ಬಾಳೆಹೊನ್ನೂರು: ಪಟ್ಟಣ ಸೇರಿ ಸುತ್ತಮುತ್ತಲಿನ ಪ್ರದೇಶದಲ್ಲಿ ಬುಧವಾರ ರಾತ್ರಿಯಿಂದ ಅಕಾಲಿಕ ಮಳೆ ಸುರಿಯಲಾರಂಭಿಸಿದ್ದು, ಗುರುವಾರ ಇಡೀ ದಿನ ಮಳೆಯಾಗಿದೆ.
ಚಂಡಮಾರುತದ ಪರಿಣಾಮ ಜಿಟಿ ಜಿಟಿ ಮಳೆ ಆರಂಭಗೊಂಡಿದ್ದು, ಗುರುವಾರ ಬೆಳಗ್ಗೆ ವೇಳೆಗೆ ರಭಸವಾಗಿ ಸುರಿಯಿತು. ದಿಢೀರ್ ಸುರಿಯಲಾರಂಭಿಸಿದ ಹಿನ್ನೆಲೆಯಲ್ಲಿ ಭತ್ತ, ಕಾಫಿ, ಅಡಕೆ ಬೆಳೆಗಾರರು ಆತಂಕಕ್ಕೀಡಾಗಿದ್ದಾರೆ.
ಮಲೆನಾಡು ಭಾಗದಲ್ಲಿ ಇದೀಗ ಭತ್ತದ ಗದ್ದೆಯ ಕಟಾವು ಆರಂಭಗೊಂಡಿದ್ದು, ಹಲವೆಡೆ ಒಕ್ಕಣೆ ಮಾಡಲು ಗದ್ದೆಯಲ್ಲಿ ಕೊಯ್ಲು ಮಾಡಿ ಹಾಕಿರುವ ಭತ್ತದ ಪೈರು ನೆನೆದು ಹಾನಿಯಾಗಿದೆ. ಇದರಿಂದ ಭತ್ತ ಮೊಳಕೆಯೊಡೆಯುವ ಆತಂಕವೂ ಎದುರಾಗಿದೆ. ಇದರೊಂದಿಗೆ ಕೊಯ್ಲು ಮಾಡಿರುವ ಕಾಫಿ ಸಹ ಮಳೆಗೆ ಸಿಲುಕಿದೆ. ಅಡಕೆ ಕೊಯ್ಲು ಮುಗಿದಿದ್ದು, ಸಂಸ್ಕರಣೆಗೆ ತೊಂದರೆಯಾಗಿದೆ.
ಒಂದೇ ದಿನದ ಮಳೆಗೆ ತೋಟಗಳಲ್ಲಿ ಕಾಫಿ ಹಣ್ಣು ಉದುರಿದ್ದು, ಬೆಳೆಗಾರರು ತೀವ್ರ ಆತಂಕಕ್ಕೀಡಾಗಿದ್ದಾರೆ. ಹಲವು ಕಡೆಗಳಲ್ಲಿ ಭತ್ತದ ಒಕ್ಕಣೆ ಕಾರ್ಯ ಸ್ಥಗಿತಗೊಳಿಸಿದ್ದಾರೆ.