More

    ಅವಾಂತರ ಸೃಷ್ಟಿಸಿದ ವರುಣ – ಮನೆ, ದೇವಸ್ಥಾನಕ್ಕೆ ನುಗ್ಗಿದ ನೀರು

    ಕೆರೂರ: ಪಟ್ಟಣದಲ್ಲಿ ಸೋಮವಾರ ರಾತ್ರಿಯಿಡೀ ಸುರಿದ ಭಾರಿ ಮಳೆ ಅವಾಂತರ ಸೃಷ್ಟಿಸಿದೆ. ತಗ್ಗು ಪ್ರದೇಶದ ಹಲವು ಬಡಾವಣೆ ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಜನರು ರಾತ್ರಿ ನಿದ್ದೆ ಮಾಡದೆ ಜಾಗರಣೆ ಮಾಡಿದರು.

    ಕಿಲ್ಲಾ ಪೇಟೆಯ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ನೀರು ನುಗ್ಗಿದ್ದು, ಮಂದಿರ ಸಂಪೂರ್ಣ ಜಲಾವೃತವಾಗಿದೆ. ನೀರಿನ ರಭಸಕ್ಕೆ ಅದರ ಎದುರಿನ ಸಲಾಬತ ದರ್ಗಾದ ತಡೆಗೋಡೆ ಕುಸಿದಿದೆ.
    ವೀರಪುಲಿಕೇಶಿ ಬ್ಯಾಂಕ್ ಹಿಂಭಾಗದ ತಗ್ಗು ಪ್ರದೇಶದಲ್ಲಿರುವ ಗೋಡಾವನಗಳ ಸುತ್ತ ಮಳೆ ನೀರು ಸಂಗ್ರಹವಾದ ಪರಿಣಾಮ ಆ ಪ್ರದೇಶ ಸಂಪೂರ್ಣ ಕೆರೆಯಂತಾಗಿದೆ. ಗೋಡಾವನಗಳಲ್ಲಿ ಇರಿಸಿದ ಮದ್ಯದ (ಸಾರಾಯಿ) ಬಾಕ್ಸ್ ಮತ್ತು ಗೊಬ್ಬರ ಚೀಲಗಳನ್ನು ಹೊರತರಲು ವರ್ತಕರು ಹರಸಾಹಸ ಪಟ್ಟರು. ಮೊಬೈಲ್ ಶಾಪ ಮಾಲೀಕ ವಿಷ್ಣು ಬಾಲಾಜಿ ಅವರ ಮನೆ ಸುತ್ತ ನೀರು ಆವರಿಸಿದ್ದು, ಕುಟುಂಬಕ್ಕೆ ಹೊರ ಬರದ ಸ್ಥಿತಿ ಎದುರಾಗಿದೆ.

    ಗ್ರಾಮೀಣ ಭಾಗದಲ್ಲೂ ಅವಾಂತರ: ಸಮೀಪದ ನೀರಲಕೇರಿ ಕೆರಕಲಮಟ್ಟಿ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಗ್ರಾಮಗಳಲ್ಲಿ ಮಳೆ ಅವಾಂತರ ಸೃಷ್ಟಿಸಿದೆ. ಮನೆಯೊಳಗೆ ನೀರು ನುಗ್ಗಿ ವಸ್ತುಗಳು ಹಾಳಾಗಿವೆ. ಮನೆಗೆ ನುಗ್ಗಿದ ನೀರು ಹೊರ ಹಾಕುವುದು ಮತ್ತು ವಸ್ತುಗಳನ್ನು ಸಂರಕ್ಷಿಸುವ ಕೆಲಸದಲ್ಲಿ ಹಳ್ಳಿಗಳ ಜನ ರಾತ್ರಿಯಿಡೀ ಸಮಯ ಕಳೆದರು.
    30 ಎಕರೆ ಕಬ್ಬು, ಗೋವಿನ ಜೋಳ ನೀರುಪಾಲು: ಹಳಗೇರಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಪ್ಲಾಜಾ ನಿರ್ಮಾಣ ಕಾಮಗಾರಿ ನಡೆದಿದೆ. ರಾಜದೀಪ್ ಕಂಪನಿ ಗುತ್ತಿಗೆ ಪಡೆದು 5ವರ್ಷ ಗತಿಸಿದರೂ ಕಾಮಗಾರಿ ಪೂರ್ಣಗೊಳಿಸಿಲ್ಲ. ಮಳೆಯಾದರೆ ನೀರು ಮುಂದೆ ಸಾಗದೆ ರೈತರ ಜಮೀನುಗಳಲ್ಲಿ ಸಂಗ್ರಹವಾಗುತ್ತಿದೆ. ಸೋಮವಾರ ರಾತ್ರಿ ಸುರಿದ ಭಾರಿ ಮಳೆಗೆ ಹಲವಾರು ರೈತರ 30 ಎಕರೆಗೂ ಅಧಿಕ ಕಬ್ಬು, ಗೋವಿನ ಜೋಳದ ಬೆಳೆಗಳು ನೀರು ಪಾಲಾಗಿವೆ. ಕಾಮಗಾರಿ ವಿಳಂಬದಿಂದಾಗಿ 5ವರ್ಷಗಳಿಂದ ಪ್ರತಿ ಮಳೆಗಾಲದಲ್ಲಿ ಬೆಳೆಗಳು ನೀರು ಪಾಲಾಗುತ್ತಿವೆ. ಗ್ರಾಮಲೆಕ್ಕಾಧಿಕಾರಿ ಮತ್ತು ಕೃಷಿ ಅಧಿಕಾರಿಗಳು ಜಮೀನಿಗೆ ಭೇಟಿ ನೀಡಿ ಹೋಗುತ್ತಾರೆ ಹೊರತು, ನಯಾಪೈಸೆ ಪರಿಹಾರ ದೊರೆತಿಲ್ಲ. ಯಾವೊಬ್ಬ ಅಧಿಕಾರಿಯೂ ನಮ್ಮ ಗೋಳು ಕೇಳುತ್ತಿಲ್ಲ ಎಂದು ರೈತ ಉಮೇಶ ನರನೂರ ಗುತ್ತಿಗೆದಾರ ಮತ್ತು ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts