವಹಿಸಿರುವುದು ಉಲ್ಲೇಖಾರ್ಹ. 2015ರಲ್ಲಿ ಮಯನ್ಮಾರ್​ನಲ್ಲಿ ಭಯೋತ್ಪಾದಕರ ವಿರುದ್ಧ ನಡೆದ ಕ್ಷಿಪ್ರ ಕಾರ್ಯಾಚರಣೆಯಲ್ಲೂ ಇವರ ಪಾತ್ರ ಶ್ಲಾಘನೀಯ. ಕಾಂಗೋದಲ್ಲಿ ವಿಶ್ವಸಂಸ್ಥೆಯ ಪರವಾಗಿ ಹೋದ ಭಾರತೀಯ ಸೇನಾ ಪಡೆಯ ನೇತೃತ್ವವನ್ನು ರಾವತ್ ಅವರೇ ವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts