ಹರಿಹರ: ನಾವು ಅಗತ್ಯ ವಸ್ತುಗಳ ದರ ಇಳಿಸುತ್ತೇವೆ ಎಂದು ಭರವಸೆ ನೀಡಿ ಅಧಿಕಾರಕ್ಕೆ ಬಂದಿಲ್ಲ ಎಂದು ಕಾನೂನು, ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಸ್ಪಷ್ಟನೆ ನೀಡಿದರು.
ತಾಲೂಕಿನ ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಗುರುಪೀಠಕ್ಕೆ ಶನಿವಾರ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಅಗತ್ಯ ವಸ್ತುಗಳ ಬೆಲೆಗಳ ನಿಯಂತ್ರಣ ಮಾಡುವ ಸಾಮರ್ಥ್ಯ ಕೇಂದ್ರ ಸರ್ಕಾರಕ್ಕಿದೆಯೇ ಹೊರತು ರಾಜ್ಯ ಸರ್ಕಾರಕ್ಕಿಲ್ಲ.
ಅಷ್ಟಕ್ಕೂ ವಾಣಿಜ್ಯ ಇಲಾಖೆ ಕೇಂದ್ರ ಸರ್ಕಾರದ ಅಧೀನದಲ್ಲಿದೆ ಎಂದರು.
ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ವಿವಿಧ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ತೊಂದರೆ ಆಗಿದೆ. ಆದರೆ, ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ದರ ಇಳಿಸುವ ಸಾಮರ್ಥ್ಯ ಇಲ್ಲ ಎಂದು ತಿಳಿಸಿದರು.
ದರ ಏರಿಕೆಯಿಂದ ಜನರಿಗೆ ಆಗಿರುವ ತೊಂದರೆ ಭಾರ ಇಳಿಸುವ ಸಲುವಾಗಿ ಗೃಹಲಕ್ಷ್ಮೀ ಯೋಜನೆ ಜಾರಿ ಮಾಡಲಾಗಿದೆ. ಜನರ ಬದುಕಿಗೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಜನಪರ ಯೋಜನೆ ಜಾರಿ ಮಾಡುತ್ತಿದೆ ಎಂದರು.
ವರ್ಗಾವಣೆ ದಂಧೆ ಆರೋಪ: ಮಾಜಿ ಸಿಎಂ ಕುಮಾರಸ್ವಾಮಿ ಆರೋಪಿಸಿದಂತೆ ರಾಜ್ಯ ಸರ್ಕಾರ ಅಧಿಕಾರಿಗಳ ವರ್ಗಾವಣೆ ದಂಧೆ ಮಾಡುತ್ತಿಲ್ಲ.
ಈ ಕುರಿತು ಸಿಎಂ ಸಿದ್ದರಾಮಯ್ಯ ದೂರು ಇದ್ದರೆ ಕೊಡಿ ಕ್ರಮಕೈಗೊಳ್ಳುತ್ತೇವೆಂದು ಈಗಾಗಲೆ ಸ್ಪಷ್ಟನೆ ನೀಡಿದ್ದಾರೆ. ಪೆನ್ಡ್ರೈವ್ ಬಗ್ಗೆ ಆರೋಪ ಮಾಡಿದವರನ್ನೇ ಕೇಳಬೇಕೆಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜೆಡಿಎಸ್- ಬಿಜೆಪಿ ಹೊಂದಾಣಿಕೆ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಹೊಂದಾಣಿಕೆ ಮಾಡಿಕೊಳ್ಳುತ್ತಾರೆಂಬ ಬಗ್ಗೆ ಅನುಮಾನವಿದೆ.
ಅವರಿಬ್ಬರೂ ಪರಸ್ಪರ ಹೊಡೆದಾಡುವುದನ್ನು ಎಲ್ಲರೂ ಗಮನಿಸಿದ್ದಾರೆ. ಅಷ್ಟಕ್ಕೂ ಲೋಕಸಭಾ ಚುನಾವಣೆ ಇನ್ನೂ ಘೋಷಣೆಯಾಗಿಲ್ಲ ಎಂದರು.
ಆರ್ಎಸ್ಎಸ್ಗೆ ಜಮೀನು: ಆರ್ಎಸ್ಎಸ್ಗೆ ಮಂಜೂರು ಮಾಡಿದ್ದ ಜಮೀನಿನ ವಿಷಯದಲ್ಲಿ ಸರ್ಕಾರ ಯಥಾಸ್ಥಿತಿ ಕಾಪಾಡಲು ಹೇಳಿರುವ ವಿಷಯದಲ್ಲಿ ಪ್ರತಿಕ್ರಿಯಿಸಲು ನಿರಾಕರಿಸಿದ ಸಚಿವರು, ಈ ವಿಷಯವನ್ನು ಸಂಬಂಧಿತ ಸಚಿವರ ಬಳಿ ಕೇಳಿ ಎಂದರು.
ನಾಡಿನ ಎಲ್ಲ ಮಠಗಳೊಂದಿಗೆ ಉತ್ತಮ ಸಂಬಂಧ, ಸಂಪರ್ಕ ಹೊಂದಿದ್ದೇವೆ. ವಾಲ್ಮೀಕಿ ಪ್ರಸನ್ನಾನಂದ ಶ್ರೀಗಳೊಂದಿಗೆ ವಿವಿಧ ವಿಷಯಗಳ ಕುರಿತು ಚರ್ಚಿಸಿದ್ದೇವೆ ಎಂದು ವಿವರಿಸಿದರು.
ಪ್ರಸನ್ನಾನಂದ ಶ್ರೀಗಳು, ಜಿಪಂ ಮಾಜಿ ಸದಸ್ಯ ಎಂ. ನಾಗೇಂದ್ರಪ್ಪ ಇತರರಿದ್ದರು.