ಕೀವ್: ರಷ್ಯಾ-ಯೂಕ್ರೇನ್ ಸಂಘರ್ಷ ಮುಂದುವರೆದಿದ್ದು, ಸೇನಾ ನೆಲೆಗಳ ಮೇಲಷ್ಟೇ ಅಲ್ಲದೇ ಜನರ ಮೇಲೂ ದಾಳಿ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಇಲ್ಲಿಯವರೆಗೆ ಸೇನಾ ಸಿಬ್ಬಂದಿಯ ಜತೆ 137 ಮಂದಿ ನಾಗರಿಕರೂ ಮೊದಲ ದಿನವೇ ಬಲಿಯಾಗಿದ್ದಾರೆ.
ಈ ಬಗ್ಗೆ ಯೂಕ್ರೇನ್ ಮಾಹಿತಿ ನೀಡಿದೆ. ರಷ್ಯಾವು ಸೇನಾ ನೆಲೆಗಳ ಮೇಲೆ ಮಾತ್ರವಲ್ಲದೇ ಜನರ ಮೇಲೂ ದಾಳಿ ಮಾಡುತ್ತಿದೆ. ಪ್ರಮುಖ ನಗರಗಳನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ. ಅಮಾಯಕರ ಬಲಿ ತೆಗೆದುಕೊಳ್ಳುತ್ತಿದೆ. ಈವರೆಗೆ ಸೈನಿಕರು ಸೇರಿದಂತೆ 137 ಜನರು ಹತರಾಗಿದ್ದು, ಇನ್ನೂ ನೂರಾರು ಜನರು ಗಾಯಗೊಂಡಿದ್ದಾರೆ ಎಂದು ಯೂಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಹೇಳಿದ್ದಾರೆ.
ಒಡೆಸಾ ಪ್ರದೇಶದ ಜ್ಮಿನಿ ದ್ವೀಪವನ್ನು ಸಂಪೂರ್ಣ ವಶಕ್ಕೆ ಪಡೆದಿರುವ ರಷ್ಯಾ, ಅಲ್ಲಿರುವ ಎಲ್ಲ ಭದ್ರತಾ ಪಡೆಯ ಸಿಬ್ಬಂದಿಯನ್ನು ಹತ್ಯೆ ಮಾಡಿದೆ. ಜ್ಮಿನಿ ದ್ವೀಪದ ನಮ್ಮ ಎಲ್ಲಾ ಸೈನಿಕರೂ ಹುತಾತ್ಮರಾಗಿದ್ದಾರೆ ಎಂದು ವೊಲೊಡಿಮಿರ್ ಜೆಲೆನ್ಸ್ಕಿ ಮರುಗಿದ್ದಾರೆ.
ಸದ್ಯ ನಾವು ರಷ್ಯಾ ವಿರುದ್ಧ ಏಕಾಂಗಿಯಾಗಿ ಹೋರಾಟ ಮಾಡುತ್ತಿದ್ದೇವೆ. ಬೇರೆ ರಾಷ್ಟ್ರಗಳು ರಷ್ಯಾ ಕ್ರಮವನ್ನು ಖಂಡಿಸಿದರೂ ನೇರವಾಗಿ ನಮಗೆ ಸಹಾಯಹಸ್ತ ಚಾಚಿಲ್ಲ. ಯುದ್ಧದಲ್ಲಿ ಅವು ಭಾಗಿಯಾಗಿಲ್ಲ. ನಾವು ಒಂಟಿಯಾಗಿಯೇ ಎದುರಿಸುತ್ತಿದ್ದೇವೆ ಎಂದಿದ್ದಾರೆ.
ಉಕ್ರೇನ್ನ ಕೀವ್, ಬಾರ್ಕೇವಾ, ಒಡೆಸಾ, ಮಾಮ್ಪ್ರೀತ್ ಹಾಗೂ ಕ್ರಾಮ್ಬೋರೆಸ್ಕೆ ಸೇರಿದಂತೆ 11 ನಗರಗಳನ್ನು ಗುರಿಯಾಗಿರಿಸಿಕೊಂಡು ರಷ್ಯಾ ಸೇನೆ ಕ್ಷಿಪಣಿ ದಾಳಿ ನಡೆಸಿದೆ. ರಷ್ಯಾ 8.5 ಲಕ್ಷ ಸಕ್ರಿಯ ಸೈನಿಕರನ್ನು ಹೊಂದಿದ್ದರೆ, ಉಕ್ರೇನ್ ಕೇವಲ 2 ಲಕ್ಷ ಸಕ್ರಿಯ ಸೈನಿಕರನ್ನು ಹೊಂದಿದೆ. ರಷ್ಯಾದ ರಕ್ಷಣಾ ಬಜೆಟ್ ಉಕ್ರೇನ್ನ 10 ಪಟ್ಟು ಹೆಚ್ಚು. ಪರಿಸ್ಥಿತಿಗಳಲ್ಲಿ, ಉಕ್ರೇನ್ಗೆ ತನ್ನ ರಕ್ಷಣೆಯನ್ನು ಖಾತರಿಪಡಿಸುವ ಮಿಲಿಟರಿ ಸಂಘಟನೆಯ ಅಗತ್ಯವಿದೆ. ಇದೇ ಕಾರಣಕ್ಕೆ ಉಕ್ರೇನ್ ತನ್ನ ಪರ್ಯಾಯ ರಕ್ಷಣಾ ವ್ಯವಸ್ಥೆಯಾಗಿ ನ್ಯಾಟೋವನ್ನು ಆಯ್ಕೆ ಮಾಡಿತ್ತು. ಆದರೆ ಉಕ್ರೇನ್ ನ ಈ ನಿರ್ಧಾರ ರಷ್ಯಾ ಕಣ್ಣು ಕೆಂಪಾಗುವಂತೆ ಮಾಡಿದ್ದು ಅದರ ಮೇಲೆ ಸಮರ ಸಾರಿದೆ.