ಬೆಂಗಳೂರು: ವರುಣನ ಅಬ್ಬರಕ್ಕೆ ಜನರ ಬುದಕು ಮಾತ್ರವಲ್ಲ, ಕೃಷಿ ಕೂಡ ತತ್ತರಿಸಿದೆ. ಕೈಗೆ ಬಂದಿದ್ದ ಫಸಲು ನೀರುಪಾಲಾಗಿದ್ದು, ರೈತ ಗೋಳಾಡುತ್ತಿದ್ದಾನೆ. ಅಷ್ಟೇ ಅಲ್ಲ ಗ್ರಾಹಕರ ಪಾಲಿಗೂ ಮಳೆ ಕಹಿಯಾಗಿ ಪರಿಣಮಿಸಿದೆ.
ಚಿತ್ರದುರ್ಗ, ಹೊಸದುರ್ಗ, ಬೆಳಗಾವಿ, ಬಾಗಲಕೋಟೆ, ವಿಜಯಪುರ ಹೀಗೆ ಉತ್ತರ ಕರ್ನಾಟಕ ಭಾಗದಲ್ಲಿ ಈರುಳ್ಳಿ ಬೆಳೆ ಮಳೆ ಆರ್ಭಟಕ್ಕೆ ನಾಶವಾಗಿದ್ದು, ಉತ್ಪಾದನೆ ಸ್ಥಗಿತವಾಗಿದೆ. ಪರಿಣಾಮ ಈರುಳ್ಳಿ ಸರಬರಾಜು ಶೇ.50 ಕಡಿಮೆಯಾಗಿದ್ದು, ಒಂದು ವಾರದಿಂದ ಈರುಳ್ಳಿ ಬೆಲೆ ಸತತ ಏರಿಕೆ ಕಂಡಿದೆ.
ಇದರ ಬೆಲೆ ರಿಟೇಲ್ ಮಾರುಕಟ್ಟೆಯಲ್ಲಿ 100 ರೂ. ಸನಿಹದಲ್ಲಿದೆ. ಸೋಮವಾರ ಬೆಂಗಳೂರಿನ ಯಶವಂತಪುರ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ 70ರಿಂದ 75 ದರ ಇತ್ತು. ಸಗಟು ಮಾರುಕಟ್ಟೆಯಲ್ಲಿ ಕೆಜಿ ಈರುಳ್ಳಿ ಬೆಲೆ 70 ರಿಂದ75 ರೂ. ಇದ್ದರೆ, ರಿಟೇಲ್ ಮಾರುಕಟ್ಟೆಯಲ್ಲಿ ಪ್ರತಿ 90ರಿಂದ 95 ರೂ. ಇದೆ.
ರಾಜ್ಯದ ವಿವಿಧೆಡೆ ಹಾಗೂ ಹೊರ ರಾಜ್ಯಗಳ ಗೋದಾಮಿನಲ್ಲಿ ಶೇಖರಣೆಯಾಗಿರುವ ಈರುಳ್ಳಿ ಮಾತ್ರ ಮಾರುಕಟ್ಟೆಗೆ ಬರುತ್ತಿದೆ. ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಿಂದ ನಿತ್ಯ 3,75,000 ರಿಂದ 5,00,000 ಕೆಜಿ ಈರುಳ್ಳಿ ನಗರಕ್ಕೆ ಆಮದಾಗುತ್ತಿದೆ. ಸದ್ಯ 100 ಕೆಜಿ ಚೀಲಕ್ಕೆ 7 ಸಾವಿರದಿಂದ 7.5 ರೂ.ಗೆ ಮಾರಾಟ ಕಂಡಿದೆ. ಮಹಾರಾಷ್ಟ್ರ ಈರುಳ್ಳಿ ಕೆಜಿಗೆ 100 ರೂ. ದರ ಇದೆ. ಮಳೆ ಹೀಗೆ ಮುಂದುವರಿದರೆ ಪ್ರತಿ ಚೀಲಕ್ಕೆ 10 ಸಾವಿರ ದಾಟಬಹುದು ಎನ್ನುತ್ತಾರೆ ಈರುಳ್ಳಿ ಮಂಡಿ ಮಾಲೀಕರು. ಈರುಳ್ಳಿ ಬೆಲೆ ಏರಿಕೆ ರೈತರ ಪಾಲಿಗೆ ಸಿಹಿ ಸುದ್ದಿಯಾದರೂ ಕೈಗೆ ಬಂದ ಫಸಲು ಮಳೆಗೆ ಹಾನಿಯಾಗಿದೆ.