ರಬಕವಿ/ಬನಹಟ್ಟಿ: ಎಲ್ಲ ಧರ್ಮಕ್ಕಿಂತ ಮಾನವ ಧರ್ಮ ಶ್ರೇಷ್ಠವಾದುದು ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಇಬ್ರಾಹಿಂ ಸುತಾರ್ ಹೇಳಿದರು.
ಭಾನುವಾರ ರಬಕವಿಯ ಎಂ.ವಿ. ಪಟ್ಟಣ ಪಪೂ ಕಾಲೇಜಿನಲ್ಲಿ ಬೆಂಗಳೂರಿನ ಇನ್ಪೋಸಿಸ್ ಸಮರ್ಪಣ ಸಂಸ್ಥೆ ಯವರು ಶಾಲೆಗಳಿಗೆ ಉಚಿತವಾಗಿ ಕೊಡಮಾಡುವ ವಿಜ್ಞಾನ ಕಿಟ್ಗಳ ವಿತರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಯಾವ ಧರ್ಮದಲ್ಲಿ ಮಾನವೀಯ ಮೌಲ್ಯಗಳಿವೆಯೋ ಅದೇ ಮಾನವ ಧರ್ಮ. ನಾವು ಆಕಾರದಲ್ಲಿ ಮಾತ್ರ ಮಾನವನಾದರೆ ಸಾಲದು, ಆಚಾರದಲ್ಲೂ ಮಾನವರಾಗಬೇಕು. ಇನ್ನೊಬ್ಬರಿಗೆ ನನ್ನಿಂದ ನೋವಾಗಬಾರದು ಎನ್ನುವುದೇ ಮಾನವ ಧರ್ಮ ಎಂದವರು ಹೇಳಿದರು.
ರಬಕವಿ ನಗರದ ಡಾ.ಪದ್ಮಜೀತ ನೌಡಗೌಡ ಪಾಟೀಲ ಮಾತನಾಡಿ, ಪಂಚೇಂದ್ರಿಯಗಳಲ್ಲಿ ನೇತ್ರ ಬಹಳ ಮಹತ್ವದ್ದು. ನಮ್ಮ ಬುದ್ದಿಗೆ ಏನಾದರೂ ತಿಳಿಬೇಕಾದರೆ ಮೊದಲು ಕಣ್ಣು ಬೇಕು. ಕಣ್ಣು ನೋಡಿ ಮೆದುಳಿಗೆ ಸಂದೇಶ ಕಳುಹಿಸುತ್ತದೆ. ತೇರದಾಳ ಮತಕ್ಷೇತ್ರ ವ್ಯಾಪ್ತಿಯ ವಿವಿಧ ಶಾಲೆಗಳ 12 ವರ್ಷದೊಳಗಿನ ಎಲ್ಲ ಬಡ ಮಕ್ಕಳಿಗೆ ಉಚಿತವಾಗಿ ನೇತ್ರ ಚಿಕಿತ್ಸೆ ನೀಡಲಾಗುವುದು ಎಂದರು.
ರಬಕವಿ ಎಜ್ಯುಕೇಶನ್ ಸೊಸೈಟಿ ಚೇರ್ಮನ್ ಬಿ. ಎಂ. ಪಟ್ಟಣ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಂಸ್ಥೆಯ ವಾಯಿಸ್ ಚೇರ್ಮನ್ ಮಲ್ಲಿಕಾರ್ಜುನ ಸಾಬೋಜಿ, ಶ್ರೀನಿಧಿ ಬ್ಯಾಂಕ್ನ ಚೇರ್ಮನ್ ಮಲ್ಲಿಕಾರ್ಜುನ ನಾಶಿ ಆಗಮಿಸಿದ್ದರು. ಇನ್ಪೋಸಿಸ್ ಸಂಸ್ಥೆಯ ಬಿ.ಜಗದೀಶ, ಎಸ್.ಟಿ. ಗೋಠೆ, ಎಸ್.ಎಂ. ಮಟ್ಟಿಕಲ್ಲಿ, ಬಿ.ಆರ್. ಹೊಸಮನಿ, ಬಿ.ಎನ್. ದುರಡಿ, ಸಾಗರ ಸಾಬೋಜಿ, ರಾಜು ಸಾಬೋಜಿ, ಸಂಜಯ ಅಮ್ಮಣಗಿಮಠ, ಸಿ.ಎಂ. ಸಾಬೋಜಿ, ಬಿ.ಎಸ್. ಪಾಟೀಲ, ಪಾರ್ವತಿ ಸಾಬೋಜಿ, ಅಶೋಕ ಚಿಕ್ಕೋಡಿ, ಎಂ.ಎಸ್. ತಳವಾರ, ಜಿ.ವಿ. ಮಂಜುನಾಥ, ರಾಜೇಶ ನೋಟದ, ಮಹಾಂತೇಶ ಮುರಗೋಡ, ಯಶವಂತ ವಾಜಂತ್ರಿ, ಮಲ್ಲಿಕಾರ್ಜುನ ಗಡೆನ್ನವರ, ಎಸ್.ಬಿ. ಮೋಮಿನ್ ಮತ್ತಿತರು ಉಪಸ್ಥಿತರಿದ್ದರು.