ನವದೆಹಲಿ: ತೆಲಂಗಾಣದಲ್ಲಿ ಮುಖ್ಯಮಂತ್ರಿ ಕೆಸಿಆರ್ ನೇತೃತ್ವದ ಭಾರತ ರಾಷ್ಟರ ಸಮಿತ ಪಕ್ಷವು ಯುವಜನತೆಯ ಕನಸಿನೊಂದಿಗೆ ಆಡಿಕೊಳ್ಳುತ್ತಿದ್ದು, ಅವರ ಆಶೋತ್ತರಗಳನ್ನು ಕೊಂದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ಧಾರೆ.
ತೆಲಂಗಾಣ ರಾಜ್ಯ ಲೋಕಸೇವಾ ಆಯೋಗ (TSPSC) ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ 23 ವರ್ಷದ ಯುವತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಕೆಸಿಆರ್ ನೇತೃತ್ವದ ಬಿಆರ್ಎಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಳೆದ 10 ವರ್ಷಗಳಲ್ಲಿ ಬಿಜೆಪಿ ಸಂಬಂಧ ಸಮಿತಿಯಾದ ಬಿಆರ್ಎಸ್ ಹಾಗೂ ಬಿಜೆಪಿಯ ಅಸಮರ್ಥತೆಯಿಂದಾಗಿ ರಾಜ್ಯವನ್ನು ಹಾಳು ಮಾಡಿದೆ. ತೆಲಂಗಾಣದಲ್ಲಿ ನಾವು ಸರ್ಕಾರ ರಚಿಸಿದರೆ ಉದ್ಯೋಗ ಕ್ಯಾಲೆಂಡರ್ ಬಿಡುಗಡೆ ಮಾಡುತ್ತೇವೆ. 1 ತಿಂಗಳಲ್ಲಿ ಯುಪಿಎಸ್ಸಿ ಮಾದರಿಯಲ್ಲಿ ಟಿಎಸ್ಪಿಎಸ್ಸಿ ಮರುಸಂಘಟನೆ ಮತ್ತು ಒಂದು ವರ್ಷದೊಳಗೆ ಖಾಲಿ ಇರುವ 2 ಲಕ್ಷ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ. ಇದು ಕಾಂಗ್ರೆಸ್ನ ಗ್ಯಾರಂಟಿ ಎಂದಿದ್ದಾರೆ.
ಇದನ್ನೂ ಓದಿ: ಬಾಯ್.. ಬಾಯ್ ಇಮಾಮ್ ಉಲ್ ಹಕ್, ಇಲ್ಲಿಗೆ ಬಂದಿದ್ದಕ್ಕೆ ಧನ್ಯವಾದ ಎಂದ ಹಾರ್ದಿಕ್ ಪಾಂಡ್ಯ; ವಿಡಿಯೋ ವೈರಲ್
ಯುವತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದು, ಆಡಳಿತರೂಢ ಬಿಆರ್ಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಲೋಕಸೇವಾ ಆಯೋಗದ ಪರೀಕ್ಷೆಯನ್ನು ಪದೇ ಪದೇ ಮುಂದೂಡಿದ್ದಕ್ಕೆ ಮನನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ತಿಳಿದು ಆಘಾತವಾಗಿದೆ.
ಬಿಆರ್ಎಸ್ ಸರ್ಕಾರದ ಹತಾಶ ಮನೋಭಾವದಿಂದಾಗಿ ಯುವಜನತೆಯ ಬಾಳು ಕತ್ತಲೆಯಲ್ಲಿ ಕಳೆಯುವಂತೆ ಮಾಡಿದೆ. ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಯುವಕರು ಭ್ರಷ್ಟ, ಅಸಮರ್ಥ ಬಿಆರ್ಎಸ್ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ವರ್ಷಾಂತ್ಯದಲ್ಲಿ ತೆಲಂಗಾಣ ರಾಜ್ಯ ವಿಧಾನಸಭೆ ಚುನಾವಣೆ ನಡೆಯಲಿದ್ದು, ನವೆಂಬರ್ 30ರಂದು ಮತದಾನ ನಡೆಯಲಿದೆ. ಡಿಸೆಂಬರ್ 3ಕ್ಕೆ ಫಲಿತಾಂಶ ಪ್ರಕಟವಾಗಲಿದೆ.