ಬೆಂಗಳೂರು: ಕರೊನಾ ಸಂದರ್ಭದಲ್ಲಿ ಬಲವಂತವಾಗಿ ಬಾಡಿಗೆ ಕೇಳಬಾರದು ಎಂದು ಸರ್ಕಾರ ಸೂಚಿಸಿದ್ದರೂ, ಬಾಡಿಗೆ ಕೊಡುವಂತೆ ಪೇಯಿಂಗ್ ಗೆಸ್ಟ್ ನಡೆಸುತ್ತಿದ್ದವರಿಗೆ ಕಿರುಕುಳ ಕೊಡುತ್ತಿದ್ದ ಮೂವರು ಕಟ್ಟಡ ಮಾಲೀಕರ ವಿರುದ್ಧ ಮಾರತ್ಹಳ್ಳಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಮುನೆಕೋಳಾಲುವಿನ ನಿವಾಸಿ ಶ್ರೀವತ್ಸರೆಡ್ಡಿ ವಿರುದ್ಧ ಪ್ರತ್ಯೇಕ ಮೂರು ಎಫ್ಐಆರ್ ದಾಖಲಾದರೆ, ಮಾರತ್ಹಳ್ಳಿ ಮಾರ್ಕೆಟ್ ಬಳಿಯ ನಿವಾಸಿ ವೇಣುಗೋಪಾಲ್ ಹಾಗೂ ತುಳಸಿ ಚಿತ್ರಮಂದಿರ ರಸ್ತೆ ಬಳಿಯ ನಿವಾಸಿ ಗಜೇಂದ್ರ ಎಂಬುವರ ವಿರುದ್ಧ ತಲಾ ಒಂದು ಎಫ್ಐಆರ್ ದಾಖಲಾಗಿದೆ.
ಶ್ರೀವತ್ಸ ಅವರಿಗೆ ಸೇರಿದ ಮಾರತ್ಹಳ್ಳಿಯಲ್ಲಿದ್ದ ಮೂರು ಪ್ರತ್ಯೇಕ ಬಿಲ್ಡಿಂಗ್ನಲ್ಲಿ ದೇಬಶಿಶ್ ಸಾಹೋ, ಬಾಲಾಜಿ ಚಂದೂಲಾಲ್ ಹಾಗೂ ಅನಂತ್ ಕುಮಾರ್ ಎಂಬುವರು ಪಿಜಿ ನಡೆಸುತ್ತಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ ಲಾಕ್ಡೌನ್ ಆಗುವ ಮೊದಲು ಪಿಜಿಯಲ್ಲಿದ್ದ ಬಹುತೇಕ ಮಂದಿ ಬಾಡಿಗೆ ಕೊಡದೇ ಪಿಜಿ ಖಾಲಿ ಮಾಡಿಕೊಂಡು ಹೋಗಿದ್ದರು. ಇನ್ನುಳಿದ ಜನರಿಗೆ ಪಿಜಿ ನಡೆಸುತ್ತಿದ್ದವರು ಊಟ, ವಸತಿ ವ್ಯವಸ್ಥೆ ಮಾಡಿದ್ದರು. ಕಟ್ಟಡ ಮಾಲೀಕ ಶ್ರೀವತ್ಸ ತಿಂಗಳ ಬಾಡಿಗೆಗಾಗಿ ಒತ್ತಾಯಿಸುತ್ತಿದ್ದರು.
ವೇಣುಗೋಪಾಲ್ ಹಾಗೂ ಗಜೇಂದ್ರ ಮಾರತ್ಹಳ್ಳಿಯಲ್ಲಿ ಹೊಂದಿದ್ದ ಪ್ರತ್ಯೇಕ ಎರಡು ಕಟ್ಟಡದಲ್ಲಿ ಬಿ. ಶ್ರೀಚರಣ್, ತರುಣ್ ಪಾಟೀಲ್ ಪಿ.ಜಿ. ನಡೆಸುತ್ತಿದ್ದರು. ಇಲ್ಲೂ ಬಾಡಿಗೆ ಕೊಡುವಂತೆ ಮಾಲೀಕರು ಕಿರುಕುಳ ಕೊಡುತ್ತಿದ್ದರು. ಈ ಬಗ್ಗೆ ಮಾರತ್ಹಳ್ಳಿ ಪೊಲೀಸರು ಪ್ರತ್ಯೇಕ ಐದು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ದಿನಸಿ ಸಾಮಗ್ರಿ ಹಂಚುತ್ತಿದ್ದಾಗ ಹಲ್ಲೆ: ದಾಸರಹಳ್ಳಿ ಕೊಳೆಗೇರಿಯಲ್ಲಿ 6 ಮಂದಿಯಿಂದ ಕೃತ್ಯ