ಜೈಪುರ: ಭಾರಿ ಹಗ್ಗಜಗ್ಗಾಟದ ಬಳಿಕ ರಾಜಸ್ಥಾನ ರಾಜ್ಯಪಾಲ ಕಲ್ರಾಜ್ ಮಿಶ್ರಾ ರಾಜಸ್ಥಾನ ವಿಧಾನಸಭೆ ಅಧಿವೇಶನ ನಡೆಸಲು ಸಿಎಂ ಅಶೋಕ್ ಗೆಹ್ಲೋಟ್ಗೆ ಅನುಮತಿ ನೀಡಿದ್ದಾರೆ.
ಬುಧವಾರವೂ (ಜುಲೈ 29) ಸಿಎಂ ಅಶೋಕ್ ಗೆಹ್ಲೋಟ್ ಕಲಾಪ ನಡೆಸುವ ಪ್ರಸ್ತಾವನೆಗೆ ಸಂಬಂಧಿಸಿದಂತೆ ರಾಜ್ಯಪಾಲರನ್ನು ಭೇಟಿಯಾಗಿದ್ದರು. ಅಂತಿಮವಾಗಿ ಆಗಸ್ಟ್ 14ರಿಂದ ಅಧಿವೇಶನ ನಡೆಸಲು ಹಸಿರು ನಿಶಾನೆ ತೋರಿದ್ದಾರೆ.
ಎರಡು ದಿನಗಳ ಹಿಂದಷ್ಟೇ ಕಲಾಪಕ್ಕೆ ಸಮ್ಮತಿ ಸೂಚಿಸಿದ್ದ ರಾಜ್ಯಪಾಲರು ಮೂರು ಷರತ್ತುಗಳನ್ನು ವಿಧಿಸಿದ್ದರು. ಅಧಿವೇಶನಕ್ಕೆ 21 ಮುನ್ನ ಶಾಸಕರಿಗೆ ನೋಟಿಸ್ ನೀಡಿ. ಕಲಾಪದ ವೇಳೆ ವ್ಯಕ್ತಿಗತ ಅಂತರ ಕಾಯ್ದುಕೊಳ್ಳಿ, ವಿಶ್ವಾಸ ಮತ ಯಾಚಿಸುವುದಾರೆ ಕಲಾಪದ ನೇರ ಪ್ರಸಾರ ನಡೆಸಿ ಎಂದು ಸೂಚಿಸಿದ್ದರು.
ಇದನ್ನೂ ಓದಿ; ತಮಿಳುನಾಡಿನ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ ಅಣ್ಣಾಮಲೈ ಸಂದರ್ಶನ
ಸಿಎಂ ಸಲ್ಲಿಸಿದ್ದ ಪರಿಷ್ಕೃತ ಪ್ರಸ್ತಾವನೆಯಲ್ಲಿ ವಿಶ್ವಾಸ ಮತ ಯಾಚನೆಯ ಪ್ರಸ್ತಾವನೆ ಇಲ್ಲದಿರುವುದಕ್ಕೆ ಸ್ಪಷ್ಟನೆ ನೀಡುವಂತೆ ಸಿಎಂಗೆ ಮತ್ತೊಮ್ಮೆ ರಾಜ್ಯಪಾಲರು ಸೂಚಿಸಿದ್ದರು. ಹೀಗಾಗಿ ಆಗಸ್ಟ್ 14ರಿಂದ ಕಲಾಪ ನಡೆಸಲು ಅನುಮತಿ ನೀಡುವಂತೆ ಕೋರಿ ಸಿಎಂ ಮೂರನೇ ಬಾರಿಗೆ ಪ್ರಸ್ತಾವನೆ ಕಳುಹಿಸಿದ್ದರು.
ಈ ನಡುವೆ, ಸಚಿನ್ ಪೈಲಟ್ ಹಾಗೂ ಅವರ ಬೆಂಬಲಿಗರ ಶಾಸಕರ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿರುವ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸ್ಪೀಕರ್ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.