More

    ಸಚಿವ ಸಂಪುಟದಲ್ಲಿ ಮಹತ್ವದ ನಿರ್ಧಾರ; ಭೂಸ್ವಾಧೀನ ತಾರತಮ್ಯ ನಿವಾರಣೆಗೆ ಕ್ರಮ ಕೈಗೊಳ್ಳಲಿರುವ ಸಚಿವ ಗೋವಿಂದ ಕಾರಜೋಳ..!

    ವಿಜಯಪುರ: ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ-3 ರಡಿ ಭೂಸ್ವಾಧೀನಕ್ಕೆ ಒಳಪಡುವ ಜಮೀನುಗಳಿಗೆ ಏಕರೂಪದ ಬೆಲೆ ನಿಗದಿಪಡಿಸಿ ತೀರ್ಪನ್ನು ರಚಿಸುವ ಮೂಲಕ ಪರಿಹಾರ ವಿತರಿಸಲು ಗುರುವಾರ ನಡೆದ ಸಚಿವ ಸಂಪುಟದ ಸಭೆಯಲ್ಲಿ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.

    ಕೃಷ್ಣಾ ನದಿಯ ಎಡದಂಡೆಯಲ್ಲಿ ಮುಳುಗಡೆಯಾಗಲಿರುವ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ 14 ಗ್ರಾಮಗಳು ಕೊಲ್ಹಾರ ತಾಲ್ಲೂಕಿನ 6 ಗ್ರಾಮಗಳು, ನಿಡಗುಂದಿ ತಾಲ್ಲೂಕಿನ 9 ಗ್ರಾಮಗಳು ಮುಳುಗಡೆ ಹೊಂದುತ್ತಿವೆ. ಮುಳಗುಡೆ ಹೊಂದಲಿರುವ ಜಮೀನುಗಳ ಭೂಪರಿಹಾರದಲ್ಲಿ ವ್ಯತ್ಯಾಸ ಉಂಟಾಗಿ 2016-17 ರಲ್ಲಿ ಈ ಗ್ರಾಮಗಳು ಮಾರ್ಗದರ್ಶಿ ಬೆಲೆ ಪರಿಷ್ಕೃತ ಗೊಂಡ ನಂತರ ಈವರೆಗೆ ಪರಿಷ್ಕೃತಗೊಳ್ಳದೇ ಇರುವುದರಿಂದ ರೈತರಿಗೆ ಆಗಿರುವ ಘೋರ ಅನ್ಯಾಯವನ್ನು ಪರಿಗಣನೆಗೆ ತೆಗೆದುಕೊಂಡು ಏಕರೂಪದ ಬೆಲೆ ಮತ್ತು ಸಮ್ಮತಿ ಐತೀರ್ಪನ್ನು ರಚಿಸಲು ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

    ಈ ಗ್ರಾಮಗಳಲ್ಲಿ ಪ್ರತೀ ಎಕರೆ ಒಣ ಭೂಮಿಗೆ 5 ಲಕ್ಷ ರೂಪಾಯಿ ಹಾಗೂ ಪ್ರತೀ ಎಕರೆ ನೀರಾವರಿ, ಬಾಗಾಯತ್ ಭೂಮಿಗೆ 6 ಲಕ್ಷ ರೂಪಾಯಿ ಮತ್ತು ಕಟ್ಟಡಗಳಿಗೆ ಸವಕಳಿರಹಿತವಾಗಿ ಪ್ರತಿಶತ ಶೇ.20 ರಷ್ಟು ಹೆಚ್ಚುವರಿ ಮೊತ್ತವನ್ನು ಸೇರಿಸಿ, ಪರಿಹಾರ ನೀಡಲು ಸಚಿವ ಸಂಪುಟ ನಿರ್ಧರಿಸಿದೆ. ಈ ಐತಿಹಾಸಿಕ ತೀರ್ಮಾನ ವಿಜಯಪುರ ಜಿಲ್ಲೆಯ ಬಬಲೇಶ್ವರ, ನಿಡಗುಂದಿ ಮತ್ತು ಕೊಲ್ಹಾರ ತಾಲ್ಲೂಕುಗಳಲ್ಲಿ ಹೋರಾಟ ಮಾಡಿಕೊಂಡು ಬಂದ ರೈತರಿಗೆ ಗೌರವಿಸಿದಂತಾಗಿದೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದ್ದಾರೆ.

    ಫಲಾನುಭವಿ ಹಳ್ಳಿಗಳ ವಿವರ:

    ಬಬಲೇಶ್ವರ ತಾಲ್ಲೂಕಿನ ಹಂಗರಗಿ, ಬೆಳ್ಳುಬ್ಬಿ, ಜೈನಾಪುರ, ಮಂಗಳೂರ, ತಾಜಪುರ, ದೇವರಗೆಣ್ಣೂರ, ಲಿಂಗದಳ್ಳಿ, ಸುತಗುಂಡಿ, ಹೊಸೂರ, ಚಿಕ್ಕಗಲಗಲಿ, ಜಂಬಗಿ, ಬಬಲಾದ, ಶಿರಬೂರ, ಕಣಬೂರ, ನಿಡಗುಂದಿ ತಾಲ್ಲೂಕಿನ ನಿಡಗುಂದಿ, ಚಿಮ್ಮಲಗಿ, ಬೇನಾಳ, ವಂದಾಲ, ಮುಜರೆಕೊಪ್ಪ, ದೇವಲಾಪೂರ, ಗೋನಾಳ, ಮಾರಡಗಿ, ಗಣಿ, ಕೊಲ್ಹಾರ ತಾಲ್ಲೂಕಿನ ಅರಷಣಗಿ, ಬಳೂತಿ, ಹಳೆರೊಳ್ಳಿ, ಸಿದ್ಧನಾಥ, ಮಟ್ಟಿಹಾಳ, ಕೊಲ್ಹಾರ ಫಲಾನುಭವಿ ಹಳ್ಳಿಗಳಾಗಿವೆ. ಈ ಐತಿಹಾಸಿಕ ನಿರ್ಣಯದಿಂದ ಭೂಮಿ ಕಳೆದುಕೊಳ್ಳುವ ಮೂಲಕ ದೇಶದ ಅತ್ಯಂತ ಮಹತ್ವದ ಯೋಜನೆಗೆ ತ್ಯಾಗ ಮಾಡುವ ರೈತರು ಮತ್ತು ನಾಗರಿಕರಿಗೆ ನ್ಯಾಯಬದ್ಧ ಪರಿಹಾರ ನೀಡುವ ಸಚಿವ ಸಂಪುಟದ ನಿರ್ಣಯ ಕೃಷ್ಣಾ ತೀರದ ಭೂಸ್ವಾಧೀನ ಇತಿಹಾಸದಲ್ಲಿ ಮೈಲಿಗಲ್ಲು ಆಗಲಿದೆ ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts