ಕಲಾದಗಿ: ಈ ಭಾಗದಲ್ಲಿ ಭಾರೀ ಬಿರುಗಾಳಿಯಿಂದಾಗಿ ಮನೆ, ಬೆಳೆ ಹಾನಿಯಿಂದಾಗಿ ರೈತರು ಕಣ್ಣೀರು ಇಡುವಂತಾಗಿರುವುದು ನಿಜಕ್ಕೂ ನೋವಿನ ಸಂಗತಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ವಿಷಾಧ ವ್ಯಕ್ತಪಡಿಸಿದ್ದಾರೆ.
ಬೀಸಿದ ಭಾರೀ ಬಿರುಗಾಳಿ, ಆಲಿಕಲ್ಲು ಮಳೆಯಿಂದ ಹಾನಿಗೊಳಗಾದ ತುಳಸಿಗೇರಿ, ಛಬ್ಬಿ ಮತ್ತಿತರ ಗ್ರಾಮಗಳಲ್ಲಿನ ಮನೆಗಳು ಹಾಗೂ ಬೆಳೆಹಾನಿಯಾದ ಜಮೀನಗಳಿಗೆ ಭೇಟಿ ನೀಡಿ ಪರಿಶೀಲಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಬಿರುಗಾಳಿಯಿಂದಾಗಿ ಮನೆಗಳು ಹಾಗೂ ಗೂಡಂಗಡಿಗಳು ಜಖಂಗೊಂಡು ಅನೇಕರು ಸಂತ್ರಸ್ತರಾಗಿದ್ದು, ಕೂಡಲೇ ಅವರಿಗೆ ಸೂಕ್ತ ಪರಿಹಾರ ಧನ ನೀಡಲು ಸರ್ಕಾರ ಮನಸ್ಸು ಮಾಡಬೇಕೆಂದು ಆಗ್ರಹಿಸಿದರು.
ತಹಸೀಲ್ದಾರ್ ಜತೆ ಚರ್ಚೆ: ಬೆಳೆ ಹಾನಿಯಾದ ಕೆಲ ಪ್ರದೇಶಗಳ ಪರಿಶೀಲನೆ ಸಂದರ್ಭದಲ್ಲಿ ತಮ್ಮೊಂದಿಗಿದ್ದ ತಹಸೀಲ್ದಾರ್ ಅಮರೇಶ ಪಮ್ಮಾರ ಅವರೊಂದಿಗೆ ಹಾನಿಯ ಕುರಿತು, ಪರಿಹಾರ ಧನದ ಬಗ್ಗೆ ಬಹು ಚರ್ಚೆ ನಡೆಸಿ, ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳಲು ಸೂಚಿಸಿದರು.