ನವದೆಹಲಿ: ಸನ್ ರೈಸರ್ಸ್ ಹೈದರಾಬಾದ್ (ಎಸ್ಆರ್ಎಚ್) ನಾಯಕ ಪ್ಯಾಟ್ ಕಮಿನ್ಸ್ ಬಯಸಿದ್ದನ್ನು ಸಾಧಿಸಿದ್ದಾರೆ. ಈ ಬಾರಿ ಐಪಿಎಲ್ ಟೂರ್ನಿಯ ಫೈನಲ್ಗೆ ಹೋಗುವುದು ನಮ್ಮ ಟಾರ್ಗೆಟ್ ಎಂದಿದ್ದರು. ಅದನ್ನೇ ಮಾಡಿ ತೋರಿಸಿದ್ದಾರೆ. ಆರೆಂಜ್ ಆರ್ಮಿ ರಾಜಸ್ಥಾನ ರಾಯಲ್ಸ್ ತಂಡವನ್ನು ಸೋಲಿಸುವ ಮೂಲಕ ಫೈನಲ್ಗೆ ಅರ್ಹತೆ ಪಡೆದಿದೆ.
ಮೊನ್ನೆ (ಮೇ 24) ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಕ್ವಾಲಿಫೈಯರ್ 2 ರಲ್ಲಿ ಎಸ್ಆರ್ಎಚ್ ತಂಡ 36 ರನ್ಗಳಿಂದ ಸಂಜು ಸ್ಯಾಮ್ಸನ್ ಸೇನೆಯನ್ನು ಸೋಲಿಸಿತು. ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಸನ್ರೈಸರ್ಸ್ ಎಲ್ಲ ಓವರ್ಗಳನ್ನು ಆಡಿ 9 ವಿಕೆಟ್ಗೆ 175 ರನ್ ಗಳಿಸಿತು. ಬಳಿಕ ಚೇಸಿಂಗ್ ಆರಂಭಿಸಿದ ರಾಜಸ್ಥಾನ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಲಷ್ಟೇ ಶಕ್ತವಾಯಿತು.
ಕ್ವಾಲಿಫೈಯರ್-2ರಲ್ಲಿ ರಾಜಸ್ಥಾನ ಫೇವರಿಟ್ ತಂಡವಾಗಿ ಕಾಣಿಸಿಕೊಂಡಿತ್ತು. ಏಕೆಂದರೆ, ಎಲಿಮಿನೇಟರ್ನಲ್ಲಿ ಆರ್ಸಿಬಿ ವಿರುದ್ಧ ಗೆಲುವು ಸಾಧಿಸಿತ್ತು. ಹೀಗಾಗಿ ಆರ್ಆರ್ ತಂಡದ ಮೇಲೆ ಭಾರಿ ನಿರೀಕ್ಷೆಗಳಿದ್ದವು. ಮತ್ತೊಂದೆಡೆ, ಕ್ವಾಲಿಫೈಯರ್-1 ರಲ್ಲಿ ಎಸ್ಆರ್ಎಚ್ ತಂಡ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಸೋತಿತು. ಹೀಗಾಗಿ ಎಸ್ಆರ್ಎಚ್ ಫೈನಲ್ಗೆ ಬರುವುದು ಕಷ್ಟ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಎಲ್ಲ ಲೆಕ್ಕಾಚಾರವೂ ಕೆಳಗಾಯಿತು.
ಆರ್ಆರ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕಮಿನ್ಸ್ ಪಡೆ 120 ರನ್ಗಳಿಗೆ 6 ವಿಕೆಟ್ ಕಳೆದುಕೊಂಡಿತ್ತು. ಇದಾದ ಬಳಿಕ ಬೌಲಿಂಗ್ ವೇಳೆಯೂ 60 ರನ್ ದಾಟಿದರೂ ಕೇವಲ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಆದರೆ ಈ ಎರಡೂ ಸಂದರ್ಭಗಳಲ್ಲಿ ಬ್ಯಾಟ್ಸ್ಮನ್ಗಳು ಹಾಗೂ ಬೌಲರ್ಗಳು ಅಮೋಘ ಹೋರಾಟ ನಡೆಸಿ, ತಂಡವನ್ನು ಗೆಲುವಿನ ದಡ ಸೇರಿಸಿದರು. ಇದೀಗ ಎಸ್ಆರ್ಎಚ್ ಫೈನಲ್ ತಲುಪಿದೆ. ಇದರ ನಡುವೆ ಆರ್ಸಿಬಿ ಶಾಪವೇ ಆರೆಂಜ್ ಆರ್ಮಿಗೆ ವರವಾಗಿದೆ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿವೆ.
ಐಪಿಎಲ್ ಇತಿಹಾಸದಲ್ಲೇ ಪ್ಲೇಆಫ್ನಲ್ಲಿ ಬೆಂಗಳೂರನ್ನು ಸೋಲಿಸಿದ ಯಾವುದೇ ತಂಡ ಕಪ್ ಗೆದ್ದಿಲ್ಲ. ಆರ್ಸಿಬಿ 6 ಬಾರಿ ಪ್ಲೇ ಆಫ್ನಿಂದ ಹೊರಗುಳಿದಿತ್ತು. ಆರು ಬಾರಿ ಎಲಿಮಿನೇಟ್ ಆಗಿದ್ದು, ಆರ್ಸಿಬಿ ತಂಡವನ್ನು ಸೋಲಿಸಿದ ಎದುರಾಳಿ ತಂಡಗಳು ಕಪ್ ಪಡೆಯದೆ ಬರಿಗೈಯಲ್ಲಿ ಮನೆಗೆ ಮರಳಿದ ಇತಿಹಾಸವಿದೆ. 2010ರಲ್ಲಿ ಮುಂಬೈ ತಂಡವು ಆರ್ಸಿಬಿಯನ್ನು ಪ್ಲೇ ಆಫ್ನಲ್ಲಿ ಸೋಲಿಸಿತ್ತು. ಆದರೆ ಫೈನಲ್ನಲ್ಲಿ ಸಿಎಸ್ಕೆ ವಿರುದ್ಧ ಸೋತು ಪ್ರಶಸ್ತಿಯಿಂದ ವಂಚಿತವಾಯಿತು.
2015ರಲ್ಲಿ ಚೆನ್ನೈ ತಂಡ ಬೆಂಗಳೂರನ್ನು ಪ್ಲೇ ಆಫ್ನಲ್ಲಿ ಸೋಲಿಸಿತ್ತು. ಆದರೆ ಫೈನಲ್ನಲ್ಲಿ ಮುಂಬೈ ಎದುರು ಸೋತಿತ್ತು. ಸನ್ರೈಸರ್ಸ್ ಹೈದರಾಬಾದ್ 2020 ರಲ್ಲಿ ಆರ್ಸಿಬಿ ಅನ್ನು ಸೋಲಿಸಿತು. ಆದರೆ, ಅವರು ಕ್ವಾಲಿಫೈಯರ್-2ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋತರು. 2021ರಲ್ಲಿ ಕೆಕೆಆರ್ ತಂಡ ಆರ್ಸಿಬಿ ಅನ್ನು ಸೋಲಿಸಿತು. ಆ ತಂಡ ಫೈನಲ್ನಲ್ಲಿ ಚೆನ್ನೈ ಎದುರು ಸೋತಿತ್ತು. 2022ರಲ್ಲಿ ರಾಜಸ್ಥಾನವು ಪ್ಲೇ ಆಫ್ನಲ್ಲಿ ಬೆಂಗಳೂರನ್ನು ಸೋಲಿಸಿತು. ಆದರೆ, ಫೈನಲ್ನಲ್ಲಿ ಗುಜರಾತ್ ಎದುರು ಸೋತು ರನ್ನರ್ ಅಪ್ಗೆ ತೃಪ್ತಿಪಟ್ಟಿತು. ಈ ಬಾರಿಯೂ ಆರ್ಆರ್ ತಂಡ ಆರ್ಸಿಬಿಯನ್ನು ಸೋಲಿಸಿ ಕ್ವಾಲಿಫೈಯರ್ 2ಕ್ಕೆ ಏರಿದ ಖುಷಿಯಲ್ಲಿ ಮುಳುಗಿತ್ತು. ಆದರೆ, ಕ್ವಾಲಿಫೈಯರ್-2ರಲ್ಲಿ ಆರೆಂಜ್ ಆರ್ಮಿ ವಿರುದ್ಧ ಸೋತರು. ಹೀಗಾಗಿ ಎಸ್ಆರ್ಎಚ್ಗೆ ಆರ್ಸಿಬಿ ಶಾಪ ವರವಾಗಿದೆ ಎಂದು ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ. (ಏಜೆನ್ಸೀಸ್)
ಯುವ ಕ್ರಿಕೆಟಿಗನ ಪ್ರೀತಿಯ ಬಲೆಯಲ್ಲಿ ಬಿದ್ದ ಕಾವ್ಯಾ ಮಾರನ್!? ಸಾಕ್ಷಿಯೂ ಇದೆ ಅಂದ್ರು ಅಭಿಮಾನಿಗಳು