ಚೆನ್ನೈ: ರಕ್ತದೊತ್ತಡದಲ್ಲಿ ತೀವ್ರ ಏರಿಳಿತದ ಸಮಸ್ಯೆಯಿಂದ ಸೂಪರ್ಸ್ಟಾರ್ ರಜಿನಿಕಾಂತ್ ಅವರು ಶುಕ್ರವಾರ ಆಸ್ಪತ್ರೆಗೆ ದಾಖಲಾಗಿರುವುದಾಗಿ ವರದಿಯಾಗಿದೆ.
ರಜಿನಿಕಾಂತ್ ಅವರು ಚೆನ್ನೈ ಹೊರ ವಲಯದ ಫಾರ್ಮ್ ಹೌಸ್ನಲ್ಲಿ ಪ್ರತ್ಯೇಕವಾಗಿದ್ದರು. ತಮ್ಮ ಅಭಿನಯದ ‘ಅಣ್ಣಾತ್ತೆ’ ಚಿತ್ರತಂಡದ ನಾಲ್ವರಲ್ಲಿ ಕರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಚಿತ್ರೀಕರಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ರಜಿನಿಕಾಂತ್ ಪ್ರತ್ಯೇಕವಾಗಿದ್ದರು.
ಇದನ್ನೂ ಓದಿ: ಮಗಳ ಪಾಲಿಗೆ ತಂದೆಯೇ ವಿಲನ್: ಡೈರಿಯಲ್ಲಿ ಅಪ್ಪನ ಪೈಶಾಚಿಕ ಕೃತ್ಯದ ಇಂಚಿಂಚೂ ಮಾಹಿತಿ ಬರೆದಿಟ್ಟ ಪುತ್ರಿ!
ಇದೀಗ ರಕ್ತದೊತ್ತಡದಲ್ಲಿ ಏರಿಳಿತದ ಸಮಸ್ಯೆಯಿಂದ ಚೆನ್ನೈ ಅಪೋಲೋ ಆಸ್ಪತ್ರೆಗೆ ದಾಖಲಾಗಿರುವುದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಗುರುವಾರವಷ್ಟೇ ರಜಿನಿ ಅವರಿಗೆ ಕರೊನಾ ನೆಗಿಟಿವ್ ವರದಿಯಾಗಿತ್ತು.
ರಜನಿಕಾಂತ್ ಅವರು ‘ಅಣ್ಣಾತ್ತೆ’ ಚಿತ್ರವನ್ನು ಜನವರಿ 12ರೊಳಗೆ ಮುಗಿಸಬೇಕು ಎಂದು ಪ್ಲಾನ್ ಹಾಕಿಕೊಂಡಿದ್ದರು. ಅದಕ್ಕಾಗಿ ಕಳೆದ ಕೆಲವು ದಿನಗಳಿಂದ, ಪ್ರತಿದಿನ 12 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದರು. ಚಿತ್ರೀಕರಣ ಸಹ ಸಾಕಷ್ಟು ಮುಗಿದಿತ್ತು. ಎಲ್ಲಾ ಚೆನ್ನಾಗಿ ನಡೆಯುತ್ತಿರುವಾಗ, ಚಿತ್ರತಂಡದ ನಾಲ್ವರಿಗೆ ಕರೊನಾ ಪಾಸಿಟಿವ್ ಬಂದಿರುವುದರಿಂದ ಚಿತ್ರೀಕರಣ ಅನಿವಾರ್ಯವಾಗಿ ಮುಂದಕ್ಕೆ ಹೋಗಿದೆ.
ಇಷ್ಟಕ್ಕೂ ರಜನಿಕಾಂತ್ ಅವರಿಗೆ ತುರ್ತಾಗಿ ಚಿತ್ರ ಮುಗಿಸುವುದಕ್ಕೂ ಒಂದು ಕಾರಣವಿದೆ. ಮುಂದಿನ ವರ್ಷ ತಮಿಳುನಾಡಿನಲ್ಲಿ ಚುನಾವಣೆಗಳು ನಡೆಯಲಿದ್ದು, ಅದರಲ್ಲಿ ರಜನಿಕಾಂತ್ ಅವರ ರಾಜಕೀಯ ಪಕ್ಷ ಸಹ ಸ್ಪರ್ಧಿಸಲಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಒಪ್ಪಿಕೊಂಡಿರುವ ‘ಅಣ್ಣಾತ್ತೆ’ ಚಿತ್ರದ ಚಿತ್ರೀಕರಣವನ್ನು ಆದಷ್ಟು ಬೇಗ ಮುಗಿಸುವುದು ಅವರ ಯೋಚನೆ. ಆದರೆ, ಇದೀಗ ಚಿತ್ರ ಮುಗಿಯುವುದು ಇನ್ನಷ್ಟು ತಡವಾಗಲಿದೆ.
‘ಅಣ್ಣಾತ್ತೆ’ ಚಿತ್ರದಲ್ಲಿ ರಜನಿಕಾಂತ್ ಜೊತೆಗೆ ನಯನತಾರಾ, ಖುಷ್ಬೂ, ಮೀನಾ, ಕೀರ್ತಿ ಸುರೇಶ್ ಮುಂತಾದವರು ನಟಿಸುತ್ತಿದ್ದು, ಶಿವಾ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. (ಏಜೆನ್ಸೀಸ್)
ಪೊಲೀಸ್ ಇನ್ಸ್ಪೆಕ್ಟರ್, ಕಾನ್ಸ್ಟೇಬಲ್ಗೆ ಹಾಡಹಗಲೇ ಬೆಂಕಿ ಹಚ್ಚಿದ ಗುಂಪು: ಇಬ್ಬರ ಸ್ಥಿತಿಯೂ ಗಂಭೀರ!
ತಾಳಿ ಕಟ್ಟುವಷ್ಟರಲ್ಲಿ ಪೊಲೀಸರಿಗೆ ಕರೆ ಮಾಡಿ ಕೈಕೊಟ್ಟ ವಧು: ಚಿಂತಿಸದ ವರನಿಂದ ಒಳ್ಳೆಯ ನಿರ್ಧಾರ!