ಬೆಂಗಳೂರು; ಇತಿಹಾಸದ ಅಪರೂಪದ ಘಟನೆಗಳನ್ನು ಆಧಾರವಾಗಿಟ್ಟುಕೊಂಡಿರುವ, ಜಾನಪದ ಸಾಹಿತ್ಯದ ಪ್ರಕಾರವಾದ ಸಿನಿಮಾ ‘ದಂತಕಥೆ’. ಈ ಹಿಂದೆ ‘ಯೂ-ಟರ್ನ್’ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿದ್ದ ವಚನ್ ಚೊಚ್ಚಲ ಬಾರಿಗೆ ಆ್ಯಕ್ಷನ್-ಕಟ್ ಹೇಳುತ್ತಿರುವ ಚಿತ್ರವಿದು.
ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಜಾನರ್ನ ಸಿನಿಮಾ ಆಗಿದ್ದು, ಒಂದು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಡೆಯುವ ಇನ್ವೆಸ್ಟಿಗೇಷನ್ ಸುತ್ತ ಕಥೆ ಸಾಗುತ್ತದೆ. ಇತ್ತೀಚೆಗಷ್ಟೆ ರವಿಚಂದ್ರನ್ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ರಘು ಮುಖರ್ಜಿ ನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವರಿಗೆ ‘ಪದವಿಪೂರ್ವ’ ಮತ್ತು ‘ಮಾನ್ಸೂನ್ ರಾಗ’ ಚಿತ್ರಗಳಲ್ಲಿ ನಟಿಸಿರುವ ಯಶಾ ಶಿವಕುಮಾರ್ ನಾಯಕಿಯಾಗಿದ್ದಾರೆ. ಚಿತ್ರದ ಮುಖ್ಯ ಪಾತ್ರವೊಂದರಲ್ಲಿ ಕಿಶೋರ್ ಬಣ್ಣ ಹಚ್ಚಲಿದ್ದಾರೆ.
ಉಳಿದಂತೆ ರವಿಶಂಕರ್, ವಿನಯ್ ಕೃಷ್ಣಮೂರ್ತಿ, ಪ್ರಶಾಂತ್ ಸಿದ್ದಿ, ವಿನೋದ್ ಗೊಬ್ಬರಗಾಲ, ಶಿವ ಮಂಜು, ಗಿರೀಶ್ ಶಿವಣ್ಣ, ನಾಗಮಂಗಲ ಜಯರಾಮ್ ಹಾಗೂ ಕುರಿ ರಂಗ ಪ್ರಮುಖ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ನವೀನ್ ಕುಮಾರ್ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ, ಮಾಸ್ತಿ ಸಂಭಾಷಣೆ, ಹರೀಶ್ ಕೊಮ್ಮೆ ಸಂಕಲನವಿರಲಿದೆ.