ಬೆಳಗಾವಿ: ಬೆಂಗಳೂರಿನಿಂದ ಬೆಳಗಾವಿ ಮಾರ್ಗವಾಗಿ ರಾಜಸ್ತಾನಕ್ಕೆ ಕಾಲ್ನಡಿಗೆ ಮೂಲಕ ತೆರಳುತ್ತಿದ್ದ 253 ಕಾರ್ಮಿಕರನ್ನು ಸೋಮವಾರ ಮಹಾನಗರ ಪಾಲಿಕೆ ಅಧಿಕಾರಿಗಳು ತಡೆದಿದ್ದಾರೆ. ಕರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ವಸತಿ ನಿಲಯ ಹಾಗೂ ಸ್ಕೂಲ್ಗಳಲ್ಲಿ ಇಟ್ಟು ನಿಗಾ ವಹಿಸಿದ್ದಾರೆ.
ನೆಹರು ನಗರದ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ನಲ್ಲಿ 114 ಹಾಗೂ ವಂಟಮೂರಿ ಮೊರಾರ್ಜಿ ದೇಸಾಯಿ ರೆಸಿಡೆನ್ಸಿಯಲ್ ಸ್ಕೂಲ್ನಲ್ಲಿ 139 ಕಾರ್ಮಿಕರನ್ನು ಇಡಲಾಗಿದೆ. ಈ ಕಾರ್ಮಿಕರಿಗೆ ಪಾಲಿಕೆ ವತಿಯಿಂದ ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಸೋಪ್, ಮಾಸ್ಕ್ ವಿತರಿಸಲಾಗಿದೆ. ನಿಯಮಿತವಾಗಿ ವೈದ್ಯಕೀಯ ತಪಾಸಣೆ ಮಾಡಲಾಗುತ್ತಿದೆ.
‘ನಮಗೆ ರೈಸ್, ಪಲಾವ್ ನಮಗೆ ಬೇಡ. ಪರೋಟಾ ಬೇಕು. ಇಲ್ಲದಿದ್ದರೆ ನಮ್ಮನ್ನು ಬಿಟ್ಟು ಬಿಡಿ. ನಾವು ನಮ್ಮ ಊರಿಗೆ ಹೋಗುತ್ತೇವೆ’ ಎಂದು ಕಾರ್ಮಿಕರು ಗಲಾಟೆ ಮಾಡುತ್ತಿದ್ದಾರೆ. ಅಧಿಕಾರಿಗಳು ಎಷ್ಟೇ ತಿಳಿಸಿ ಹೇಳಿದರೂ ನಿಲಯದ ಗೇಟ್ ಬಳಿ ಬಂದು ಗಲಾಟೆ ಮಾಡುತ್ತಿದ್ದಾರೆ.
ಬೆಂಗಳೂರಿನಿಂದ ರಾಜಸ್ತಾನಕ್ಕೆ ಕಾಲ್ನಡಿಗೆ ಮೂಲಕ ತೆರಳುತ್ತಿದ್ದ ಕಾರ್ಮಿರನ್ನು ಬೆಳಗಾವಿಯಲ್ಲಿ ತಡೆದಿದ್ದೇವೆ. ಕಾರ್ಮಿಕರಿಗೆ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದ್ದು, 14 ದಿನ ಇಲ್ಲಿಯೇ ಉಳಿಸಿಕೊಳ್ಳಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತ ಜಗದೀಶ ಕೆ.ಎಚ್.ತಿಳಿಸಿದ್ದಾರೆ.