ಹುಬ್ಬಳ್ಳಿ : ದೇಶದ ಹಿತಕ್ಕಾಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಇಲ್ಲಿಯ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಸೇರಿದ್ದ ವಿವಿಧ ಸಮಾಜಗಳ ಮುಖಂಡರು ಪ್ರಕಟಿಸಿದರು.
ಧಾರವಾಡ ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ಸುಮಾರು 20 ಕ್ಕೂ ಹೆಚ್ಚು ಸಮಾಜಗಳ ಹಿರಿಯರು ಮಾತನಾಡಿ, ಕೇಂದ್ರ ಸಚಿವ ಹಾಗೂ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಅವರನ್ನು ದಾಖಲೆ ಮತಗಳ ಅಂತರದಿಂದ ಗೆಲ್ಲಿಸಲು ಶಕ್ತಿಮೀರಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಉದ್ಯಮಿ ಹಾಗೂ ಬಿಜೆಪಿ ಧುರೀಣ ಗೋವಿಂದ ಜೋಶಿ, ಎಲ್ಲ ಸಮಾಜಗಳ ಹಿರಿಯರು ಪಕ್ಷದ ಜೊತೆ ನಿಲ್ಲಬೇಕು. ಹಿಂದುಗಳೆಲ್ಲ ಒಗ್ಗಟ್ಟಾಗದೇ ಹೋದರೆ ಮುಂದೆ ಅಪಾಯಕಾರಿ ಪರಿಸ್ಥಿತಿ ಎದುರಿಸಬೇಕಾಗುವುದು ಎಂದು ಹೇಳಿದರು.
ಪ್ರತಿ ಮನೆಗೂ ಪಕ್ಷದ ಸಾಧನೆಗಳ ಮಾಹಿತಿವುಳ್ಳ ಕರಪತ್ರ ತಲುಪಿಸಬೇಕು. ಕೇಂದ್ರ ಸರ್ಕಾರದ ಹಾಗೂ ಪ್ರಲ್ಹಾದ ಜೋಶಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ವಿವರಿಸಿ, ಮತಯಾಚಿಸಬೇಕು ಎಂದು ಸೂಚಿಸಿದರು.
ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಚಾಲಕ ಎಂ.ನಾಗರಾಜ, ಸಿ. ಎನ್. ಶ್ಯಾಗೋಟಿ, ಬಸವರಾಜ ಕುಂದಗೋಳಮಠ ಮಾತನಾಡಿದರು. ಬಿಜೆಪಿ ಧಾರವಾಡ ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್.ಎಂ. ಪಾಟೀಲ, ಶಿವಾನಂದ ಮಂಡಗೂಳಿ, ಸದಾನಂದ ಚಿಂತಾಮಣಿ, ದಾನಪ್ಪ ಗಂಗಾಯಿ ಹಾಗೂ ಇತರರು ಉಪಸ್ಥಿತರಿದ್ದರು.