ಶೃಂಗೇರಿ: ಕೊಪ್ಪದ ಸಹಕಾರ ಸಾರಿಗೆ ಬಸ್ ಸಂಚಾರ ಸ್ಥಗಿತಗೊಂಡ ನಂತರ ಕೆಎಸ್ಆರ್ಟಿಸಿ ಹಾಗೂ ಅನ್ಯ ಖಾಸಗಿ ಬಸ್ಗಳು ಸಂಚಾರ ಆರಂಭಿಸಿರುವುದರಿಂದ ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗಿದೆ.
ಕೆಎಸ್ಆರ್ಟಿಸಿ ಉಡುಪಿ ಡಿಪೋದಿಂದ ಎರಡು ಮಿನಿ ಬಸ್ ಹಾಗೂ ಶಿವಮೊಗ್ಗ ಡಿಪೋದಿಂದ 5 ಬಸ್ಗಳನ್ನು ಶೃಂಗೇರಿಗೆ ಬಿಡಲಾಗಿದೆ. ಇವು ಪ್ರತಿದಿನ ತಲಾ 2 ಟ್ರಿಪ್ ಸಂಚರಿಸಲಿವೆ. ಉಡುಪಿ, ಮಣಿಪಾಲ, ಹೆಬ್ರಿಗೆ ನೇರವಾಗಿ ಹೋಗಲು ಮಿನಿ ಬಸ್ ಸಂಚಾರ ಆರಂಭಿಸಲಾಗಿದೆ.
ಶೃಂಗೇರಿ-ಶಿವಮೊಗ್ಗ ಮಾರ್ಗದಲ್ಲಿ ಇದುವರೆಗೂ ಕೆಎಸ್ಆರ್ಟಿಸಿ ಬಸ್ ಇರಲಿಲ್ಲ. ಸಹಕಾರ ಸಾರಿಗೆ ಬಸ್ ನಿಲುಗಡೆಯಿಂದ ಬಹಳಷ್ಟು ಮಾರ್ಗಸೂಚಿ ವೇಳೆಯಲ್ಲಿ ಪ್ರಯಾಣಿಕರಿಗೆ ತೊಂದರೆ ಕಾಣಿಸಿಕೊಂಡಿತ್ತು. ನಿನ್ನೆಯಿಂದ ಕೆಎಸ್ಆರ್ಟಿಸಿ ಶಿವಮೊಗ್ಗ ಡಿಪೋದಿಂದ ಶೃಂಗೇರಿಗೆ 5 ಬಸ್ಗಳು ಸಂಚರಿಸುತ್ತಿವೆ. ಸ್ಥಳೀಯ ಗ್ರಾಮಾಂತರ ಭಾಗಕ್ಕೆ ಸಹಕಾರ ಬಸ್ ಸಮಯಕ್ಕೆ ಖಾಸಗಿ ಬಸ್ಗಳು ಸಂಚರಿಸಲು ಮುಂದೆ ಬಂದಿವೆ. ಇದರಿಂದ ಕಿಗ್ಗಾ-ಶೃಂಗೇರಿ ನಡುವಿನ ಬಸ್ ಸಂಚಾರ ಆರಂಭಗೊಂಡಿದೆ.
ಹಿಂದೆ ಶಂಕರ್ ಕಂಪನಿ ಬಸ್ ಇಲ್ಲಿ ಏಕಸ್ವಾಮ್ಯ ಹೊಂದಿತ್ತು. ಇದರ ನಿಲುಗಡೆಯಾದಾಗ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ನಂತರದ ದಿನಗಳಲ್ಲಿ ಅದರ ಸ್ಥಾನವನ್ನು ಸಹಕಾರ ಸಾರಿಗೆ ಅಲಂಕರಿಸಿತ್ತು. ಇತ್ತೀಚಿನ ದಶಕಗಳಲ್ಲಿ ಬೇರೆ ಖಾಸಗಿ ಸಂಸ್ಥೆ ಬಸ್ಗಳೂ ಬರುತ್ತಿದ್ದರಿಂದ ಮತ್ತು ಮಂಗಳೂರಿನಿಂದ ಬಸ್ಗಳು ಸಂಚಾರ ಆರಂಭಿಸಿದ್ದರಿಂದ ಟಿಸಿಎಸ್ ನಿಲುಗಡೆಯಿಂದ ಹೆಚ್ಚಿನ ತೊಂದರೆಯಾಗಿಲ್ಲ.
ಕೊಪ್ಪ ಸಹಕಾರ ಸಾರಿಗೆ ಸಂಸ್ಥೆ ನೀಡಿರುವ ಸೇವೆಯನ್ನು ಪ್ರತಿಯೊಬ್ಬ ಪ್ರಯಾಣಿಕರೂ ಗೌರವಿಸುತ್ತಾರೆ. ಈ ಸಂಸ್ಥೆಯ ಏಳಿಗೆಯನ್ನು ತಮ್ಮದೇ ಏಳಿಗೆ ಎಂದು ಜನರು ಸಂಭ್ರಮಿಸಿದ್ದಾರೆ. ಸಂಸ್ಥೆ ಅವನತಿಯತ್ತ ಸಾಗಿದಾಗ ಮರುಕಪಟ್ಟಿದ್ದರು. ಶೀಘ್ರವೇ ಸಂಸ್ಥೆಯ ಕಷ್ಟಗಳು ಪರಿಹಾರವಾಗಿ ಮತ್ತೊಮ್ಮೆ ವೈಭವದ ದಿನಗಳನ್ನು ಸಂಸ್ಥೆ ಸಂಪಾದಿಸಬೇಕು ಎಂಬುದು ಪ್ರಯಾಣಿಕರ ಹಾರೈಕೆ.