ರಬಕವಿ-ಬನಹಟ್ಟಿ: ತಾಲೂಕಿನ ಸಾವರಿನ್ ಸಕ್ಕರೆ ಕಾರ್ಖಾನೆ 2017-18ನೇ ಸಾಲಿನ ಕಬ್ಬಿನ ಬಾಕಿ ಹಣವನ್ನು ರೈತರಿಗೆ ಇದುವರೆಗೆ ಪಾವತಿಸಿಲ್ಲ. ಈ ಕುರಿತು ಕ್ರಮ ಕೈಗೊಳ್ಳಲು ಸರ್ಕಾರ, ಸಂಬಂಧಿತ ಜನಪ್ರತಿನಿಧಿಗಳು ನಿರ್ಲಕ್ಷೃವಹಿಸಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಜಿಪಂ ಉಪಾಧ್ಯಕ್ಷ, ರೈತ ಮುಖಂಡ ಮುತ್ತಪ್ಪ ಕೋಮಾರ ಹೇಳಿದರು.
ರಬಕವಿಯ ಜಿಎಲ್ಬಿಸಿ ತಂಗುದಾಣದಲ್ಲಿ ಶನಿವಾರ ದಿಢೀರ್ ನಡೆಸಿದ ಸಭೆಯಲ್ಲಿ ಮಾತನಾಡಿ, ಅಂದಾಜು 1500 ರೈತರ 21 ಕೋಟಿ ರೂ. ಬಿಡುಗಡೆಗೊಳಿಸುವಲ್ಲಿ ಜನಪ್ರತಿನಿಧಿಗಳು ಮಧ್ಯಸ್ಥಿಕೆ ವಹಿಸಬೇಕು. ಇಬ್ಬರು ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ ಅವರಿಗೆ ಕಾರ್ಖಾನೆ ಹಾಗೂ ರೈತರ ಪರಿಸ್ಥಿತಿ ಬಗ್ಗೆ ಸಂಪೂರ್ಣ ಮಾಹಿತಿಯಿದ್ದರೂ ಯಾವುದೇ ಸಹಕಾರ ನೀಡದಿರುವುದು ವಿಪರ್ಯಾಸದ ಸಂಗತಿಯಾಗಿದೆ. ಕೂಡಲೇ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಿ ತೀವ್ರ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಗಂಗಾಧರ ಮೇಟಿ, ತಾಲೂಕಾಧ್ಯಕ್ಷ ಹೊನ್ನಪ್ಪ ಬಿರಡಿ, ಶ್ರೀಕಾಂತ ಘೂಳನ್ನವರ, ಶಿವಾನಂದ ಚೌಗಲಾ, ನಾಗೇಶ ಚಿನವಾರ, ಬಸವಂತ ಕಾಂಬಳೆ, ಮಲ್ಲು ಬರವ, ಅಲ್ಲಪ್ಪ ಆರೆನ್ನಾಡ, ಲಕ್ಷ್ಮಣ ಬ್ಯಾಳಿ, ಬಂದು ಪಕಾಲಿ, ಸುರೇಶ ಢವಳೇಶ್ವರ ಸೇರಿ ಅನೇಕರಿದ್ದರು.
ಕಾರ್ಖಾನೆ ಹರಾಜಿಗೆ ತೊಡಕು
ಸಾವರಿನ್ ಸಕ್ಕರೆ ಕಾರ್ಖಾನೆ ಸಂಬಂಧ 20 ಕೋಟಿ ರೂ. ರೈತರ ಕಬ್ಬಿನ ಬಿಲ್ ಬಾಕಿಯಿದೆ. ಅಪೆಕ್ಸ್ ಬ್ಯಾಂಕ್ ಸೇರಿ ಇತರ ಬ್ಯಾಂಕ್ಗಳು ಈಗಾಗಲೇ ಕಾರ್ಖಾನೆಗೆ ಸಾಲ ನೀಡಿದ್ದು ಕಾರ್ಖಾನೆ ಹರಾಜಿಗೆ ಕಾನೂನು ತೊಡಕಾಗಿದೆ.
ಸರ್ಕಾರದಿಂದ ಬ್ಯಾಂಕ್ಗೆ ತಿಳಿಸಲಾಗಿದೆ. ರೈತರ ಬಾಕಿ ಹಣ ನೀಡಿದಲ್ಲಿ ತಮ್ಮ ಸುಪರ್ದಿಗೆ ಬಿಟ್ಟು ಕೊಡುವುದಾಗಿ ತಿಳಿಸಿದ್ದು, ಬ್ಯಾಂಕ್ನ ಉತ್ತರದ ನಿರೀಕ್ಷೆಯಲ್ಲಿದ್ದೇವೆ. ಮುಂದಿನ ಮಾರ್ಗಸೂಚಿಯಂತೆ ಕಾರ್ಯ ನಿರ್ವಹಿಸಿ ರೈತರಿಗೆ ನ್ಯಾಯ ಒದಗಿಸಲಾಗುವುದು ಎಂದು ಉಪವಿಭಾಗಾಧಿಕಾರಿ ಸಿದ್ದು ಹುಲ್ಲೋಳ್ಳಿ ತಿಳಿಸಿದ್ದಾರೆ.