ರಬಕವಿ/ಬನಹಟ್ಟಿ: ರಾಜ್ಯದ ನೇಕಾರರ ಸಮಸ್ಯೆಗಳನ್ನು ಹೊತ್ತು ಬೆಳಗಾವಿಗೆ ತೆರಳಿದ್ದ ನೂರಾರು ನೇಕಾರರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಶುಕ್ರವಾರ ಮನವಿ ಸಲ್ಲಿಸಿದರು.
ನೇಕಾರರ ಸಾಲಮನ್ನಾ ಯೋಜನೆ, ಶೇ.1 ಮತ್ತು 3ರ ಬಡ್ಡಿ ರಿಯಾಯಿತಿಯಲ್ಲಿ ಯೋಜನೆ, ವಿದ್ಯುತ್ ಮಗ್ಗ ಘಟಕಗಗಳಿಗೆ ರಿಯಾಯಿತಿ ದರದಲ್ಲಿ ವಿದ್ಯುತ್ ಸೌಲಭ್ಯ, ನೇಕಾರರ ಉತ್ಪನ್ನಗಳ ಮೇಲೆ ಜಿಎಸ್ಟಿ ಹೆಚ್ಚಳ ಮಾಡದಿರುವುದು ಸೇರಿ ಹಲವಾರು ತೊಂದರೆಗಳನ್ನು ನಿವಾರಣೆ ಮಾಡುವಂತೆ ಒತ್ತಾಯಿಸಿದರು.
ಮುಖ್ಯಮಂತ್ರಿ ಅವರು ಸಮಸ್ಯೆಗಳನ್ನು ಆಲಿಸಿ ನೇಕಾರ ಸಮುದಾಯಕ್ಕೆ ಪೂರಕವಾಗುವಂತಹ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಕ್ಯಾಷ ಕ್ರೆಡಿಟ್ (ಸಿಸಿ) ಸಾಲ ಮನ್ನಾ ಆಗದಿರುವುದು, ಶೇ.1 ಮತ್ತು ಶೇ.3ರ ಬಡ್ಡಿದರದ ಸಾಲವನ್ನು ಪ್ರತಿ ಮಗ್ಗಕ್ಕೆ 25 ಸಾವಿರ ರೂ. ಬದಲಾಗಿ 45 ಸಾವಿರ ರೂ. ಹೆಚ್ಚಳ, 2 ಲಕ್ಷ ರೂ. ವರೆಗೆ ಪಡೆಯುವ ಸಾಲಕ್ಕೆ ಕಚ್ಚಾ ಮಾಲು ಖರೀದಿ ಬಿಲ್ ವಿನಾಯಿತಿಯನ್ನು 5 ಲಕ್ಷ ರೂ. ವರೆಗೆ ವಿಸ್ತರಿಸಿ ಮರು ಪಾವತಿಯನ್ನು 3 ವರ್ಷಕ್ಕೆ ಹೆಚ್ಚಳ ಮಾಡುವುದು, ನೇಕಾರ ಕಲ್ಯಾಣ ನಿಧಿಯಲ್ಲಿ ಕಿಡ್ನಿ, ಕ್ಯಾನ್ಸರ್, ಹೃದಯ ರೋಗಗಳ ಚಿಕಿತ್ಸೆಗೆ 50 ಸಾವಿರ ರೂ. ಸಹಾಯಧನವನ್ನು 2 ಲಕ್ಷ ರೂ. ವರೆಗೆ ಹೆಚ್ಚಿಸುವುದು, ರೈತರಂತೆ 20 ಎಚ್ಪಿವರೆಗೆ ಉಚಿತ ವಿದ್ಯುತ್ ಪೂರೈಕೆ ಹಾಗೂ ಮಗ್ಗಗಳ ಘಟಕಗಳ ನಿಗದಿತ ಶುಲ್ಕ ಕೈಬಿಡುವುದು, ಶೂನ್ಯ ಬಡ್ಡಿ ದರದಲ್ಲಿ ಸಾಲ, ನೇಕಾರರ ವಿದ್ಯಾನಿಧಿ ಯೋಜನೆ ರೂಪಿಸುವುದು ಸೇರಿ ಹಲವಾರು ಬೇಡಿಕೆಗಳನ್ನು ಮುಖ್ಯಮಂತ್ರಿ ಗಮನಕ್ಕೆ ತರಲಾಯಿತು.
ಶಾಸಕ ಸಿದ್ದು ಸವದಿ, ಸಂಜಯ ಜವಳಗಿ, ಪ್ರಭು ಉಮದಿ, ಮಲ್ಲಿಕಾರ್ಜುನ ಬೆಳಗಲಿ, ಸುರೇಶ ವಜ್ಜರಮಟ್ಟಿ ಇತರರಿದ್ದರು.