ಮಾಸ್ಕೋ (ರಷ್ಯಾ): ರಷ್ಯಾ- ಯೂಕ್ರೇನ್ ನಡುವೆ ಯುದ್ಧ ಶುರುವಾಗುತ್ತಿದ್ದಂತೆಯೇ ಇದರ ಕರಿನೆರಳು ವಿಶ್ವಾದ್ಯಂತ ಬೀಳತೊಡಗಿದೆ. ರಷ್ಯಾದ ದಾಳಿಗೆ ಯೂಕ್ರೇನ್ ಉತ್ತರ ನೀಡುತ್ತಿದ್ದರೂ ಅದೀಗ ಭಾರತದ ಸಹಾಯವನ್ನು ಕೋರಿದೆ.
ರಷ್ಯಾಗೆ ನಾವು ಶರಣಾಗಲ್ಲ, ನಾಝಿಗಳಂತೆ ರಷ್ಯಾ ದಾಳಿ ಮಾಡಿದೆ. ನಾವು ಉತ್ತರ ನೀಡುತ್ತೇವೆ ಎಂದು ಯೂಕ್ರೇನ್ ಅಧ್ಯಕ್ಷ ಜೆಲೆಸ್ಕಿ ಒಂದೆಡೆ ಹೇಳುತ್ತಿದ್ದರೆ, ಅತ್ತ ಭಾರತದಲ್ಲಿರುವ ಯೂಕ್ರೇನ್ ರಾಯಭಾರಿ ಪ್ರಧಾನಿ ನರೇಂದ್ರ ಮೋದಿಯವರ ಸಹಾಯವನ್ನು ಕೋರಿದ್ದಾರೆ.
ಈ ಯುದ್ಧವನ್ನು ಪ್ರಧಾನಿ ನರೇಂದ್ರ ಮೋದಿಯವರು ನಿಲ್ಲಿಸಲು ಸಾಧ್ಯ. ಇವರು ವಿಶ್ವದ ಪ್ರಭಾವಿ ನಾಯಕರು. ಯುದ್ಧ ನಿಲ್ಲಿಸಲು ಇವರ ಪಾತ್ರ ಬಹುಮುಖ್ಯವಾಗಿದೆ. ಆದ್ದರಿಂದ ಮಧ್ಯೆ ಪ್ರವೇಶ ಮಾಡಿ ಯುದ್ಧವನ್ನು ನಿಲ್ಲಿಸಿ ಎಂದು ಭಾರತದಲ್ಲಿರುವ ಯೂಕ್ರೇನ್ ರಾಯಭಾರಿ ಇಗೋರ್ ಪೊಲಿಕಾ ಪ್ರಧಾನಿಗೆ ಮನವಿ ಸಲ್ಲಿಸಿದ್ದಾರೆ.
ಯುರೋಪಿನಲ್ಲಿ ಯಾವುದೇ ನಾಗರಿಕತೆ ಇಲ್ಲದಿದ್ದಾಗ ಭಾರತ ಹಲವಾರು ಸಾವಿರ ವರ್ಷಗಳ ಹಿಂದೆಯೇ ಕೌಟಿಲ್ಯ, ಚಾಣಕ್ಯನ ಮೂಲಕ ರಾಜತಾಂತ್ರಿಕತೆಗೆ ಅರ್ಹತೆ ಪಡೆದಿತ್ತು. ಮಹಾಭಾರತದ ಯುದ್ಧದ ಸಮಯದಲ್ಲಿ ಕೊನೆಗೆ ಧರ್ಮಕ್ಕೆ ಗೆಲುವಾಗಿತ್ತು. ಇವುಗಳನ್ನೆಲ್ಲಾ ನೆನಪಿಸಿಕೊಂಡಾಗ ಪ್ರಧಾನಿ ನರೇಂದ್ರ ಮೋದಿಯವರಿಂದಲೇ ಯುದ್ಧ ನಿಲ್ಲಿಸಲು ಸಾಧ್ಯ ಎಂದು ರಾಯಭಾರಿ ಹೇಳಿದ್ದಾರೆ.
ಅದೇ ಇನ್ನೊಂದೆಡೆ, ಯೂಕ್ರೇನ್ ಬಿಕ್ಕಟ್ಟಿನ ವಿಚಾರದ ಕುರಿತಂತೆ ಭಾರತದ ಸ್ವತಂತ್ರ (ತಟಸ್ಥ) ನಿಲುವನ್ನು ತಳೆದಿದ್ದು, ಇದನ್ನು ನಾವು ಸ್ವಾಗತಿಸುತ್ತೇವೆ ಎಂದು ರಷ್ಯಾ ಹೇಳಿದೆ. ಭಾರತವು ಜವಾಬ್ದಾರಿಯುತ ಜಾಗತಿಕ ಶಕ್ತಿಯಾಗಿ ಪ್ರಮುಖ ಪಾತ್ರ ವಹಿಸುತ್ತಿದೆ. ಜಾಗತಿಕ ವ್ಯವಹಾರಗಳಿಗೆ ಸ್ವತಂತ್ರ ಮತ್ತು ಸಮತೋಲಿತ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎಂದು ರಷ್ಯಾ ಮಿಷನ್ನ ಉಪ ಮುಖ್ಯಸ್ಥ ರೋಮನ್ ಬಾಬುಶ್ಕಿನ್ ಹೇಳಿದ್ದಾರೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ನ ಎರಡು ಪ್ರದೇಶಗಳನ್ನು ಸ್ವತಂತ್ರ ದೇಶಗಳನ್ನಾಗಿ ಘೋಷಿಸಿದ ನಂತರ ಉದ್ವಿಗ್ನತೆ ಹೆಚ್ಚಾಗಿತ್ತು. ಈ ಮಧ್ಯೆ ವಿಶ್ವಸಂಸ್ಥೆಯ ತುರ್ತುಸಭೆಯಲ್ಲಿ ಭಾಗವಹಿಸಿದ್ದ ಭಾರತ, ಯೂಕ್ರೇನ್ ಮತ್ತು ರಷ್ಯಾ ಶಾಂತಿ ಕಾಪಾಡಬೇಕೆಂದು ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಬಾಬುಶ್ಕಿನ್ ಈ ಪ್ರತಿಕ್ರಿಯೆ ನೀಡಿದ್ದಾರೆ.‘
ರಷ್ಯಾ-ಯೂಕ್ರೇನ್ ಬಿಕ್ಕಟ್ಟು : ಭಾರತದ ವಿಮಾನಗಳು ವಾಪಸ್- ಕೀವ್ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರು
ಷೇರುಪೇಟೆ ಹೂಡಿಕೆದಾರರಿಗೆ ಶಾಕ್ ಕೊಟ್ಟ ರಷ್ಯಾ: ಒಂದೇ ತಾಸಲ್ಲಿ 8 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಕುಸಿತ!