ಬೆಳಗಾವಿ: ಡಿ.ಕೆ.ಶಿವಕುಮಾರ್ ನನ್ನ ವೈಯಕ್ತಿಕ ಜೀವನ ಹಾಳು ಮಾಡಿದ್ದಾನೆ. ಅದನ್ನು ಗಟ್ಟಿಯಾಗಿ ನಿಂತು ಎದುರಿಸಿ ಹೊರಗೆ ಬಂದಿದ್ದೇನೆ. ಸಿಡಿ ಕೇಸ್ ಅನ್ನು ಸಿಬಿಐಗೆ ಕೊಡಿಸುತ್ತೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆಕ್ರೋಶ ಹೊರಹಾಕಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ರಮೇಶ್ ಜಾರಕಿಹೊಳಿ, ಅಮಿತ್ ಶಾ ಅವರ ಜತೆ ಮಾತನಾಡಿದ್ದೇನೆ. ಸಿಡಿ ಕೇಸ್ನಲ್ಲಿ ಮಹಾನಾಯಕನ ಕೈವಾಡ ಇದೆ ಅನ್ನೋದಕ್ಕೆ ನನ್ನ ಬಳಿ ಸಾಕ್ಷಿ ಇದೆ. 40 ಕೋಟಿ ರೂ. ಖರ್ಚು ಮಾಡಿ ರಮೇಶ್ ಜಾರಕಿಹೊಳಿಯನ್ನ ಸಿಡಿ ಕೇಸಲ್ಲಿ ಸಿಕ್ಕಿಸಿ ಹಾಕಿಸಿದ್ದೇನೆ ಎಂದು ಸ್ವತಃ ಡಿಕೆಶಿಯೇ ಮಾತಾಡಿರುವ ಸಂಭಾಷಣೆ ನನಗೆ ಸಿಕ್ಕಿದೆ. ಸಿಡಿ ಕೇಸ್ನ ಇಬ್ಬರು ಪ್ರಮುಖ ಆರೋಪಿಗಳು ಶಿರಾ ಹಾಗೂ ದೇವನಹಳ್ಳಿ ಮೂಲದವರು. ದೇವನಹಳ್ಳಿ ಮೂಲದವನ ಮನೆ ಮೇಲೆ ದಾಳಿಯಾದಾಗ ಆತನ ಮನೆಯಲ್ಲಿ 90ರಿಂದ 110 ಸಿಡಿಗಳು ಸಿಕ್ಕಿವೆ. ಆತನ ಮನೆ ಮೇಲೆ ದಾಳಿ ಮಾಡಲು ಹೋದ ಅಧಿಕಾರಿಯೊಬ್ಬರ ಸಿಡಿಯೂ ಆ ವೇಳೆ ಸಿಕ್ಕಿದೆ ಎಂದು ಹೊಸ ಬಾಂಬ್ ಸಿಡಿಸಿದರು.
ಅಧಿಕಾರಿಯ ಸಿಡಿಯನ್ನೂ ಮುಚ್ಚಿಟ್ಟಿದ್ದಾರೆ. ಹಾಗಾಗಿ ಈ ಪ್ರಕರಣವನ್ನ ಸಿಬಿಐಗೆ ಕೊಡಬೇಕು. ಮುಂದಿನ ವಾರ ದೆಹಲಿಗೆ ಹೋಗಿ ಅಮಿತ್ ಶಾ ಅವರನ್ನ ಭೇಟಿಯಾಗುತ್ತೇನೆ. ಸಿಬಿಐ ವಿಚಾರಣೆಗೆ ಕೊಟ್ಟು ಮಹಾನಾಯಕನ ಪೂರ್ತಿ ಮುಖವಾಡ ಕಳಚಬೇಕು, ಅವನಿಗೆ ಬುದ್ಧಿ ಕಲಿಸಬೇಕು. ನನ್ನಂತೆ ಬೇರೆಯವರು ಸಂಕಷ್ಟಕ್ಕೆ ಸಿಲುಕಬಾರದು. ಬಹಳಷ್ಟು ಜನರನ್ನ ಬ್ಲ್ಯಾಕ್ಮೇಲ್ ಮಾಡಲು ಡಿಕೆಶಿ ರೆಡಿಯಾಗಿದ್ದಾನೆ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ಸಂತೋಷ ಪಾಟೀಲ್ ಆತ್ಮಹತ್ಯೆ ಕೇಸ್ ಅನ್ನೂ ಸಿಬಿಐಗೆ ವಹಿಸಬೇಕು. ನನ್ನನ್ನು ಕಂಡ್ರೆ ಡಿಕೆಶಿಗೆ ಹೆದರಿಕೆ ಇದೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.
ಹಳೇ ಸ್ಕೂಟರ್ನಲ್ಲಿ ದೇಶ ಸುತ್ತಿದ ತಾಯಿ-ಮಗನಿಂದ ಕುಕ್ಕೆಯಲ್ಲಿ ವಿಶೇಷ ಪೂಜೆ
ಮಂಡ್ಯದಲ್ಲಿ ಬೆಳ್ಳಂಬೆಳಗ್ಗೆ ಅವಘಡ: ಮಾಲ್ಗುಡಿ ಎಕ್ಸ್ಪ್ರೆಸ್ ರೈಲಿಗೆ ಸಿಲುಕಿ ಮಹಿಳೆಯರಿಬ್ಬರ ದುರ್ಮರಣ