ಬೆಂಗಳೂರು: ಬಿಡಿಎ ಅಭಿವೃದ್ಧಿಪಡಿಸಿರುವ ಸರ್.ಎಂ. ವಿಶ್ವೇಶ್ವರಯ್ಯ ಲೇಔಟ್ಗೆ ಸಂಬಂಧ ನಕಲಿ ದಾಖಲೆ ಸೃಷ್ಟಿಸಿ ಸೈಟು ಕಬಳಿಸಿರುವ ಪ್ರಕರಣದಲ್ಲಿ ಬಿಡಿಎ ಅಧಿಕಾರಿ, ಸಿಬ್ಬಂದಿ ಕೈವಾಡ ಇರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಈಗಾಗಲೇ ಬಿಡಿಎ ವಿಚಕ್ಷಣ ದಳದ ಅಧಿಕಾರಿಗಳು ಕೊಟ್ಟ ದೂರಿನ ಮೇರೆಗೆ ಶೇಷಾದ್ರಿಪುರ ಠಾಣೆಯಲ್ಲಿ ಪ್ರತ್ಯೇಕ ಮೂರು ಎಫ್ಐಆರ್ ದಾಖಲಾಗಿವೆ. ಅಸಲಿ ದಾಖಲೆಯಂತೆ ನಕಲಿ ದಾಖಲೆ ಸೃಷ್ಟಿಸುವಲ್ಲಿ ವಂಚಕರ ಜತೆ ಬಿಡಿಎ ಅಧಿಕಾರಿಗಳು ಭಾಗಿಯಾಗಿರುವುದು ಗೊತ್ತಾಗಿದೆ. ಅದಕ್ಕಾಗಿ ಅಧಿಕಾರಿಗಳ ವಿರುದ್ಧವೂ ಕೇಸ್ ದಾಖಲಾಗಿದ್ದು, ಅಧಿಕಾರಿಗಳು ಯಾರೆಂದು ಶೇಷಾದ್ರಿಪುರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಮೂಲೆ ನಿವೇಶನಗಳನ್ನು ಇ-ಹರಾಜಿಗೆ ಇ-ನೋಟಿಫಿಕೇಷನ್ ಹೊರಡಿಸಿತ್ತು. ಆರೋಪಿ ಮಂಜುನಾಯ್ಕ ಮತ್ತು ಇತರ ಆರೋಪಿಗಳು ವಂಚನೆಗೆ ಸ್ಕೆಚ್ ಹಾಕಿದ್ದರು. ನೋಟಿಫಿಕೇಷನ್ನಲ್ಲಿ ಉಲ್ಲೇಖಿಸಿದ್ದ ಸೈಟ್ ನಂಬರ್ನ್ನು ಬದಲಾಯಿಸಿ ನಕಲಿ ದಾಖಲೆ ಸೃಷ್ಟಿಸಿದ್ದರು. ಉಪಕಾರ್ಯದರ್ಶಿ-4ರ ಕಚೇರಿಗೆ ಹಾಜರುಪಡಿಸಿ ಸೈಟನ್ನು ಜ.1ರಂದು ಮಂಜುನಾಯ್ಕ , ಜಿಲ್ಲಾ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಕ್ರಯ ಪತ್ರ ಮಾಡಿಕೊಂಡು ಆನ್ಲೈನ್ನಲ್ಲಿ ಖಾತಾ ಪಡೆದುಕೊಂಡು ಬಿಡಿಎಗೆ ಕೋಟ್ಯಂತರ ರೂ. ವಂಚನೆ ಮಾಡಿದ್ದಾನೆ.
ಇದೇ ರೀತಿ ಆರೋಪಿ ರಮೇಶ್ ಬಾಬು ಎಂಬಾತ ಕ್ರಮ ಸಂಖ್ಯೆ, ಸೈಟ್ನಂಬರ್ ಬದಲಾಯಿಸಿ ಬಿಡಿಎ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿದಂತೆ ನಕಲಿ ಚಲನ್ ಸೃಷ್ಟಿಸಿಕೊಂಡು ನೈಜ ಕಡತಗಳಂತೆ ತಯಾರಿಸಿ ನಕಲಿ ಸಹಿ ಮತ್ತು ಸೀಲು ಒತ್ತಿಕೊಂಡಿದ್ದ. ಉಪಕಾರ್ಯದರ್ಶಿ-4ರ ಕಚೇರಿಗೆ ಹಾಜರುಪಡಿಸಿ ಡಿಸೆಂಬರ್ 22ರಂದು ಜಿಲ್ಲಾ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಕ್ರಯ ಪತ್ರ ಮಾಡಿಕೊಂಡು ಖಾತಾ ಮಾಡಿಸಿಕೊಂಡಿದ್ದ.
3ನೇ ಪ್ರಕರಣದಲ್ಲಿ ಆರೋಪಿ ಶ್ರೀನಿವಾಸ್ ಎಂಬಾತ, ಇ-ನೋಟಿಫಿಕೇಷನ್ನಲ್ಲಿ ಉಲ್ಲೇಖಿತ ವಿಶ್ವೇಶ್ವರಯ್ಯ ಬಡಾವಣೆಯ ಸೈಟ್ ಕ್ರಮ ಸಂಖ್ಯೆ ಮತ್ತು ಸೈಟ್ ನಂಬರ್ ಬದಲಾಯಿಸಿ ಬಿಡಿಎ ಅಧಿಕಾರಿಗಳ ಜತೆ ಸೇರಿ ನಕಲಿ ದಾಖಲೆ ಸೃಷ್ಟಿಸಿಕೊಂಡಿದ್ದ. ಬಿಡಿಎ ಅಧಿಕಾರಿಗಳ ನಕಲಿ ಸಹಿ, ಸೀಲು ಹಾಕಿಕೊಂಡು ನೈಜ ಕಡತಗಳಂತೆ ತಯಾರಿಸಿಕೊಂಡು ಡಿಸೆಂಬರ್ 24ರಂದು ನೋಂದಣಿ ಕಚೇರಿಯಲ್ಲಿ ಕ್ರಯ ನೋಂದಣಿ ಮಾಡಿಕೊಂಡು ಬಿಡಿಎಗೆ ಕೋಟ್ಯಂತರ ರೂ. ವಂಚನೆ ಮಾಡಿದ್ದ. ಈ ಮೂರು ಪ್ರಕರಣಗಳಲ್ಲಿ ಬಿಡಿಎ ಅಧಿಕಾರಿ, ಸಿಬ್ಬಂದಿ ಭಾಗಿಯಾಗಿರುವುದು ಅನುಮಾನ ಹುಟ್ಟಿಸಿದೆ. ಅದಕ್ಕಾಗಿ ಬಿಡಿಎ ಅಧಿಕಾರಿಗಳ ವಿರುದ್ಧವೂ ಎ್ಐಆರ್ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ತಲೆಮರೆಸಿಕೊಂಡ ಆರೋಪಿಗಳು :
ನಕಲಿ ದಾಖಲೆ ಸೃಷ್ಟಿಸಿ ಬಿಡಿಎ ಸೈಟ್ ಕ್ರಯ ಪತ್ರ ಮಾಡಿಕೊಂಡಿರುವ ಮೂವರು ಆರೋಪಿಗಳು ಪ್ರಕರಣ ಬೆಳಕಿಗೆ ಬರುತ್ತಿದಂತೆ ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದಾರೆ. ವಂಚಕರ ಪತ್ತೆಗೆ ಬಲೆಬೀಸಲಾಗಿದೆ. ಬಿಡಿಎ ಅಧಿಕಾರಿಗಳ ಪತ್ತೆ ಮಾಡಲು ಕೆಲ ದಾಖಲೆಗಳನ್ನು ನೀಡುವಂತೆ ಮತ್ತು ವಿಚಾರಣೆಗೆ ಹಾಜರಾಗುವಂತೆ ಬಿಡಿಎಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿದ್ದೆಗೆ ಜಾರಿದ ಟ್ರಕ್ ಚಾಲಕ- ನಾಲ್ವರ ದುರ್ಮರಣ: ರಸ್ತೆಯಲ್ಲಿ ಬಿದ್ದ ಮೀನು ಹೆಕ್ಕಲು ನೂಕುನುಗ್ಗಲು!
800 ಮಕ್ಕಳನ್ನು ಹುಟ್ಟಿಸಿದ ಸ್ಫುರದ್ರೂಪಿ ಹಾಲು ಮಾರಾಟಗಾರ; ಡಿಎನ್ಎಯಿಂದ ಬಯಲಾಯ್ತು ಭಯಾನಕ ಸತ್ಯ!