ಬೆಂಗಳೂರು: ಬಿಎಂಡಬ್ಲುೃ ಬೈಕ್ ಖರೀದಿಸುವ ನೆಪದಲ್ಲಿ ಮಾಲೀಕನ ಕರೆಸಿಕೊಂಡು ಹಲ್ಲೆ ನಡೆಸಿ ಬೈಕ್ ದೋಚಿದ್ದ ಸೆಕೆಂಡ್ ಹ್ಯಾಂಡ್ ವಾಹನ ಮಾರಾಟಗಾರರ ಗ್ಯಾಂಗ್ನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ.
ದೊಡ್ಡಬಳ್ಳಾಪುರ ನಗರದ ಎ.ಎಲ್. ವಿಶ್ವಾಸ್, ಎನ್. ಜಗನ್ನಾಥ್, ಎಸ್.ಎಸ್. ಗಜೇಂದ್ರ, ಲಿಖಿತ್ ಕುಮಾರ್, ಎಸ್. ಶಶಾಂಕ್ ಮತ್ತು ಕೆ. ಪವನ್ ಬಂಧಿತರು. 16 ಲಕ್ಷ ರೂ. ಮೌಲ್ಯದ ಬಿಎಂಡಬ್ಲುೃ ಬೈಕ್, ಆರೋಪಿಗಳಿಗೆ ಸೇರಿದ 3 ಕಾರುಗಳನ್ನು ಜಪ್ತಿ ಮಾಡಲಾಗಿದೆ.
ವಿಜಯನಗರದ ಕ್ಲಬ್ ರಸ್ತೆಗೆ ಬಿಎಂಡಬ್ಲುೃ ಬೈಕ್ನ್ನು ತಂದಿದ್ದ ಮೊಹಮ್ಮದ್ ಅಸೀಫ್ ಎಂಬಾತನ ಮೇಲೆ ವಿಶ್ವಾಸ್ ಮತ್ತು ಆತನ ಗ್ಯಾಂಗ್ ಹಲ್ಲೆ ನಡೆಸಿ ಬೈಕ್ ದೋಚಿದ್ದರು. ಈ ಬಗ್ಗೆ ತನಿಖೆ ಕೈಗೊಂಡ ಇನ್ಸ್ಪೆಕ್ಟರ್ ಡಿ. ಸಂತೋಷ್ ಕುಮಾರ್ ನೇತೃತ್ವದ ತಂಡ, ಆರೋಪಿಗಳನ್ನು ಬಂಧಿಸಿದೆ
ಸೆಕೆಂಡ್ ಹ್ಯಾಂಡ್ ಬಿಎಂಡಬ್ಲುೃ, ಆಡಿ, ರೇಜ್ ರೋವರ್ ಸೇರಿದಂತೆ ದುಬಾರಿ ಬೈಕ್ಗಳ ಮಾರಾಟಗಾರ ಮೊಹಮ್ಮದ್ ಅಸೀಫ್ ಮತ್ತು ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟಗಾರ ವಿಶ್ವಾಸ್ ಪ್ರತ್ಯೇಕವಾಗಿ ವ್ಯವಹಾರ ನಡೆಸುತ್ತಿದ್ದರು.
ವಿಜಯನಗರದ ಪೈಪ್ಲೈನ್ ರಸ್ತೆಯಲ್ಲಿ ಅಸೀಫ್ನ ಅಂಗಡಿ ಹೊಂದಿದ್ದ. ದೊಡ್ಡಬಳ್ಳಾಪುರದಲ್ಲಿ ವಿಶ್ವಾಸ್, ವ್ಯವಹಾರ ನಡೆಸುತ್ತಿದ್ದ. ದುಬಾರಿ ವಾಹನಗಳ ಮಾರಾಟ ಸಂಬಂಧ ಈ ಇಬ್ಬರಿಗೂ ಪರಸ್ಪರ ಪೈಪೋಟಿ ಇತ್ತು. ಕೊನೆಗೆ ವೃತ್ತಿ ವೈಷಮಕ್ಕೆ ತಿರುಗಿತ್ತು. ಸಣ್ಣಪುಟ್ಟ ಗಲಾಟೆಗಳು ನಡೆದಿದ್ದವು. ಎದುರಾಳಿ ಅಸೀಫ್ನ ವ್ಯವಹಾರವನ್ನು ಹಾಳು ಮಾಡಬೇಕು ಎಂದು ಸಂಚುರೂಪಿಸಿದ್ದ ವಿಶ್ವಾಸ್, ತನ್ನ ಸ್ನೇಹಿತರ ಜತೆ ಚರ್ಚೆ ನಡೆಸಿದ್ದ.
ಇತ್ತೀಚಿಗೆ ಅಸೀಫ್ ಬಳಿ 16 ಲಕ್ಷ ರೂ. ಮೌಲ್ಯದ ಬಿಎಂಡಬ್ಲುೃಂ ಬೈಕ್ ಮಾರಾಟಕ್ಕಿರುವ ಬಗ್ಗೆ ಮಾಹಿತಿ ಪಡೆದಿದ್ದ. ಆ ಬೈಕ್ ಖರೀದಿ ನೆಪದಲ್ಲಿ ಅಸೀಫ್ನನ್ನು ಕರೆಸಿಕೊಂಡು ಬೈಕ್ ಕಳವು ಮಾಡಬೇಕೆಂದು ವಿಶ್ವಾಸ್ ಸಂಚು ರೂಪಿಸಿದ್ದ.
ಅದೇ ರೀತಿ ಅಸೀಫ್ಗೆ ಕರೆ ಮಾಡಿದ ವಿಶ್ವಾಸ್ ಬೈಕ್ ಖರೀದಿ ಮಾಡುವುದಾಗಿ ಹೇಳಿ ಖಾತೆಗೆ 40 ಸಾವಿರ ರೂ. ಆನ್ಲೈನ್ನಲ್ಲಿ ವರ್ಗಾಯಿಸಿ ಬಿಎಂಡಬ್ಲುೃ ಬೈಕ್ ನೀಡುವಂತೆ ಒತ್ತಾಯಿಸಿದ್ದ. ಮೊದಲು ಸಾಧ್ಯವಿಲ್ಲ ಎಂದು ಹೇಳಿದ್ದ ಅಸೀಫ್, ಆನಂತರ ಒಪ್ಪಿಕೊಂಡಿದ್ದ.
ಅದರಂತೆ ಡಿ.10ರಂದು ತನ್ನ ಸಹಚರರ ಜತೆ ವಿಜಯನಗರದ ಕ್ಲಬ್ ರಸ್ತೆಗೆ ವಿಶ್ವಾಸ್ ಬಂದಿದ್ದಾನೆ. ಅಲ್ಲಿಗೆ ಬೈಕ್ನೊಂದಿಗೆ ಬಂದಿದ್ದ ಅಸೀಫ್ನನ್ನು ಬೈಕ್ ಬೆಲೆ ಎಷ್ಟು ಎಂದು ವಿಶ್ವಾಸ್ ಕೇಳಿದ್ದಾನೆ.
ವಿಶ್ವಾಸ್ ನಡವಳಿಕೆ ಮೇಲೆ ಅನುಮಾನಗೊಂಡ ಆಸೀಫ್, ಪೂರ್ಣ ಹಣ ನೀಡದ ಹೊರತು ಬೈಕ್ ಕೊಡುವುದಾಗಿ ತಾಕೀತು ಮಾಡಿದ್ದ. ಇದೇ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ವಿಶ್ವಾಸ್ ಮತ್ತು ಆತನ ಸಹಚರರು, ಅಸೀಫ್ ಮೇಲೆ ಹಲ್ಲೆ ನಡೆಸಿ ಕೈ ಮುರಿದು ಕಾರಿಗೆ ಕೂರಿಸಿಕೊಳ್ಳಲು ಪ್ರಯತ್ನಿಸಿದ್ದರು. ಗಾಯಗೊಂಡ ಆಸ್ೀ, ಚೀರಾಟ ನಡೆಸಿದಾಗ ಸ್ಥಳೀಯರು ಜಮಾಯಿಸಿದರು. ಭಯಗೊಂಡ ವಿಶ್ವಾಸ್ ಗ್ಯಾಂಗ್ ಅಲ್ಲಿಯೇ ತಮ್ಮ ಕಾರು ಬಿಟ್ಟು ಬೈಕ್ನೊಂದಿಗೆ ಪರಾರಿ ಆಗಿದ್ದರು.
ಗಾಯಗೊಂಡಿದ್ದ ಅಸೀಫ್, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ವಿಜಯನಗರ ಠಾಣೆಗೆ ದೂರು ನೀಡಿದ್ದರು. ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ದೊಡ್ಡಬಳ್ಳಾಪರದಲ್ಲಿ ವಿಶ್ವಾಸ್ ಮತ್ತು ಆತನ ಗ್ಯಾಂಗ್ನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಶ್ವಾಸನ ವಂಚನೆ:
ಐಷರಾಮಿ ಸೆಕೆಂಡ್ ಹ್ಯಾಂಡ್ ಕಾರು, ಬೈಕ್ ಮಾರಾಟದ ನೆಪದಲ್ಲಿ ವಿಶ್ವಾಸ್, ಜನರಿಗೆ ಕಡಿಮೆ ಬೆಲೆಗೆ ದುಬಾರಿ ವಾಹನ ಕೊಡಿಸುವ ನೆಪದಲ್ಲಿ ಹಣ ಪಡೆದು ವಂಚಿಸುತ್ತಿದ್ದ. ಹಣ ಕೇಳಿದರೇ ಬೆದರಿಕೆವೊಡ್ಡುತ್ತಿದ್ದ. ಈ ಸಂಬಂಧ ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.