ಇಸ್ಲಮಾಬಾದ್: ಭಾರತದಲ್ಲಿ ದೆಹಲಿಯ ನಿಜಾಮುದ್ದೀನ್ ಮರ್ಖಜ್ ಕರೊನಾ ಹಾಟ್ಸ್ಫಾಟ್ ಆಗಿದೆ. ಕರೊನಾ ವೈರಸ್ ಹರಡುತ್ತಿದ್ದ ಸಂದರ್ಭದಲ್ಲಿ, ದೆಹಲಿ ಸರ್ಕಾರ ಸೆಕ್ಷನ್ 144 ಜಾರಿಗೊಳಿಸಿ, ಗುಂಪುಗೂಡುವುದಕ್ಕೆ ನಿರ್ಬಂಧ ವಿಧಿಸಿದ್ದರೂ ತಬ್ಲಿಘಿ ಜಮಾತ್ ಧಾರ್ಮಿಕ ಸಮಾವೇಶ ನಡೆಸಿತ್ತು. ಅದರಲ್ಲಿ ದೇಶದ ಎಲ್ಲ ರಾಜ್ಯಗಳಿಂದ ಅಲ್ಲದೆ, ವಿದೇಶಗಳ ಮುಸ್ಲಿಮರೂ ಪಾಲ್ಗೊಂಡಿದ್ದರು.
ಅದಾದ ಬಳಿಕ ನಡೆದ ಘಟನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ. ಸದ್ಯ ಭಾರತದಲ್ಲಿ ಇರುವ ಕರೊನಾ ರೋಗಿಗಳಲ್ಲಿ ಶೇ.30ರಷ್ಟು ಮಂದಿ ಆ ಸಭೆಯಲ್ಲಿ ಪಾಲ್ಗೊಂಡವರೇ ಇರುವುದು ದುರಂತ.
ಹೀಗೆ ಕರೊನಾ ಪ್ರಸರಣದ ನಡುವೆಯೂ ಭಾರತದಲ್ಲಿ ಧಾರ್ಮಿಕ ಸಭೆ ನಡೆಸಿದ್ದ ತಬ್ಲಿಘಿ ಜಮಾತ್ಗೆ ಪಾಕಿಸ್ತಾನದಿಂದಲೂ ಟೀಕೆ ವ್ಯಕ್ತವಾಗಿತ್ತು. ಸೋಂಕು ಗಂಭೀರ ಪ್ರಮಾಣದಲ್ಲಿ ಹರಡುತ್ತಿದ್ದರೂ ಧಾರ್ಮಿಕ ಸಮಾವೇಶ ಅಗತ್ಯವಿತ್ತಾ ಎಂದು ಪಾಕ್ ಸರ್ಕಾರವೂ ವ್ಯಂಗ್ಯವಾಡಿತ್ತು. ಆದರೆ ಈಗ ಪಾಕಿಸ್ತಾನದಿಂದಲೂ ಒಂದು ಅಂಥದ್ದೇ ಘಟನೆ ವರದಿಯಾಗಿದೆ.
ಪಾಕಿಸ್ತಾನದ ಪಂಜಾಬ್ ವಲಯದಲ್ಲಿರುವ ರೈವಿಂದ್ ಮಾರ್ಖಜ್ನಲ್ಲಿ ಮಾ.10ರಂದು ಸುನ್ನಿ ಸಂಘಟನೆಯೊಂದು ತನ್ನ ವಾರ್ಷಿಕ ಸಭೆಯನ್ನು ನಡೆಸಿದೆ. ಸ್ಥಳೀಯ ಸರ್ಕಾರದಿಂದ ಅನುಮತಿ ದೊರೆಯದಿದ್ದರೂ ಅದನ್ನು ಲೆಕ್ಕಿಸದೆ ಸಭೆ ನಡೆಸಲಾಗಿದೆ. ಈ ಸಮಯದಲ್ಲಿ ಕರೊನಾ ವೈರಸ್ ಆಗಲೇ ಪಾಕಿಸ್ತಾನವನ್ನು ಪ್ರವೇಶಿಸಿತ್ತು. ಅಷ್ಟೇ ಅಲ್ಲ ಜಗತ್ತಿನಾದ್ಯಂತ ಒಂದೂವರೆ ಲಕ್ಷಕ್ಕೂ ಅಧಿಕ ಮಂದಿ ಸೋಂಕಿಗೆ ತುತ್ತಾಗಿದ್ದರು. 84 ಸಾವಿರಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು.
ಸುನ್ನಿ ಸಂಘಟನೆ ಆಯೋಜಿಸಿದ್ದ ಈ ಸಭೆಯಲ್ಲಿ 40 ವಿವಿಧ ರಾಷ್ಟ್ರಗಳಿಂದ 3000 ಮುಸ್ಲಿಮರು ಪಾಲ್ಗೊಂಡಿದ್ದರು. ಒಟ್ಟಾರೆ ಎಲ್ಲ ಸೇರಿ 70,000-80,000 ಜನರು ಭಾಗವಹಿಸಿದ್ದ ಸಭೆ ಇದಾಗಿತ್ತು.
ಬಳಿಕ ಕರೊನಾ ವೈರಸ್ ಹೆಚ್ಚಾಗುತ್ತಿದ್ದ ಕಾರಣ ಪಾಕಿಸ್ತಾನ ಸರ್ಕಾರ ಎಲ್ಲ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನೂ ಸ್ಥಗಿತಗೊಳಿಸಿತ್ತು. ಇದರಿಂದಾಗಿ ವಿವಿಧ ದೇಶಗಳಿಂದ ಆಗಮಿಸಿದ್ದ 3000ಕ್ಕೂ ಅಧಿಕ ಮಂದಿ ಪಾಕ್ನಲ್ಲಿಯೇ ಉಳಿಯುವಂತಾಯಿತು ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಸಭೆಯಲ್ಲಿ ಪಾಲ್ಗೊಂಡ ಹಲವರಿಗೆ ಕರೊನಾ ವೈರಸ್ ತಗುಲಿದ್ದು ತೀವ್ರ ಆತಂಕಕ್ಕೆ ಎಡೆಮಾಡಿಕೊಟ್ಟಿದೆ. 2 ಲಕ್ಷಕ್ಕೂ ಹೆಚ್ಚು ಮಂದಿ ವಾಸವಾಗಿರುವ ರೈವಿಂದ್ ಮರ್ಖಜ್ ಪ್ರದೇಶವನ್ನು ಸದ್ಯ ಸಂಪೂರ್ಣ ಬಂದ್ ಮಾಡಲಾಗಿದೆ. ಇದೂ ಒಂದು ಕರೊನಾ ಹಾಟ್ಸ್ಫಾಟ್ ಎನಿಸಿಕೊಂಡಿದೆ.
ರೈವಿಂದ್ ಮಾರ್ಖಜ್ನ ಸಭೆಯಲ್ಲಿ ಭಾಗವಹಿಸಿದ್ದ ಪಾಕಿಸ್ತಾನದ ಒಟ್ಟು 36 ಜಿಲ್ಲೆಗಳ 10,200 ಮಂದಿಯನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿದೆ. ಪಾಕಿಸ್ತಾನದಲ್ಲಿ ಇದುವರೆಗೆ 4196 ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ಅದರಲ್ಲಿ ಹೆಚ್ಚಿನ ಜನ ರೈವಿಂದ್ ಮಾರ್ಖಜ್ ಸಭೆಯಲ್ಲಿ ಪಾಲ್ಗೊಂಡವರೇ ಇದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)