ಹೈದರಾಬಾದ್: ಕರೊನಾ ವೈರಸ್ ಹಾವಳಿ ಕ್ಷಣದಿಂದ ಕ್ಷಣಕ್ಕೆ ಹೆಚ್ಚುತ್ತಿರುವ ಬೆನ್ನಲ್ಲಿಯೇ ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗದೇ ಪರದಾಟ ನಡೆದಿದೆ.
ಇದೀಗ ಕರೊನಾ ಗಣ್ಯಾತಿಗಣ್ಯರ ದೇಹವನ್ನೂ ಪ್ರವೇಶಿಸುತ್ತಿರುವ ಹಿನ್ನೆಲೆಯಲ್ಲಿ ಯಾರಿಗೆ ಯಾವಾಗ ಸೋಂಕು ತಗುಲುವುದೋ ಎನ್ನುವ ಭಯ. ಒಂದೆಡೆ ಸೋಂಕು ತಗುಲಿದರೂ ಹಾಸಿಗೆ ಸಿಗದೇ ಪ್ರಾಣ ಬಿಡುತ್ತಿರುವವರು ಒಂದೆಡೆಯಾದರೆ, ಅದೇ ಮತ್ತೊಂದೆಡೆ ರೋಗವೂ ಇಲ್ಲ, ಲಕ್ಷಣವೂ ಇಲ್ಲ… ಆದರೂ ಆಸ್ಪತ್ರೆಗಳಲ್ಲಿ ಹಾಸಿಗೆಯನ್ನು ಮೊದಲೇ ಕಾಯ್ದಿರಿಸಿರುವ ವಿಚಿತ್ರ ಘಟನೆ ಹೈದರಾಬಾದ್ನಲ್ಲಿ ನಡೆಯುತ್ತಿದೆ.
ಹೈದರಾಬಾದ್ನ ಐದಾರು ಆಸ್ಪತ್ರೆಗಳಲ್ಲಿ ಈ ಘಟನೆ ನಡೆದಿದ್ದು, ಅಧಿಕಾರಿಗಳ ತನಿಖೆಯಿಂದ ಇದೀಗ ಬಹಿರಂಗಗೊಂಡಿದೆ.
ಅಷ್ಟಕ್ಕೂ ಇಂಥದ್ದೊಂದು ಕೆಲಸ ಮಾಡುತ್ತಿರುವವರು ಸಿನಿಮಾ ನಟರು, ಶ್ರೀಮಂತರು, ರಾಜಕಾರಣಿಗಳು! ಹೌದು. ಹೈದರಾಬಾದ್ನ ಪ್ರತಿಷ್ಠಿತ ಆಸ್ಪತ್ರೆಗಳಿಗೆ ಹೋದರೆ ಈ ’ಗಣ್ಯರ’ ಹೆಸರಿನಲ್ಲಿ ಕೆಲವು ಹಾಸಿಗೆಗಳು ಬುಕ್ ಆಗಿರುವುದನ್ನು ನೋಡಬಹುದು. ದಿನಕ್ಕೆ ಒಂದೂವರೆ ಲಕ್ಷ ರೂಪಾಯಿ ನೀಡಿ ಐಸಿಯು ಬೆಡ್ಗಳನ್ನು ಕಾಯ್ದಿರಿಸುತ್ತಿದ್ದಾರೆ.
ಇದನ್ನೂ ಓದಿ: ಮಹಿಳೆಯರ ಶೌಚಗೃಹ ಶುಚಿಗೊಳಿಸಿ ಅಧಿಕಾರಿಗಳಿಗೆ ಪಾಠ ಕಲಿಸಿದ ಸಚಿವ!
ಕರೊನಾ ಎಲ್ಲರಿಗೂ ಒಕ್ಕರಿಸುತ್ತಿರುವ ಹಿನ್ನೆಲೆಯಲ್ಲಿ ತಮಗೇನಾದರೂ ಈ ಸೋಂಕು ತಗುಲಿದರೆ ಬೆಡ್ ಸಿಗದೇಹೋಗಬಹುದು ಎಂಬ ಭೀತಿಯಿಂದ ಈ ಕೆಲಸ ಮಾಡುತ್ತಿದ್ದಾರಂತೆ! ತೆಲಂಗಾಣದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂದೆ ತಮಗೆ ಹಾಸಿಗೆ ಸಿಗದೇ ಹೋಗಬಹುದು ಎನ್ನುವ ಭಯ.
ಈ ಕುರಿತು ದೂರು ದಾಖಲಾಗಿದ್ದು, ತಾವು ತಪಾಸಣೆ ನಡೆಸಿರುವುದಾಗಿ ತೆಲಂಗಾಣದ ಸಾರ್ವಜನಿಕ ಆರೋಗ್ಯ ಇಲಾಖೆಯ ನಿರ್ದೇಶಕ ಮತ್ತು ರಾಜ್ಯದಲ್ಲಿನ ಕರೊನಾ ಪ್ರಕರಣಗಳ ಸಮನ್ವಯಕಾರ ಡಾ. ಜಿ.ಶ್ರೀನಿವಾಸ್ ರಾವ್ ಹೇಳಿದ್ದಾರೆ. ಅಲ್ಲದೆ ಈ ಕುರಿತು ತನಿಖೆಗೆ ಆದೇಶಿಸಿರುವುದಾಗಿಯೂ ತಿಳಿಸಿದ್ದಾರೆ.
ಇವರ ಹೆಸರಿನಲ್ಲಿ ಬೆಡ್ ಖಾಲಿ ಇದ್ದ ಕಾರಣ, ನಿಜವಾಗಿ ಸೋಂಕಿತರು ಬಂದರೂ ಹಾಸಿಗೆ ಸಿಗುತ್ತಿಲ್ಲ. ಇದು ತುಂಬಾ ಆಘಾತಕಾರಿ ವಿಷಯ ಎಂದು ಅಧಿಕಾರಿಗಳು ಹೇಳಿದ್ದಾರೆ.
ಒಂದು ಕಪ್ ಟೀಗೆ ₹100: ಮೋದಿಗೆ ಹೋಯಿತೊಂದು ಮೇಲ್- ಮುಂದೆ ನಡೆದದ್ದೆಲ್ಲ ಅಚ್ಚರಿಯೋ ಅಚ್ಚರಿ!
f