ಉಡುಪಿ: ಮಣಿಪಾಲ ಮತ್ತು ಉಡುಪಿ ನಗರ ಠಾಣಾ ವ್ಯಾಪ್ತಿಯಲ್ಲಿ ಸೆ. 19ರಂದು ಬಳಗ್ಗಿನ ಜಾವ ನಡೆದಿದ್ದ ಸರಣಿ ಸುಲಿಗೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಈ ಬಗ್ಗೆ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣವರ್ಧನ್, ಸೆ. 19ರಂದು ಬೆಳಗ್ಗಿನ ಜಾವ 4 ರಿಂದ 6 ಗಂಟೆ ಅವಧಿಯಲ್ಲಿ ಸಾರ್ವಜನಿಕರನ್ನು ಬೆದರಿಸಿ ಚೂರಿಯಿಂದ ಹಲ್ಲೆ ಮಾಡಿ ಹಣ, ಮೊಬೈಲ್, ಪರ್ಸ್ ಸುಲಿಗೆ ಮಾಡಿರುವ ಬಗ್ಗೆ ಮಣಿಪಾಲ ಠಾಣೆಯಲ್ಲಿ 3 ಹಾಗೂ ಉಡುಪಿ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿತ್ತು. ಈ ಘಟನೆಗೆ ಸಂಬಂಧಿಸಿ ಮಲ್ಲಾರು ಕೊಂಬಗುಡ್ಡೆ ನಿವಾಸಿ ಮೊಹಮ್ಮದ್ ಆಶಿಕ್ (19) ಎಂಬಾತನನ್ನು ಬಂಧಿಸಲಾಗಿದೆ. ಈತನಿಂದ ಯಮಹಾ ಬೈಕ್, ಚೂರಿ, ಸುಲಿಗೆ ಮಾಡಿದ್ದ ಮೊಬೈಲ್ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.
ಟೀಂ ಗರುಡ!: ಆಶಿಕ್ ಟೀಂ ಗರುಡ ಎಂಬ ಪಡ್ಡೆ ಹುಡುಗರ ಗ್ಯಾಂಗ್ ನಾಯಕತ್ವ ವಹಿಸಿದ್ದು, ರಾತ್ರಿ ಅನಾವಶ್ಯಕ ತಿರುಗಾಡಿ ಸುಲಿಗೆ ಮಾಡಿ ಮೋಜು ಮಸ್ತಿ ಮಾಡುತ್ತಿದ್ದ. ಈತ ಬೆಂಗಳೂರಿಂದ ಕಳ್ಳತನ ಮಾಡಿಕೊಂಡು ಬಂದಿದ್ದ 2 ಲಕ್ಷ ರೂ. ಮೌಲ್ಯದ ಬುಲೆಟ್ ಬೈಕ್ ವಶಕ್ಕೆ ಪಡೆಯಲಾಗಿದೆ. ಆರೋಪಿ ಸಹಚರರನ್ನೂ ವಿಚಾರಣೆಗೆ ಒಳಪಡಿಸಲಾಗುವುದು. ಇತರ ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸಲಾಗುವುದು ಎಂದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಚಂದ್ರ, ಮಣಿಪಾಲ ಪೊಲೀಸ್ ನಿರೀಕ್ಷಕ ಮಂಜುನಾಥ ಗೌಡ, ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ್, ಮಣಿಪಾಲ ಪಿಎಸ್ಐ ರಾಜಶೇಖರ್ ವಂದಲಿ ಉಪಸ್ಥಿತರಿದ್ದರು.
ಕೊಲೆ ಯತ್ನದಲ್ಲೂ ಭಾಗಿ : ಸೆ. 22ರಂದು ಮಲ್ಲಾರು ಗುಡ್ಡೆಕೇರೆ ಅಬ್ದುಲ್ ಸತ್ತಾರ್ ಕೊಲೆಯತ್ನ ಪ್ರಕರಣದಲ್ಲೂ ಆಶಿಕ್ ಭಾಗಿಯಾಗಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿ ಇತರ ಆರೋಪಿಗಳಾದ ನಾವುಂದ ನಿವಾಸಿಗಳಾದ ಮಹಮ್ಮದ್ ಆಸೀಫ್ (30), ಮಿಸ್ವಾ (22), ಇಜಾಜ್ ಅಹಮ್ಮದ್ (19), ಮಲ್ಪೆ ಜೋಕಟ್ಟೆ ನಿವಾಸಿ ದಾವೂದ್ ಇಬ್ರಾಹಿಂ (26) ಬಂಧನವಾಗಿದೆ. ನ್ಯಾಯಾಲಯ ಆರೋಪಿಗಳಿಗೆ 15 ದಿನದ ನ್ಯಾಯಾಂಗ ಬಂಧನ ವಿಧಿಸಿದೆ ಎಂದರು.