ಚಿಕ್ಕೋಡಿ: ಕರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಪಡಿತರವನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು ಎಂದು ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಸೂಚನೆ ನೀಡಿದ್ದಾರೆ.
ತಾಲೂಕಿನ ಹಿರೇಕೋಡಿ ಗ್ರಾಮದಲ್ಲಿ ಶುಕ್ರವಾರ ನಡೆದ ಕರೊನಾ ಜನಜಾಗೃತಿ ಹಾಗೂ ತಾಲೂಕುಮಟ್ಟದ ಅಧಿಕಾರಿಗಳ ಸಭೆ ಉದ್ದೇಶಿಸಿ ಮಾತನಾಡಿ, ಗ್ರಾಪಂನಿಂದ ರೇಷನ್ ಕಾರ್ಡ್ ಇಲ್ಲದವರ ಪಟ್ಟಿ ತಯಾರಿಸಿ ತಹಸೀಲ್ದಾರ್ಅವರಿಗೆ ನೀಡಿದರೆ ಪಡಿತರ ವ್ಯವಸ್ಥೆ ಮಾಡುತ್ತಾರೆ ಎಂದು ತಿಳಿಸಿದರು. ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ವೈದ್ಯಕೀಯ ಸಿಬ್ಬಂದಿ ಹಾಗೂ ಪೊಲೀಸರು ಕರೊನಾ ಜಾಗೃತಿ ಮೂಡಿಸುವಲ್ಲಿ ಮಾಡುತ್ತಿರುವ ಸೇವೆ ಶ್ಲಾಘನೀಯ ಎಂದರು. ಸರ್ವೇ ಮಾಡುವ ಸಂದರ್ಭದಲ್ಲಿ ಸಮರ್ಪಕ ಮಾಹಿತಿ ನೀಡದ ಹಾಗೂ ಲಾಕ್ಡೌನ್ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದರು.
ರೈತರು ಬೆಳೆದ ತರಕಾರಿ ಹಾಗೂ ಇತರ ಬೆಳೆಗಳನ್ನು ಮಾರಾಟ ಮಾಡಲು ಅಧಿಕಾರಿಗಳು ಅನುವು ಮಾಡಿಕೊಡಬೇಕು. ನರೇಗಾದಡಿ ಗ್ರಾಮಸ್ಥರಿಗೆ ಉದ್ಯೋಗ ನೀಡಬೇಕು. ರೈತರಿಗೆ ಬಿತ್ತನೆ ಬೀಜಗಳನ್ನು ಪಿಕೆಪಿಎಸ್ನಲ್ಲಿ ಮಾರಾಟ ಮಾಡುವ ಸೌಲಭ್ಯ ಕಲ್ಪಿಸಬೇಕು ಎಂದು ತಿಳಿಸಿದರು. ತಹಸೀಲ್ದಾರ್ ಸುಭಾಷ ಸಂಪಗಾವಿ, ತಾಪಂ ಇಒ ಕೆ.ಎಸ್.ಪಾಟೀಲ, ಸಿಪಿಐ ಆರ್.ಆರ್.ಪಾಟೀಲ, ತಾಲೂಕು ವೈದ್ಯಾಧಿಕಾರಿ ಡಾ.ವಿಠ್ಠಲ ಶಿಂಧೆ, ಕೃಷಿ ಇಲಾಖೆ ಅಧಿಕಾರಿ ಮಂಜುನಾಥ ಜನಮಟ್ಟಿ, ಶಿವಾನಂದ ಶಿರಗಾವಿ ಮಾತನಾಡಿದರು. ವಿಕ್ರಮ ಬಣಗೆ, ಅಶೋಕ ಸಾಗರ, ಅರವಿಂದ ಚೌಗಲೆ, ಅಣ್ಣಾಸಾಬ ಮೊಳಕೆ, ಸುಭಾಷ ಚೌಗಲೆ, ರೇವಯ್ಯ ಹಿರೇಮಠ, ಭರತ ದೇವಡಕರ, ಶಂಕರ ಮಾಯಣ್ಣವರ ಉಪಸ್ಥಿತರಿದ್ದರು.