ಶಿವಮೊಗ್ಗ: ಕೈಗಾರಿಕೋದ್ಯಮಿ, ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ 74 ವಸಂತಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಜ.27ರಂದು ಸವಳಂಗ ರಸ್ತೆಯ ಸರ್ಜಿ ಕನ್ವೆನ್ಷನ್ ಹಾಲ್ನಲ್ಲಿ ಅಮೃತಮಯಿ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ. ಇದಕ್ಕಾಗಿ ಅಭಿನಂದನಾ ಸಮಿತಿಯನ್ನೂ ರಚನೆ ಮಾಡಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಡಿ.ಜಿ.ಬೆನಕಪ್ಪ ತಿಳಿಸಿದರು.
ಜ.9 ರುದ್ರೇಗೌಡ ಅವರ ಜನ್ಮದಿನ. ಆದರೆ ಅಭಿನಂದನಾ ಸಮಾರಂಭವನ್ನು ಜ.27ಕ್ಕೆ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಬೆಳಗ್ಗೆ 10.30ರಿಂದ ವಿವಿಧ ವಿಚಾರಗೋಷ್ಠಿಗಳು ನಡೆಯಲಿವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
27ರ ಬೆಳಗ್ಗೆ 10.30ಕ್ಕೆ ವಿಚಾರಗೋಷ್ಠಿಯನ್ನು ನಾಡೋಜ ಷಡಕ್ಷರಿ ಉದ್ಘಾಟಿಸಲಿದ್ದಾರೆ. ರುದ್ರೇಗೌಡರ ವ್ಯಕ್ತಿತ್ವದ ಭಾಗವಾದ ರಾಜಕಾರಣ, ಸಮಾಜಸೇವೆ, ಕೈಗಾರಿಕಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪರಿಸರ ಪ್ರಜ್ಞೆ, ಮೌಲ್ಯಧಾರಿತ ರಾಜಕಾರಣ, ಸಾಧನೆಯ ಗುರಿ ಎಂಬ ವಿಷಯದ ಕುರಿತು ತೇಜಸ್ವಿನಿ ಅನಂತಕುಮಾರ್, ಗೋವಿಂದ್, ಶಾಸಕ ಸುನೀಲ್ಕುಮಾರ್ ಮಾತನಾಡಲಿದ್ದಾರೆ ಎಂದರು.
ವಿವಿಧ ಕ್ಷೇತ್ರಗಳಲ್ಲಿ ಆಯ್ದ ಯುವಕರೊಂದಿಗೆ ಬದುಕು ಸಾಧನೆ ಕುರಿತು ಅತರಂಗ-ಬಹಿರಂಗ ಸಂವಾದ ಕಾರ್ಯಕ್ರಮ ಮಧ್ಯಾಹ್ನ 3ರಿಂದ ಸಂಜೆ 5ಗಂಟೆಯವರೆಗೆ ನಡೆಯಲಿದೆ. ಸಂವಾದವನ್ನು ರುದ್ರೇಗೌಡ ಅವರ ಪುತ್ರಿ ಚೈತ್ರಾ ಅರುಣ್ ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ. ಧನಂಜಯ ಸರ್ಜಿ ಮಾತನಾಡಿ, ರುದ್ರೇಗೌಡರು ಸಾಧನೆಯ ಹರಿಕಾರರು. ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಅವರು ಯುವಕರಿಗೆ ಸ್ಫೂರ್ತಿಯಾಗಿದ್ದಾರೆ. ಸಜ್ಜನ ರಾಜಕಾರಣಿ, ಸತತ ಪರಿಶ್ರಮದಿಂದ ಯಶಸ್ಸು ಕಂಡವರು ಅವರನ್ನು ಅಭಿನಂದಿಸುವುದು ನಮಗೆ ಹೆಮ್ಮೆಯ ಸಂಗತಿಯಾಗಿದೆ ಎಂದರು.
27ರ ಸಂಜೆ 5.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಸುಪ್ರೀಂಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ರುದ್ರೇಗೌಡರನ್ನು ಅಭಿನಂದಿಸಲಿದ್ದಾರೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಎಸ್.ರುದ್ರೇಗೌಡ-ದಿ ಐರನ್ ಮ್ಯಾನ್ ಎಂಬ ಅಭಿನಂದನಾ ಗ್ರಂಥವನ್ನು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಬಿಡುಗಡೆ ಮಾಡಲಿದ್ದಾರೆ. ಮಾಜಿ ಸಭಾಪತಿ ಬಿ.ಎಲ್.ಶಂಕರ್ ರುದ್ರೇಗೌಡ ಅವರನ್ನು ಕುರಿತು ಅಭಿನಂದನಾ ಭಾಷಣ ಮಾಡಲಿದ್ದಾರೆ ಎಂದು ಹೇಳಿದರು.
ಅಭಿನಂದನಾ ಸಮಿತಿ ಪ್ರಮುಖರಾದ ಆರ್.ಕೆ.ಸಿದ್ದರಾಮಣ್ಣ ಮಾತನಾಡಿ, ರುದ್ರೇಗೌಡರನ್ನು ಜಾತ್ಯಾತೀತ, ಪಕ್ಷಾತೀತವಾಗಿ ಅಭಿನಂದಿಸಲಾಗುವುದು. ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಶಾಸಕ ಎಸ್.ಎನ್.ಚನ್ನಬಸಪ್ಪ, ಮಾಜಿ ಶಾಸಕರಾದ ಎಚ್.ಎಂ.ಚಂದ್ರಶೇಖರಪ್ಪ, ಆರ್.ಪ್ರಸನ್ನಕುಮಾರ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಅಭಿನಂದನಾ ಸಮಿತಿ ಪ್ರಮುಖರಾದ ಎಸ್.ಎಸ್.ಜ್ಯೋತಿ ಪ್ರಕಾಶ್, ಎನ್.ಗೋಪಿನಾಥ್, ಕೆ.ಕಿರಣ್ಕುಮಾರ್, ಇ.ವಿಶ್ವಾಸ್, ಹರ್ಷ ಕಾಮತ್, ಎಂ.ಎ.ರಮೇಶ್ ಹೆಗ್ಡೆ ಇತರರಿದ್ದರು.