ರಾಯಚೂರು: ಜಿಲ್ಲೆಯಲ್ಲಿ ಗೋದಾಮು ಮತ್ತು ಕೋಲ್ಡ್ ಸ್ಟೋರೇಜ್ ನಿರ್ಮಾಣದಿಂದ ರೈತರಿಗೆ ಸಹಾಯವಾಗಿದ್ದು, ಕೃಷಿ ಉತ್ಪನ್ನಗಳ ಗುಣಮಟ್ಟ ನಿರ್ವಹಣೆ ಮತ್ತು ಉತ್ತಮ ಬೆಲೆ ಪಡೆಯಲು ಅನುಕೂಲವಾಗಿದೆ ಎಂದು ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ಎಸ್.ಕಮಲಕುಮಾರ ಹೇಳಿದರು.
ಇದನ್ನೂ ಓದಿ: ಕೈಗಾರಿಕೆಗಳಿಗೆ ರಾಜ್ಯ ಬಜೆಟ್ ಬೆಂಬಲಿಸಲಿ: ಸುರೇಶ್ ಕುಮಾರ್ ಜೈನ್
ಆಶಾಪುರಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ವಾಣಿಜ್ಯೋದ್ಯಮ ಸಂಘ ಮತ್ತು ಕೈಗಾರಿಕಾ ಸಂಸ್ಥೆಯಿಂದ ಆಯೋಜಿಸಿದ್ದ ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ಕೆನರಾ ಬ್ಯಾಂಕ್ ಸಹಾಯಧನ ಸಭೆಯ ಅಧ್ಯಕ್ಷತೆ ವಹಿಸಿ ಸೋಮವಾರ ಸಂಜೆ ಮಾತನಾಡಿದರು. ಸೆಸ್, ವಿದ್ಯುತ್ ದರ ಮತ್ತು ಮುಟೇಷನ್ ಶುಲ್ಕ ಹೆಚ್ಚಳದಿಂದ ಕೈಗಾರಿಕೋದ್ಯಮಿಗಳಿಗೆ ಸಮಸ್ಯೆಯಾಗಿದೆ. ಕೈಗಾರಿಕೆಗಳಿಗೆ ಮೂಲ ಸೌಕರ್ಯ ಮತ್ತು ನೀರು ಸರಬರಾಜು ಕುರಿತು ಹೆಚ್ಚಿನ ವ್ಯವಸ್ಥೆ ಮಾಡಬೇಕಿದೆ. ಇದರಿಂದ ಕೃಷಿ ಆಧಾರಿತ ಚಟುವಟಿಕೆಗಳಿಗೆ ಅನುಕೂಲವಾಗಲಿದೆ ಎಂದರು.
ಗೋದಾಮು ನಿರ್ಮಾಣ ರೈತರಿಗೆ ಅನುಕೂಲ
ಕೆನರಾ ಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕ ಎ.ತಿಪ್ಪೇಸ್ವಾಮಿ ಮಾತನಾಡಿ, ಗೋದಾಮುಗಳ ನಿರ್ಮಾಣದಿಂದ ರೈತರಿಗೆ ಕೃಷಿ ಉತ್ಪನ್ನ ಸಂಗ್ರಹಿಸಲು ಸಾಧ್ಯವಾಗಲಿದೆ. ಬ್ಯಾಂಕ್ನಲ್ಲಿ ಸಾಲಗಳ ತ್ವರಿತ ಪ್ರಕ್ರಿಯೆ ನಡೆಸಲಾಗುತ್ತಿದ್ದು, ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ನಿರ್ದೇಶಕ ಬಸವರಾಜ ನಿವೇಶನ ಹಂಚಿಕೆ, ಸಬ್ಸಿಡಿ, ಕೈಗಾರಿಕಾ ನೀತಿ ಕುರಿತು ಮಾಹಿತಿ ನೀಡಿದರು. ಕೆನರಾ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕಿ ಎಂ.ಮಾಧವಿ ಬ್ಯಾಂಕ್ನಿಂದ ನೀಡಲಾಗುವ ಕೃಷಿ, ಉನ್ನತ ವ್ಯಾಸಂಗ, ವಾಹನ ಖರೀದಿ ಸಾಲ ಕುರಿತು ಮಾಹಿತಿ ನೀಡಿದರು.
ಅಕ್ಕಿಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಸಾವಿತ್ರಿ ಪುರುಷೋತ್ತಮ, ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಪದಾಧಿಕಾರಿಗಳಾದ ಜಂಬಣ್ಣ ಯಕ್ಲಾಸಪುರ, ಜಗದೀಶ ಗುಪ್ತಾ, ಸಿದ್ದನಗೌಡ ಗಾರಲದಿನ್ನಿ, ವಿ.ಲಕ್ಷ್ಮೀರೆಡ್ಡಿ, ಸಂದೀಪ ಪಾಟೀಲ್, ದೇವನಪಲ್ಲಿ ಶ್ರೀನಿವಾಸ ಇದ್ದರು.