ಡಾರ್ಜಿಲಿಂಗ್: ಚೀನಾ-ಭಾರತ ಗಡಿಭಾಗದಲ್ಲಿ ಸಂಘರ್ಷಮಯ ಸನ್ನಿವೇಶ ಮುಂದುವರಿದಿರುವಂತೆಯೇ ಸೈನಿಕರಲ್ಲಿ ಆತ್ಮಬಲ ತುಂಬುವ ಕೆಲಸವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾಡಿದ್ದಾರೆ. ದಸರಾವನ್ನು ಸೈನಿಕರ ಜತೆಗೆ ಆಚರಿಸಿಕೊಳ್ಳುವುದಾಗಿ ಘೋಷಿಸಿದ್ದ ಅವರು, ಇಂದು ಸಿಕ್ಕಿಂನಲ್ಲಿ ಭಾರತೀಯ ಯೋಧರ ಜತೆಗೂಡಿ ಆಯುಧ ಪೂಜೆ ನೆರವೇರಿಸಿದರು.
ಚೀನಾ ಜತೆಗಿನ ಗಡಿ ಸಮಸ್ಯೆ ಶಾಂತಿಯುತವಾಗಿ ಬಗೆಹರಿಯಬೇಕು ಎಂಬುದು ಭಾರತದ ಇಚ್ಛೆ. ಇದಕ್ಕೆ ಬೇಕಾದ ಮಾತುಕತೆಗಳು ನಡೆಯುತ್ತಿವೆ. ಇದೇ ವೇಳೆ, ನಮ್ಮ ದೇಶದ ಒಂದೇ ಒಂದು ಇಂಚು ಭೂಮಿ ಕೂಡ ಅನ್ಯರ ಪಾಲಾಗುವುದು ಸಹಿಸಲಾಗದು. ಅದನ್ನು ತಡೆಯುವ ಸಾಮರ್ಥ್ಯ ನಮಗಿದೆ ಎಂದು ರಾಜನಾಥ್ ಸಿಂಗ್ ಇದೇ ವೇಳೆ ಹೇಳಿದರು.
ಇದನ್ನೂ ಓದಿ: ಜಗತ್ತಿನಾದ್ಯಂತ ಮಲ್ಲಕಂಬ ಜನಪ್ರಿಯಗೊಳ್ಳುತ್ತಿದೆ ನೋಡಿ..
ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಣೆ ಅವರೊಂದಿಗೆ ಚೀನಾ ಗಡಿಭಾಗದ ಸೇನಾ ನೆಲೆಯಲ್ಲಿ ಸೈನಿಕರೊಂದಿಗೆ ಇರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಯಕಟ್ಟಿನ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಇದೇ ಸಂದರ್ಭದಲ್ಲಿ ಅವರು ಬಾರ್ಡರ್ ರೋಡ್ ಆರ್ಗನೈಸೇಷನ್ ನಿರ್ಮಿಸಿದ ಗ್ಯಾಂಗ್ಟಕ್ -ನಾಥುಲಾ ರೋಡ್ ಪರ್ಯಾಯ ರಸ್ತೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು. (ಏಜೆನ್ಸೀಸ್)