ಸಂಶೋಧನಾ ಕೇಂದ್ರದ ಕ್ಯಾನ್ಸರ್ ಶಸ್ತ್ರ ಚಿಕಿತ್ಸೆ ತಜ್ಞ ರಮೇಶ ಸಿ.ಸಾಗರ ಮಾಹಿತಿ
ರಾಯಚೂರು: ಹೊಟ್ಟೆಯಲ್ಲಿದ್ದ ಎಂಟು ಕೆಜಿ ತೂಕದ ಗಡ್ಡೆಯೊಂದನ್ನು ಹೊರ ತೆಗೆಯುವ ಮೂಲಕ ಅಪಾಯದಲ್ಲಿದ್ದ ವ್ಯಕ್ತಿಯನ್ನು ಬದುಕಿಳಿಸಲಾಗಿದೆ ಎಂದು ಬಸವ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಕ್ಯಾನ್ಸರ್ ಶಸ್ತ್ರ ಚಿಕಿತ್ಸೆ ತಜ್ಞ ರಮೇಶ ಸಿ.ಸಾಗರ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಅತೀ ವಿರಳವಾಗಿ ಕಂಡು ಬರುವ ಅಪರೂಪದ ಮ್ಯೂಸಿನೆಸ್ ಸಿಸ್ಟಡಿನೋಮಾ ಅಪೆಂಡಿಕ್ಸ್ನಿಂದ ಬೆಳೆದ ಬೃಹತ್ ಗಾತ್ರದ ಗಡ್ಡೆ ಇದಾಗಿದೆ. ಕ್ಯಾನ್ಸರ್ ಗಡ್ಡೆ ಎನ್ನುವ ಬಗ್ಗೆ ಹೆಚ್ಚಿನ ತಪಾಸಣೆಯ ವರದಿ ಬಂದ ನಂತರ ಖಚಿತ ಪಡಿಸಲಾಗುವುದು. ದೇವದುರ್ಗ ತಾಲೂಕಿನ ಅರಕೇರಾ ಗ್ರಾಮದ ರಾಜಪ್ಪ ನಾಯಕ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಸ್ಕಾೃನಿಂಗ್ ವರದಿಯಲ್ಲಿ ಬೃಹತ್ ಗಾತ್ರದ ಗಡ್ಡೆ ಪತ್ತೆಯಾಗಿತ್ತು. ಕುಟುಂಬದವರ ಗಮನಕ್ಕೆ ತಂದು ಶಸ್ತ್ರಚಿಕಿತ್ಸೆ ಮಾಡಲಾಯಿತು. ರೋಗಿಯೂ ಆರೋಗ್ಯವಾಗಿದ್ದಾರೆ. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಬೃಹತ್ ಗಾತ್ರದ ಗಡ್ಡೆಯನ್ನು ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮೂಲಕ ಹೊರ ತೆಗೆಯಲಾಗಿದೆ ಎಂದು ಮಾಹಿತಿ ನೀಡಿದರು.
ನಾನಾ ಕಾರಣಗಳಿಂದ ಇಂತಹ ಗಡ್ಡೆಗಳಾಗುತ್ತವೆ. ಎಲ್ಲ ಹೊಟ್ಟೆನೋವು ಅಪೆಂಡಿಕ್ಸ್ ಅಥವಾ ಕ್ಯಾನ್ಸರ್ ಆಗಿರಲಿಕ್ಕಿಲ್ಲ. ಸಾಧಾರಣ ಎಂದು ನಿರ್ಧರಿಸುವುದು ಆಗುವುದಿಲ್ಲ. ಒಮ್ಮೆ ವೈದ್ಯರ ಸಲಹೆ ಪಡೆದು ತಪಾಸಣೆ ಮಾಡಿಸಿಕೊಂಡರೆ ಕ್ಯಾನ್ಸರ್ನಂತಹ ಮಾರಕ ರೋಗ ತಡೆಗಟ್ಟಲು ಅನುಕೂಲ ಆಗಲಿದೆ ಎಂದು ಹೇಳಿದರು.
ಆಸ್ಪತ್ರೆಯ ವ್ಯವಸ್ಥಾಪಕ ನಾಸೀರ್ ಖಾನ್ ಇದ್ದರು.