ಮೈಸೂರು: ಬ್ಯಾಂಕ್ ಮ್ಯಾನೇಜರ್ ಹೆಸರು ಹೇಳಿ ಎಟಿಎಂ ಕಾರ್ಡ್ ಮಾಡಿಸಿಕೊಡುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ಮೋಸ ಮಾಡಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ನಡೆದಿದೆ.
ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ನಲ್ಲಿ ಎಟಿಎಂ ಮಾಡಿಸಿಕೊಡುವುದಾಗಿ ನಂಬಿಸಿ ವಂಚನೆ ಮಾಡಲಾಗಿದೆ. ಕ್ಷಣಾರ್ಧದಲ್ಲಿ 99,999 ರೂ. ಲಪಟಾಯಿಸಿದ್ದಾರೆ ಖದೀಮರು. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಖಾತೆಯಿಂದ ಒಂದು ಲಕ್ಷ ರೂ. ಕೂಡ ಎಗರಿಸಿದ್ದಾರೆ.
ಗುಜರಿ ವ್ಯಾಪಾರಿ ವೃದ್ಧ ಬಷೀರ್ ಅಹಮದ್ ವಂಚನೆಗೊಳಗಾದವರು. ನಂಜನಗೂಡಿನ ನೀಲಕಂಠನಗರದಲ್ಲಿ ಗುಜರಿ ವ್ಯಾಪಾರ ಮಾಡುತ್ತಿದ್ದರು. ಮೊಬೈಲ್ ಮೂಲಕ ಬಷೀರ್ ಅಹಮದ್ರ ಪತ್ನಿ ಷಹಜಹಾನ್ ಅವರನ್ನು ಸಂಪರ್ಕಿಸಿರುವ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ.
ಬ್ಯಾಂಕ್ ಮ್ಯಾನೇಜರ್ ಎಂದು ಪರಿಚಯಿಸಿಕೊಂಡಿರುವ ವಂಚಕ ಎಟಿಎಂನ ಸಂಪೂರ್ಣ ಮಾಹಿತಿ ಪಡೆದುಕೊಂಡು ಖಾತೆಯಲ್ಲಿದ್ದ ಹಣ ಮಂಗಮಾಯ ಮಾಡಿದ್ದಾನೆ.
ಬಷೀರ್ ಅಹಮದ್ ನಂಜನಗೂಡಿನ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ, ಡೆಬಿಟ್ ಕಾರ್ಡ್ ಪಡೆದಿದ್ದರು. ಅಲ್ಲದೆ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ನಲ್ಲೂ ಖಾತೆ ಹೊಂದಿರುವ ಬಷೀರ್ ಅಹಮದ್ ಇದರಲ್ಲಿ ಎಟಿಎಂ ಕಾರ್ಡ್ ಪಡೆದಿರುವುದಿಲ್ಲ. ಈ ಮಾಹಿತಿಯನ್ನು ಸಂಗ್ರಹಿಸಿರುವ ವಂಚಕರು ಎಟಿಎಂ ಮಾಡಿಸಿಕೊಡುವುದಾಗಿ ನಂಬಿಸಿ ಮೊಬೈಲ್ ನಲ್ಲೇ ಖಾತೆಯ ಸಂಪೂರ್ಣ ಮಾಹಿತಿ ಪಡೆದಿದ್ದಾರೆ.
ಒಮ್ಮೆ 49,999 ರೂ. ಮತ್ತೊಮ್ಮೆ 50,000 ರೂ. ಹಣ ಡ್ರಾ ಮಾಡಿಕೊಂಡು ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರೆ. ಹಣ ಕಳೆದುಕೊಂಡ ಬಷೀರ್ ಅಹಮದ್ ಮೈಸೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮತ್ತೆ ಸುದ್ದಿಯಲ್ಲಿ ಬಿಗ್ಬಾಸ್ ಸ್ಪರ್ಧಿ ವೈಜಯಂತಿ: ಆನ್ಲೈನ್ನಲ್ಲಿ ಗೆಳೆಯನ ಜತೆ ಎಂಗೇಜ್ಮೆಂಟ್
‘ಕಿರಾತಕ’ ಬೆಡಗಿ ಓವಿಯಾಳನ್ನು ಓಡಿ ಹೋದವರ ಲಿಸ್ಟ್ಗೆ ಸೇರಿಸಿದ ಯೂಟ್ಯೂಬರ್: ನಟಿ ಗರಂ