ಮಂಗಳೂರು: ದುಬೈಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನವು ತಾಂತ್ರಿಕ ದೋಷದಿಂದ ಟೇಕಾಫ್ ಆಗದೆ ಪ್ರಯಾಣಿಕರು ಪರದಾಡಿದ ಘಟನೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಸೋಮವಾರ ರಾತ್ರಿ 11:15ಕ್ಕೆ ಟೇಕಾಫ್ ಆಗಬೇಕಿದ್ದ ವಿಮಾನವು ಮಂಗಳವಾರ ಮಧ್ಯಾಹ್ನ 12:20ಕ್ಕೆ ಹೊರಟ್ಟಿದ್ದು, ಸಂಸ್ಥೆ ವಿರುದ್ಧ ಪ್ರಯಾಣಿಕರು ಹೌಹಾರಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸೋಮವಾರ ರಾತ್ರಿ 11:15ಕ್ಕೆ ಮಂಗಳೂರಿನಿಂದ ದುಬೈಗೆ ಟೇಕಾಫ್ ಆಗಬೇಕಿದ್ದ ವಿಮಾನವು ತಾಂತ್ರಿಕ ದೋಷದಿಂದ ಹಾರಾಟ ನಡೆಸಲಿಲ್ಲ. ಈ ಕುರಿತು ಪ್ರಯಾಣಿಕರಲ್ಲಿ ಮೊದಲಿಗೆ ವಿನಂತಿಸಿಕೊಂಡ ಕಂಪನಿಯೂ ಬದಲಿ ವಿಮಾನವನ್ನು ವ್ಯವಸ್ಥೆ ಮಾಡುವುದಾಗಿ ಹೇಳಿತ್ತು.
ಇದನ್ನೂ ಓದಿ: ಬಿಜೆಪಿಯ ರಾಜಕೀಯ ದುರುದ್ದೇಶವು ಜನತೆಯನ್ನು ಬಲಿಪಶು ಮಾಡುತ್ತಿದೆ: ಕಾಂಗ್ರೆಸ್
ಆದರೆ, ರಾತ್ರಿ ಪೂರ್ತಿ ಏರ್ಪೋರ್ಟ್ ಲಾಂಜ್ನಲ್ಲೇ ಕಾಲ ಕಳೆದ ಪ್ರಯಾಣಿಕರು ಬೆಳಗ್ಗೆ 9 ಘಂಟೆಯಾದರೂ ಸಹ ಕಂಪನಿಯೂ ಬದಲಿ ವಿಮಾನ ವ್ಯವಸ್ಥೆ ಮಾಡದಿರುವುದನ್ನು ಕಂಡು ಏರ್ ಇಂಡಿಯಾ ಸಿಬ್ಬಂದಿ ವಿರುದ್ಧ ಕಿಡಿಕಾರಿದ್ದಾರೆ. ಈ ವೇಳೆ ಕಂಪನಿ ಸಿಬ್ಬಂದಿ ಹಾಗೂ ಪ್ರಯಾಣಿಕರ ನಡುವೆ ವಾಗ್ವಾದ ನಡೆದಿದೆ.
ಬಳಿಕ ಮಧ್ಯಾಹ್ನ 12:20ರ ಸುಮಾರಿಗೆ ಏರ್ ಇಂಡಿಯಾ ಸಿಬ್ಬಂದಿ ಬದಲಿ ವಿಮಾನದ ವ್ಯವಸ್ಥೆ ಮಾಡಿದ್ದು, ಅದರಲ್ಲಿ 130ಕ್ಕೂ ಹೆಚ್ಚಿನ ಪ್ರಯಾಣಿಕರನ್ನು ದುಬೈಗೆ ಕಳುಹಿಸಿಕೊಡಲಾಗಿದೆ. ದುಬೈಗೆ ತೆರಳುವುದು ತಡವಾಗಿದ್ದರಿಂದ ಕೆಲ ಪ್ರಯಾಣಿಕರು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದು, ಅಂತಹವರು ಏರ್ ಇಂಡಿಯಾ ಸಂಸ್ಥೆ ಕಡೆಯಿಂದ ವಿವರಣೆ ಪತ್ರವನ್ನು ಪಡೆದು ತೆರಳಿದ್ದಾರೆ.